ಕಾಂಗ್ರೆಸ್ಗೆ ಜೆಡಿಎಸ್ ಎದುರಾಳಿ, ಬಿಜೆಪಿ ಆಟಕ್ಕುಂಟು ಲೆಕ್ಕಕಿಲ್ಲ
Team Udayavani, Nov 13, 2019, 3:00 AM IST
ಹುಣಸೂರು: ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಜೆಡಿಎಸ್ ಎದುರಾಳಿಯಾಗಿದ್ದು, ಮೇಲ್ನೋಟಕ್ಕೆ ಬಿಜೆಪಿ ರೇಸ್ನಲ್ಲಿರುವಂತೆ ಕಾಣುತ್ತದೆ. ಹಲವಾರು ಚುನಾವಣೆ, ಉಪ ಚುನಾವಣೆಯನ್ನು ಕಂಡಿರುವ ತಮಗೆ ಎಲ್ಲವನ್ನೂ ಎದುರಿಸುವ ಶಕ್ತಿ ಇದೆ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಕಳೆದ ಚುನಾವಣೆಯಲ್ಲಿ ಅಪಪ್ರಚಾರದಿಂದ ಸೋತಿದ್ದೇನೆ. ಹೀಗಾಗಿ ಪಕ್ಷದ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಯಾರನ್ನೂ ಟೀಕಿಸುವುದು, ಹೀಯಾಳಿಸುವುದು ಬೇಡ, ಬದಲಿಗೆ ತಾವು ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಿ ಎಂದು ಮನವಿ ಮಾಡಿದರು.
ಈ ಬಾರಿ ಕೈಬಡಲ್ಲ: ತಮ್ಮ ಶಾಸಕತ್ವದ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದು,, ಇದು ಜನಮಾನಸದಲ್ಲಿ ಹಾಸುಹೊಕ್ಕಿದೆ. ತಾವು ಎಲ್ಲಾ ಧರ್ಮ, ಸಮುದಾಯಗಳೊಂದಿಗೆ ವಿಶ್ವಾಸದಲ್ಲಿದ್ದು, ಸೋತರೂ ಕೂಡ ಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದೇನೆ. ಈ ಬಾರಿ ಕೈಬಿಡುವುದಿಲ್ಲ ಎಂದುವಿಶ್ವಾಸ ವ್ಯಕ್ತಪಡಿಸಿದರು.
15ರಿಂದ ಪ್ರಚಾರ: ನಾನು, ನನ್ನ ತಾಲೂಕು, ನನ್ನ ಜನ ಎಂಬ ಸಿದ್ಧಾಂತದಡಿ ಈವರೆವಿಗೂ ಜನಸೇವೆ ಮಾಡಿಕೊಂಡು ಬಂದಿದ್ದು, ನ.15 ಶುಕ್ರವಾರ ಬಿಳಿಕೆರೆ ಹೋಬಳಿಯ ಕೊಮ್ಮೇಗೌಡನಕೊಪ್ಪಲಿನ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಪ್ರಚಾರ್ಯ ಕಾರ್ಯ ಆರಂಭಿಸಲಾಗುವುದು. ನಂತರ ಎಲ್ಲಾ 274 ಬೂತ್ಗಳಲ್ಲೂ ದಿನಕ್ಕೆ ನಾಲ್ಕು ಗ್ರಾಮ ಪಂಚಾಯ್ತಿಗಳಂತೆ ಭೇಟಿ ನೀಡಲಾಗುವುದು ಹಾಗೂ ಕೊನೆಯ ನಾಲ್ಕುದಿನ ನಗರದಲ್ಲಿ ಪ್ರಚಾರ ನಡೆಸಿ ಮತಯಾಚಿಸಲಾಗುವುದು ಎಂದರು.
