ಸಾಂಸ್ಕೃತಿಕ ನಗರಿಯ ಹೆಮ್ಮೆಯ ಪುತ್ರ
Team Udayavani, May 8, 2018, 3:00 PM IST
ಮೈಸೂರು: ಜಿಲ್ಲೆಯ ಶೈಕ್ಷಣಿಕ ಪ್ರಗತಿ ಬಿಂಬಿಸುವ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಟಾಪ್-10 ಪಟ್ಟಿಯಲ್ಲಿ ಸ್ಥಾನ ಪಡೆಯುವ ಶಿಕ್ಷಣ ಇಲಾಖೆಯ ಲೆಕ್ಕಾಚಾರ ಈ ಬಾರಿಯೂ ಕನಸಾಗಿಯೇ ಉಳಿದಿದೆ. ಕಳೆದ ಸಾಲಿನಲ್ಲಿ 21ನೇ ಸ್ಥಾನಕ್ಕೆ ಕುಸಿದಿದ್ದ ಮೈಸೂರು ಈ ಬಾರಿ 11ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.
2017-18ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿಯ ಫಲಿತಾಂಶದಲ್ಲಿ ಸ್ವಲ್ಪ ಮಟ್ಟಿಗೆ ಉತ್ತಮವಾಗಿದೆ. ಕಳೆದ ಸಾಲಿನಲ್ಲಿ ಶೇ.72.29 ಫಲಿತಾಂಶದೊಂದಿಗೆ 21ನೇ ಸ್ಥಾನ ಪಡೆದಿದ್ದ ಮೈಸೂರು ಈ ಬಾರಿ, ಶೇ.10.97 ಹೆಚ್ಚುವರಿ ಫಲಿತಾಂಶದೊಂದಿಗೆ ಶೇ.82.9 ಫಲಿತಾಂಶ ಪಡೆಯುವ ಮೂಲಕ 11ನೇ ಸ್ಥಾನಕ್ಕೆ ಏರಿದೆ.
ಜಿಲ್ಲೆಯಲ್ಲಿ ಬಾಲಕ ಹಾಗೂ ಬಾಲಕಿಯರು ಸೇರಿದಂತೆ ಒಟ್ಟು 40,516 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಕಳೆದ 2012ನೇ ಸಾಲಿನಿಂದಲೂ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಟಾಪ್-10 ಸ್ಥಾನ ಪಡೆಯುವ ನಿರೀಕ್ಷೆ ಹೊಂದಿರುವ ಮೈಸೂರು 2016ರಲ್ಲಿ 8ನೇ ಸ್ಥಾನ ಪಡೆದಿದ್ದು, ಹೊರತುಪಡಿಸಿದರೆ ನಂತರದ ವರ್ಷಗಳಲ್ಲಿ ಟಾಪ್-10ನಲ್ಲಿ ಕಾಣಿಸಿಕೊಳ್ಳಲು ವಿಫಲವಾಗಿದೆ.
ನಂ.1 ಪಡೆದ ಯಶಸ್: ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರ ತವರು ಜಿಲ್ಲೆಯಾಗಿರುವ ಮೈಸೂರಿನ ಸದ್ವಿದ್ಯಾ ಶಾಲೆಯ ವಿದ್ಯಾರ್ಥಿ ಎಂ.ಎಸ್.ಯಶಸ್, ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾನೆ.
