ಹುಣಸೂರು : ವಿಜೃಂಭಣೆಯಿಂದ ನಡೆದ ಶ್ರೀದುರ್ಗಮ್ಮ-ಮರ್ಗಮ್ಮ ದೇವರ ಅಡ್ಡಪಲ್ಲಕ್ಕಿ ಉತ್ಸವ
Team Udayavani, Mar 25, 2021, 11:37 PM IST
ಹುಣಸೂರು : ಹುಣಸೂರು ನಗರದ ಸರಸ್ವತಿಪುರಂ ಬಡಾವಣೆ ನಿವಾಸಿಗಳ ಆರಾಧ್ಯ ದೈವ ಶ್ರೀದುರ್ಗಮ್ಮ-ಮರ್ಗಮ್ಮ ದೇವರ ಅಡ್ಡಪಲ್ಲಕ್ಕಿ ಉತ್ಸವ,ಸಾಕಿ ನೈವೇದ್ಯ ಸಮರ್ಪಣೆ ಹಾಗೂ ತಂಬಿಟ್ಟಿನ ಆರತಿಯ ಮೆರವಣಿಗೆಯು ನೂರಾರು ಭಕ್ತರ ನಡುವೆ ವಿಜೃಂಭಣೆಯಿಂದ ನಡೆಯಿತು.
ದೇವಿಯ 113ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಈ ಅಡ್ಡ ಪಲ್ಲಕ್ಕಿ ಉತ್ಸವವವು ಮಂಗಳವಾರ ಸಂಜೆ ಲಕ್ಷ್ಮಣತೀರ್ಥ ನದಿಯಲ್ಲಿ ಪೂಜೆ ಸಲ್ಲಿಸಿ, ಹೋಮ-ಹವನ ನಡೆಸಿ, ಅಲ್ಲಿಂದ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕೃತ ಅಡ್ಡಪಲ್ಲಕ್ಕಿಯಲ್ಲಿ ಹೂವಿನಿಂದ ಅಲಂಕರಿಸಿದ್ದ ಶ್ರೀ ದುರ್ಗಮ್ಮ-ಮರ್ಗಮ್ಮ ದೇವರ ಉತ್ಸವಮೂರ್ತಿಗಳನ್ನಿಟ್ಟು ಮಂಗಳವಾದ್ಯ, ನಗಾರಿ, ತಮಟೆಯೊಂದಿಗೆ ನಗರದ ಬ್ರಾಹ್ಮಣರ ಬಡಾವಣೆ, ದಾವಣಿ ಬೀದಿ, ಗಣೇಶಗುಡಿ ರಸ್ತೆ ಮಾರ್ಗವಾಗಿ ಸಾಗಿಬಂದ ಮೆರವಣಿಗೆಯಲ್ಲಿ ಪ್ರಮುಖ ವೃತ್ತಗಳಲ್ಲಿ ಬಾರೀ ಪಟಾಕಿ ಸಿಡಿಸಿದರು. ಭಕ್ತರು, ಯುವ ಪಡೆ ಭಕ್ತಿಭಾವದಿಂದ ಕುಣಿದು ಕುಪ್ಪಳಿಸಿದರು. ನಂತರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಮಧ್ಯರಾತ್ರಿ ಬಡಾವಣೆಯ ನಾಲ್ಕು ದಿಕ್ಕುಗಳಲ್ಲೂ ಮಾರಮ್ಮದೇವಿಗೆ ಬಲಿ ನೈವೇದ್ಯ ಸಮರ್ಪಿಸಿದರು.
ತಂಬಿಟ್ಟು ಆರತಿ ಮೆರವಣಿಗೆ: ಬುಧವಾರ ಬೆಳಗಿನ ಜಾವ ಬಡಾವಣೆಯ 200ಕ್ಕೂ ಹೆಚ್ಚು ಮಹಿಳೆಯರು, ಯುವತಿಯರು ಕಣಗಲೆ ಹೂವಿನಿಂದ ಅಲಂಕರಿಸಿದ ತಂಬಿಟ್ಟನ್ನು ತಲೆ ಮೇಲೆ ಹೊತ್ತು ಬಡಾವಣೆಯ ಬೀದಿಗಳಲ್ಲಿ ಮಂಗಳವಾದ್ಯದೊಂದಿಗೆ ಮೆರವಣಿಗೆ ನಡೆಸಿ ದೇವಾಲಯಕ್ಕೆ ಆಗಮಿಸಿ, ಪೂಜೆ ಸಲ್ಲಿಸಿ, ತಂಪುಸಲ್ಲಿಸಿದರು. ಈ ವೇಳೆ ಸಾಕಿ ನೈವೇದ್ಯವನ್ನು ಭಕ್ತರಿಗೆ ವಿತರಿಸಲಾಯಿತು.
ಉತ್ಸವದ ಅಂಗವಾಗಿ ಇಡೀ ಬಡಾವಣೆಯನ್ನು ಹಾಗೂ ಟಿ.ಎ.ಪಿ.ಸಿ.ಎಂ.ಎಸ್.ರಸ್ತೆಯುದ್ದಕ್ಕೂ ಚಾಮುಂಡೇಶ್ವರಿ ದೇವಿಯ ಭಾವಚಿತ್ರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು.
ಗುರುವಾರ ಬೆಳಗ್ಗೆ 8 ರಿಂದ ಸಂಜೆವರೆವಿಗೂ ಬಡಾವಣೆಯ ಪ್ರತಿಮನೆಬಳಿ ಮಕ್ಕಳು,ಹೆಂಗಸರು,ದೊಡ್ಡವರಾದಿಯಾಗಿ ಓಕುಳಿ ಆಡಿದರು.
ಏಪ್ರಿಲ್ 3ಕ್ಕೆ ಮರ ಪೂಜೆ: ಹಬ್ಬ ಅಂಗವಾಗಿ ಓಕುಳಿಯ ನಂತರದ 9ನೇದಿನ ಏ.3ರಂದು ಮರಪೂಜೆ ಸಲ್ಲಿಸಿ, ಬಡಾವಣೆಮಂದಿಗೆ ಹಾಗೂ ನೆಂಟರು, ಸ್ನೇಹಿತರು, ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ನಡೆಸುವರು.
-ಸಂಪತ್ ಕುಮಾರ್ ಹುಣಸೂರು