ಕೋವಿಡ್ ವಾರಿಯರ್ಸ್ ಗಳಿಗೆ ಸರಕಾರ ಪ್ಯಾಕೇಜ್ ಘೋಷಿಸಲಿ : ಡಾ.ಪುಷ್ಪಅಮರ್ನಾಥ್
Team Udayavani, May 13, 2021, 9:41 AM IST
ಹುಣಸೂರು: ದಾದಿಯರ ಸೇವೆಯನ್ನು ಪರಿಗಣಿಸಿ ಪ್ಯಾಕೇಜ್ ಘೋಷಿಸಬೇಕೆಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಅಮರ್ನಾಥ್ ಒತ್ತಾಯಿಸಿದರು.
ವಿಶ್ವ ದಾದಿಯರ ದಿನಾಚರಣೆ ಅಂಗವಾಗಿ ರಾಜ್ಯ ಮಹಿಳಾ ಕಾಂಗ್ರೆಸ್ ವತಿಯಿಂದ ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ದಾದಿಯರು ಹಾಗೂ ಮಹಿಳಾ ವೈದ್ಯರಿಗೆ ಹೂಮಾಲೆ ಹಾಕಿ, ಎಲ್ಲಾ ದಾದಿಯರಿಗೂ ಸೀರೆಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿದ ಅವರು ಬಿಜೆಪಿ ಸರಕಾರದ ಮುಖ್ಯಮಂತ್ರಿ ಯಡಿಯೂರಪ್ಪನವರು ಕೋವಿಡ್ ವಾರಿಯರ್ಸ್ ಗೆ ಕಳೆದ ಬಾರಿ ಘೋಷಿಸಿದಂತೆ ದಾದಿಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಸೇರಿದಂತೆ ಎಲ್ಲ ಫ್ರಂಟ್ ಲೈನ್ ಕಾರ್ಯಕರ್ತರಿಗೂ ಸಹ ಸಬೂಬು ಹೇಳದೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಜೊತೆಗೆ ವಿತರಣೆಗೆ ಕ್ರಮವಹಿಸಬೇಕೆಂದು ಆಗ್ರಹಿಸಿದರು.
ತಮ್ಮ ಜೀವ, ಕುಟುಂಬವನ್ನು ಲೆಕ್ಕಿಸದೆ ಹಗಲಿರುಳು ಕೋವಿಡ್ ಸೋಂಕಿತರ ಸೇವೆ ಸಲ್ಲಿಸುತ್ತಿರುವ ಕೋವಿಡ್ ವಾರಿಯರ್ಸ್ಗಳಾದ ದಾದಿಯರನ್ನು ಸರಕಾರ ಪ್ರಂಟ್ಲೈನ್ ವಾರಿಯರ್ಸ್ ಗಳೆಂದು ಘೋಷಿಸಿ, ಮತ್ತೊಂದೆಡೆ ಯಾವೊಂದು ಸೌಲಭ್ಯವನ್ನು ನೀಡದೆ ಕಾರ್ಯನಿರ್ವಹಿಸಬೇಕೆಂಬ ಆದೇಶವನ್ನು ಜಾರಿಗೊಳಿಸಿದ್ದು, ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಈ ವೇಳೆಯಲ್ಲಿ ಎಲ್ಲರೂ ಪಕ್ಷಾತೀತವಾಗಿ ದಾದಿಯರ ಕಾರ್ಯವನ್ನು ಸ್ಮರಿಸುವ ಕಾರ್ಯ ಆಗಬೇಕಿದೆ ಎಂದರು.
ಇದನ್ನೂ ಓದಿ:ಮತ್ತೆ 4 ಸಾವಿರ ದಾಟಿದ ಸಾವಿನ ಸಂಖ್ಯೆ: 24 ಗಂಟೆ ಅವಧಿಯಲ್ಲಿ 3,62,727 ಸೋಂಕು ಪ್ರಕರಣಗಳು
ದಿನಾಚರಣೆ ಅಂಗವಾಗಿ ಶಾಸಕ ಎಚ್.ಪಿ.ಮಂಜುನಾಥರ ಸೂಚನೆಯಂತೆ ಸಾರ್ವಜನಿಕ ಆಸ್ಪತ್ರೆಯ ದಾದಿಯರನ್ನು ಗೌರವಿಸಲಾಗುತ್ತಿದ್ದು. ಮುಂದೆ ತಾಲೂಕಿನ ಇನ್ನುಳಿದ ದಾದಿಯರನ್ನು ಗೌರವಿಸಲಾಗುವುದೆಂದರು. ವೈದ್ಯರಾದ ಡಾ.ಲತಾ, ಡಾ.ಗುರುಮಲ್ಲಪ್ಪ, ಮಾಲಿನಿ, ನವ್ಯಶ್ರೀ, ಮಂಜುಳ ಸೇರಿದಂತೆ 18 ಮಂದಿ ದಾದಿಯರನ್ನು ಗೌರವಿಸಲಾಯಿತು.
ಈ ವೇಳೆ ನಗರಸಭೆ ಅಧ್ಯಕ್ಷೆ ಅನುಷಾ ಎಸ್.ರಘು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಂದಿನಿ ದಿನೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಸ್ವರೂಪ್, ಕುಮಾರಸ್ವಾಮಿ,ಆಸ್ಪತ್ರೆಯ ರಕ್ಷಾಸಮಿತಿ ಸದಸ್ಯ ಮಂಜುನಾಥ ಮೊದಲಿಯಾರ್, ಮುಖಂಡರಾದ ವೇಣು, ಗೋಪಿ, ಖಾಸಿಫ್ಖಾನ್, ಬಿಳಿಕೆರೆ ಮಧು, ದರ್ಶನ್, ಗೌತಮ್ ಸೇರಿದಂತೆ ಅನೇಕರಿದ್ದರು.