ಇವರೊಂದಿಗೆ ಇದೇ ಶಾಲೆಯ ವಿದ್ಯಾರ್ಥಿಗಳಾದ ಅದಿತಿ ರಾವ್ ಮತ್ತು ಕೀರ್ತನಾ 625ಕ್ಕೆ 624 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಇದಲ್ಲದೆ ನಗರದ ಮರಿಮಲ್ಲಪ್ಪ ಶಾಲೆಯ ಶಿವಾನಿ ಎಂ.ಭಟ್, ವಿವಿಎಸ್ ಪಂಡಿತ್ ನೆಹರು ಪ್ರೌಢಶಾಲೆಯ ಸ್ಪಂದನ ದೇವ್ ಹಾಗೂ ಸೇಂಟ್ ಥಾಮಸ್ ಪ್ರೌಢಶಾಲೆಯ ಕೆ.ಆರ್.ನಂದಿನಿ ಕೂಡ 624 ಅಂಕ ಪಡೆಯುವ ಮೂಲಕ ಜಿಲ್ಲೆ ಹಾಗೂ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಫಲಿನೀಡಿದ ಪರಿಶ್ರಮ: ಸಿಎಂ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ತನ್ವೀರ್ಸೇಠ್ ಅವರ ತವರು ಮೈಸೂರು ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಫಲಿತಾಂಶವನ್ನು ಸುಧಾರಿಸಲು ಶಿಕ್ಷಣ ಇಲಾಖೆ ಹಲವು ಪ್ರಯತ್ನಗಳನ್ನು ನಡೆಸಿತ್ತು.
ಪರೀಕ್ಷೆ ಹಿನ್ನೆಲೆಯಲ್ಲಿ 2017ರ ನವೆಂಬರ್ನಿಂದಲೇ ಜಿಲ್ಲೆಯ ಎಲ್ಲಾ ಶಾಲೆಗಳಿಗೆ (ಸರ್ಕಾರಿ, ಖಾಸಗಿ ಮತ್ತು ಅನುದಾನ) ಪ್ರತಿ ವಿಷಯಗಳಿಗೆ ಕೆಲಸ ಪುಸ್ತಕಗಳನ್ನು ಒದಗಿಸಿದ್ದು, ಈ ಪುಸ್ತಕಗಳಲ್ಲಿರುವ ಪ್ರಶ್ನೋತ್ತರಗಳನ್ನು ವಿದ್ಯಾರ್ಥಿಗಳು ಚೆನ್ನಾಗಿ ಕಲಿತಿದ್ದಾರೆ. ಇದರ ಫಲವಾಗಿ ಜಿಲ್ಲೆಯ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಸುಧಾರಣೆ ಉಂಟಾಗಲು ಕಾರಣವಾಗಿದೆ.
ಬಾಲಕಿಯರೇ ಮೇಲುಗೈ: ಜಿಲ್ಲೆಯ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಪ್ರತಿ ಬಾರಿಯಂತೆ ಈ ವರ್ಷವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಜಿಲ್ಲೆಯಲ್ಲಿ ಬಾಲಕ ಹಾಗೂ ಬಾಲಕಿಯರು ಸೇರಿದಂತೆ ಒಟ್ಟು 33,617 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 27,869 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇನ್ನೂ ಪರೀಕ್ಷೆಗೆ ಹಾಜರಾಗಿದ್ದ 16,917 ಬಾಲಕಿಯರಲ್ಲಿ 14,525 ಮಂದಿ ತೇರ್ಗಡೆಯಾಗಿ ಶೇ.86.41 ಫಲಿತಾಂಶ ಪಡೆದರೆ,
ಪರೀಕ್ಷೆ ಎದುರಿಸಿದ್ದ 16,700 ಬಾಲಕರಲ್ಲಿ 13,344 ಬಾಲಕರು ಉತ್ತೀರ್ಣರಾಗಿದ್ದು, ಶೇ.82.75 ಫಲಿತಾಂಶ ಪಡೆದಿದ್ದಾರೆ. ಮೈಸೂರು ಜಿಲ್ಲೆಯ 7 ತಾಲೂಕು ಸೇರಿದಂತೆ ಒಟ್ಟು 9 ವಿಭಾಗಗಳ ಪೈಕಿ ಪಿರಿಯಾಪಟ್ಟಣ ತಾಲೂಕಿನಲ್ಲಿ ಪರೀಕ್ಷೆ ಬರೆದಿದ್ದ 2,743 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.92.64 ಫಲಿತಾಂಶದೊಂದಿಗೆ ಜಿಲ್ಲೆಗೆ ಅಗ್ರಸ್ಥಾನ ಪಡೆದರೆ, ತಿ.ನರಸೀಪುರ ತಾಲೂಕು ಶೇ.75.78 ಫಲಿತಾಂಶದೊಂದಿಗೆ 9ನೇ ಸ್ಥಾನ ಪಡೆದಿದೆ.
