ನಾನು ಎಲ್ಲಿರಬೇಕೆಂದು ಜನರು ತೀರ್ಮಾನ ಮಾಡುತ್ತಾರೆ: ಜಿ.ಟಿ.ದೇವೇಗೌಡ
Team Udayavani, Nov 7, 2021, 2:36 PM IST
ಮೈಸೂರು: ನಾನು ಜೆಡಿಎಸ್ ನಲ್ಲಿ ಇರಬೇಕೆ- ಬೇಡವೇ ಎನ್ನುವುದನ್ನು ಜನರು ತೀರ್ಮಾನ ಮಾಡುತ್ತಾರೆ. ಕ್ಷೇತ್ರದ ಮತದಾರರು ಹೇಳಿದ ಮಾತನ್ನು ಕೇಳುತ್ತೇನೆ. ಕುಮಾರಸ್ವಾಮಿ ಅವರ ಯಾವುದೇ ಅಭಿಪ್ರಾಯವಿದ್ದರು ನನ್ನ ನಿರ್ಧಾರ ಬದಲಾಗುವುದಿಲ್ಲ. ನಾನು ಎಲ್ಲಿರಬೇಕೆಂದು ಜನರು ತೀರ್ಮಾನ ಮಾಡುತ್ತಾರೆ ಎಂದು ಶಾಸಕ ಜಿ.ಟಿ.ದೇವೇಗೌಡಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದಾಗ ನನಗೆ ಆಹ್ವಾನ ಇರಲಿಲ್ಲ. ಬೆಳವಾಡಿ ದೇವಾಲಯಕ್ಕೆ ಹಣವನ್ನು ನೀಡಿದ್ದೆ. ಆದರೂ ಆಹ್ವಾನ ಮಾಡಲಿಲ್ಲ. ಅದೇ ರೀತಿ ರಮ್ಮನಹಳ್ಳಿಗೂ ಆಹ್ವಾನ ಮಾಡಲಿಲ್ಲ. ಇದೀಗ ಕ್ಷೇತ್ರದಲ್ಲಿ ಕೆಲವು ಕಾಮಗಾರಿ ಉದ್ಘಾಟನೆ ನಡೆಯುತ್ತಿದೆ. ಅದಕ್ಕೆ ಸಿದ್ದರಾಮಯ್ಯ ಬರುತ್ತಿದ್ದಾರೆ. ಸ್ಥಳಿಯ ಶಾಸಕನಾಗಿ ನಾನು ಭಾಗಿಯಾಗುತ್ತಿದ್ದೇನೆ. ಕ್ಷೇತ್ರದ ಜನರು ಕರೆದಾಗ ನಾನು ಹೋಗಲೇ ಬೇಕು ಎಂದರು.
ಇದನ್ನೂ ಓದಿ:ನಾನು ಹೆಸರಿಗಷ್ಟೇ ಸ್ಪೀಕರ್, ಆದರೆ ಮಾತನಾಡುವವರು ಬೇರೆ! ಕಾಗೇರಿ
ಈ ಹಿಂದೆ ಕೂಡ ಸಿದ್ದರಾಮಯ್ಯರ ಜೊತೆ ವೇದಿಕೆ ಹಂಚಿಕೊಂಡಿದ್ದೆ. ಬೊಮ್ಮಾಯಿ ಅವರು ಬಂದಾಗಲು ಅವರ ಜೊತೆ ವೇದಿಕೆ ಹಂಚಿಕೊಂಡಿದ್ದೆ. ಆದರೆ ನಾನು ಪಕ್ಷ ಸೇರುವುದು ಬಿಡುವುದು ಎಲ್ಲವೂ ಜನರಿಗೆ ಬಿಟ್ಟಿದ್ದು. ನಾನು ಈ ಬಗ್ಗೆ ಕ್ಷೇತ್ರದ ಜನರ ಬಳಿ ಅಭಿಪ್ರಾಯ ಕೇಳಿಲ್ಲ. ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿದೆ. ಎಲ್ಲವೂ ಮತದಾರ ತೀರ್ಮಾನದಂತೆ ನಡೆಯುತ್ತದೆ ಎಂದು ಜಿಟಿಡಿ ಹೇಳಿದರು.