ರೈಲ್ವೆ ಮಜ್ದೂರ್ ಯೂನಿಯನ್ ಪ್ರತಿಭಟನೆ
Team Udayavani, Sep 20, 2019, 5:13 PM IST
ಮೈಸೂರು: ಭಾರತೀಯ ರೈಲ್ವೆಯಲ್ಲಿ ಖಾಸಗೀಕರಣ ಮತ್ತು ಖಾಸಗೀಕರಣಕ್ಕಾಗಿ 100 ದಿನಗಳ ಕಾರ್ಯ ಯೋಜನೆಯನ್ನು ವಿರೋಧಿಸಿ ನೈಋತ್ಯ ರೈಲ್ವೆ ಮಜ್ದೂರ್ ಯೂನಿಯನ್ ಪ್ರತಿಭಟನೆ ನಡೆಸಿತು. ನಗರದ ಮೈಸೂರಿನ ರೈಲ್ವೆ ವಿಭಾಗೀಯ ಕಚೇರಿ ಮುಂಭಾಗ ನೈಋತ್ಯ ರೈಲ್ವೆ ಮಜ್ದೂರ್ ಯೂನಿಯನ್ ಸದಸ್ಯರು ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಪ್ರತಿಭಟಿಸಿದರು.
ರೈಲ್ವೆ ಸಚಿವಾಲಯದಿಂದ ಹೊರಡಿಸಲಾದ ಆದೇಶದ ಪ್ರಕಾರ ಎಲ್ಲಾ ಉತ್ಪಾದನಾ ಘಟಕಗಳನ್ನು ವರ್ಕ್ ಶಾಪ್ಗ್ಳನ್ನು 100 ದಿನಗಳ ಕಾರ್ಯ ಯೋಜನೆಯಲ್ಲಿ ಇಂಡಿಯನ್ ರೈಲ್ವೆ ರೋಲಿಂಗ್ ಸ್ಟಾಕ್ ಕಂಪನಿಗೆ ಹಸ್ತಾಂತರಿಸುವ ಆದೇಶವನ್ನು ಹಿಂಪಡೆಯಬೇಕು. ಕೆಲವೊಂದು ಆಯ್ದ ಗಾಡಿಗಳನ್ನು ಓಡಿಸುವುದಕ್ಕಾಗಿ ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸುವ ಆದೇಶವನ್ನು ಹಿಂಪಡೆಯಬೇಕು. ಖಾಸಗೀಕರಣ, ನಿಗಮೀಕರಣ, ಗುತ್ತಿಗೆಗಾರಿಕೆ, ಪ್ರಿಂಟಿಂಗ್ ಪ್ರಸ್ಗಳನ್ನು ಮುಚ್ಚುವ ಆದೇಶಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಎಲ್ಲಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವುದರ ಜೊತೆಗೆ ಹೊಸ ಪಿಂಚಣಿ ಪದ್ಧತಿ ರದ್ದುಗೊಳಿಸಿ ಹಳೆಯ ಪಿಂಚಣಿ ಪದ್ಧತಿ ಜಾರಿಗೊಳಿಸಬೇಕು. 55 ವಯಸ್ಸಾದ ಅಥವಾ 33 ವರ್ಷ ಸೇವೆ ಸಲ್ಲಿಸಿದ ಕಾರ್ಮಿಕರಿಗೆ ಕಡ್ಡಾಯ ನಿವೃತ್ತಿ ಹೆದರಿಕೆಯ ಆದೇಶವನ್ನು ಹಿಂಪಡೆಯಬೇಕು. ರೈಲ್ವೆಯಲ್ಲಿ ಉತ್ಪಾದನೆ ಮತ್ತು ಲಾಭ ಹೆಚ್ಚಾದಂತೆ ಉತ್ಪಾದನೆ ಆಧಾರಿತ ಬೋನಸ್ ಮಿತಿಯನ್ನು ಹೆಚ್ಚಿಸಬೇಕು. ಎಲ್ಲಾ ನೌಕರರ ತಂದೆ- ತಾಯಂದರಿಗೆ ವೈದ್ಯಕೀಯ ಹಾಗೂ ಪಾಸ್ ಸೌಲಭ್ಯ ಕಲ್ಪಿಸಬೇಕು ಎಂದು ತ್ತಾಯಿಸಿದರು. ಯೂನಿಯನ್ನ ವಿಭಾಗೀಯ ಕಾರ್ಯದರ್ಶಿ ಪಿ. ಶಿವಪ್ರಕಾಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.