ತಮ್ಮ ಪರ ಪಕ್ಷದ ರಾಜ್ಯಾಧ್ಯಕ್ಷ ದಿನೇಶ್ಗುಂಡೂರಾವ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಡಿ.ಕೆ.ಶಿವಕುಮಾರ್, ಮಹದೇವಪ್ಪ, ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್ ಸೇರಿದಂತೆ ಪಕ್ಷದ ಎಲ್ಲ ನಾಯಕರು ಪ್ರಚಾರಕ್ಕೆ ಆಗಮಿಸುವರು, ಕೆ.ಪಿ.ಸಿ.ಸಿ.ಉಸ್ತುವಾರಿಯಾಗಿ ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ಆರ್ ಧ್ರುವನಾರಾಯಣ್, ವೆಂಕಟೇಶ್, ಅನಿಲ್ ಚಿಕ್ಕಮಾದು, ಡಾ.ಯತೀಂದ್ರ, ರಾಣಿ ಸತೀಶ್, ಡಿಸಿಸಿ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮತ್ತಿತರರು ಚುನಾವಣಾ ಉಸ್ತುವಾರಿವಹಿಸುವರು.
ಬಿಜೆಪಿ ವಿರೋಧಿ ಅಲೆ: ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಸ್ವಹಿತಕ್ಕಾಗಿ ರಾಜೀನಾಮೆ ನೀಡಿರುವ ಎಲ್ಲಾ ಕ್ಷೇತ್ರಗಳಲ್ಲೂ ಅವರಿಗೆ ಜನ ವಿರೋಧವಿದೆ. ಕಾಂಗ್ರೆಸ್ಗೆ ಜನಾಭಿಪ್ರಾಯವಿದ್ದು, ದೊಡ್ಡ ಅಲೆಯೇ ಎದ್ದಿದೆ. ಇದನ್ನು ಸರಕಾರವೇ ನಡೆಸಿರುವ ಸರ್ವೆ, ಇಂಟಲಿಜನ್ಸ್ ವರದಿಯಿಂದ ಬಹಿರಂಗವಾಗಿದೆ.
ತಾವು ಈ ಚುನಾವಣೆಯನ್ನು ಪಕ್ಷವು ಗಂಭೀರವಾಗಿ ಪರಿಗಣಿಸಿದ್ದು, ಮುಂದೆ ತಾಲೂಕಿನ ದೊಡ್ಡ ಗುಂಪೊಂದು ಪಕ್ಷ ಸೇರಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಸದಸ್ಯರಾದ ಕಟ್ಟನಾಯಕ, ಸಾವಿತ್ರಿ ಮಂಜು, ತಾಪಂ ಅಧ್ಯಕ್ಷೆ ಪದ್ಮಮ್ಮ, ತಾಲೂಕು ಕಾಂಗ್ರೆಸ್ ಮುಖಂಡರಾದ ನಾರಾಯಣ್, ಶಿರೇನಹಳ್ಳಿ ಬಸವರಾಜು, ಜಯರಾಮ್ ಇತರರಿದ್ದರು.
ಇಂದು ನಾಮಪತ್ರ ಸಲ್ಲಿಕೆ: ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತಾವು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳೇ ತಮಗೆ ಶ್ರೀರಕ್ಷೆಯಾಗಿದೆ. ಬುಧವಾರ ಬೆಳಗ್ಗೆ ಬಿಳಿಕೆರೆಯ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗುವುದು.
ಬಳಿಕ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಮತ್ತು ಮಾಜಿ ಶಾಸಕ ದಿ.ಚಿಕ್ಕಮಾದು ಸಮಾಧಿಗೆ ನಮನ ಸಲ್ಲಿಸಿದ ನಂತರ ಕನ್ಯಕಾಪರಮೇಶ್ವರಿ ದೇವಾಲಯ, ಸಾಯಿಬಾಬ ಮಂದಿರದಲ್ಲಿ ಪೂಜೆ ಸಲ್ಲಿಸಿದ ನಂತರ ಬೆಳಗ್ಗೆ 10ಗಂಟೆಗೆ ಕಾಂಗ್ರೆಸ್ ಕಚೇರಿಯಲ್ಲಿ ನಡೆಯುವ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಲಾಗುವುದು. ನಂತರ ತಾಲೂಕು ಕಚೇರಿಗೆ ತೆರಳಿ 11 ರಿಂದ 12 ಗಂಟೆಯೊಳಗೆ ನಾಮಪತ್ರ ಸಲ್ಲಿಸಲಾಗುವುದು ಎಂದು ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ತಿಳಿಸಿದರು.