ಜೆಡಿಎಸ್ ಜೊತೆಗೆ ಫ್ರೆಂಡ್ಲಿಫೈಟ್
Team Udayavani, Aug 25, 2018, 11:33 AM IST
ಮೈಸೂರು: ಜೆಡಿಎಸ್ ಜೊತೆಗೆ ವಿಧಾನಸೌಧದಲ್ಲಿ ದೋಸ್ತಿ ಮಾಡಿಕೊಂಡಿದ್ದರೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮದು ಫ್ರೆಂಡ್ಲಿಫೈಟ್ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ನಗರದಲ್ಲಿ ಶುಕ್ರವಾರ ಮೈಸೂರು ಮಹಾ ನಗರಪಾಲಿಕೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ಹೊರಡಿಸಿರುವ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಫ್ರೆಂಡ್ಲಿಫೈಟ್ ಎಂಬುದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ, ಚುನಾವಣಾ ಕಣಕ್ಕಿಳಿದ ಮೇಲೆ ಗೆಲುವಿಗಾಗಿ ಪ್ರಯತ್ನ ಮಾಡಿಯೇ ಮಾಡುತ್ತೇವೆ. ಆದರೆ, ಸರ್ಕಾರಕ್ಕೆ ಮುಜುಗರವಾಗದ ರೀತಿಯಲ್ಲಿ ನಮ್ಮ ಹೋರಾಟ ಇರುತ್ತದೆ. ಸರ್ಕಾರದ ವಿರುದ್ಧ ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳವರು ಪರಸ್ಪರ ಟೀಕಾ ಪ್ರಹಾರ ಮಾಡಲ್ಲ ಎಂದರು.
ಹಳೇ ಮೈಸೂರು ಭಾಗದ ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಜೆಡಿಎಸ್ ಪಕ್ಷದ ಸಂಘಟನೆಯೂ ಬಲವಾಗಿದೆ, ಹೀಗಾಗಿ ಈ ಚುನಾವಣೆ ಇಬ್ಬರ ನಡುವೆ ತೀವ್ರ ಪೈಪೋಟಿಯೇ ನಡೆಯಲಿದೆ. ಬಹುಮತಕ್ಕಾಗಿ ನಾವು ಒಂದಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಮೈಸೂರು ಮಹಾ ನಗರಪಾಲಿಕೆಯ ಅಧಿಕಾರ ಹಿಡಿಯಲು ನಾವು ಒಂದಾಗಿ ಕೆಲಸ ಮಾಡುತ್ತೇವೆ, ಹಿಂದಿನ ಐದು ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೈಸೂರು ನಗರದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಅನುದಾನ ನೀಡಿದ್ದಾರೆ. ಪಾಲಿಕೆಯ ಆಡಳಿತ ಹಿಡಿದು ಮೈಸೂರು ನಗರವನ್ನು ಇನ್ನೂ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಣಾಳಿಕೆ ಬಿಡುಗಡೆ: ಘನತ್ಯಾಜ್ಯ ವಸ್ತುಗಳ ವೈಜ್ಞಾನಿಕ ನಿರ್ವಹಣೆ, 24/7 ಕುಡಿಯುವ ನೀರು ಸರಬರಾಜು, ಸಾರ್ವಜನಿಕರ ಆರೋಗ್ಯ ರಕ್ಷಣೆ ಹಾಗೂ ಚಿಕಿತ್ಸೆ, ಹಸರೀಕರಣ ಮತ್ತು ಸಾಮಾಜಿಕ ಅರಣ್ಯಕ್ಕೆ ಒತ್ತು, ನಗರದ ಎಲ್ಲಾ ವಾರ್ಡ್ಗಳಲ್ಲಿ ಗ್ರಂಥಾಲಯಗಳ ಸ್ಥಾಪನೆ.
ಬಸ್ ನಿಲ್ದಾಣ ಸ್ಥಳಾಂತರ: ನಗರ ಸಾರಿಗೆ ಬಸ್ ನಿಲ್ದಾಣವನ್ನು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಿ, ಗ್ರಾಮಾಂತರ ಬಸ್ ನಿಲ್ದಾಣವನ್ನು ಬನ್ನಿಮಂಟಪದಲ್ಲಿರುವ ಬಸ್ ಡಿಪೋ ಜಾಗಕ್ಕೆ ಸ್ಥಳಾಂತರಿಸುವ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.