ಮೈಸೂರು ಜಿಲ್ಲೆಯ ಎಸ್ಎಸ್ಎಲ್ಸಿ ಫಲಿತಾಂಶ
2012 12ನೇ ಸ್ಥಾನ
2013 20ನೇ ಸ್ಥಾನ
2014 23ನೇ ಸ್ಥಾನ
2015 10ನೇ ಸ್ಥಾನ
2016 8ನೇ ಸ್ಥಾನ
2017 21ನೇ ಸ್ಥಾನ
2018 11ನೇ ಸ್ಥಾನ
ಪರೀಕ್ಷೆಗೆ ಯಾವುದೇ ವಿಶೇಷ ತಯಾರಿ ಮಾಡದೆ, ಪ್ರತಿದಿನ ಶಾಲೆಯಲ್ಲಿ ಮಾಡಿದ ಪಾಠಗಳನ್ನು ಮನೆಗೆ ಬಂದು ವ್ಯಾಸಂಗ ಮಾಡುತ್ತಿದ್ದೆ. ದಿನದ 24 ಗಂಟೆಗಳ ಕಾಲ ಓದಿನಲ್ಲಿ ತೊಡಗದೆ, ಆಟೋಟಗಳಲ್ಲಿ ಭಾಗವಹಿಸುತ್ತಿದ್ದೆ. ಪರೀಕ್ಷೆ ಸಮಯದಲ್ಲಿ ಮಾತ್ರ ಓದಿನಲ್ಲಿ ತೊಡಗದೆ, ಮೊದಲಿನಿಂದಲೂ ಅಂದಿನ ಪಾಠಗಳನ್ನು ಓದುತ್ತಿದ್ದ ಕಾರಣ ಉತ್ತಮ ಫಲಿತಾಂಶ ಬರಲು ಸಾಧ್ಯವಾಯಿತು. ಟಾಪ್-5ನಲ್ಲಿ ಬರುತ್ತೇನೆಂಬ ನಿರೀಕ್ಷೆ ಇತ್ತು, ಇದೀಗ ಟಾಪ್-1 ಬಂದಿರುವುದು ಖುಷಿಯಾಗಿದೆ. ನನ್ನ ಸಾಧನೆಗೆ ತಂದೆ-ತಾಯಿ, ಶಿಕ್ಷಕರು ಸೇರಿದಂತೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದೆ ಏರೋನಾಟಿಕಲ್ ಎಂಜಿನಿಯರ್ ಆಗುವ ಆಸೆ ಇದ್ದು, ಇದಕ್ಕಾಗಿ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆಯಬೇಕಿದೆ.
-ಎಂ.ಎಸ್.ಯಶಸ್, ಟಾಪ್-1 ಸ್ಥಾನ ಪಡೆದ ವಿದ್ಯಾರ್ಥಿ.
ರಾಜ್ಯಕ್ಕೆ ಮೊದಲ ಸ್ಥಾನ ಪಡೆಯುವ ನಿರೀಕ್ಷೆ ಹೊಂದಿದ್ದೆ. ಆದರೆ 624 ಅಂಗ ಪಡೆದಿರುವುದು ಸಂತಸ ತಂದಿದೆ. ಶಾಲೆಯಲ್ಲಿ ಪ್ರತಿದಿನ ಮಾಡುವ ಪಾಠಗಳನ್ನು ಅಂದೇ ಓದುತ್ತಿದ್ದ ಕಾರಣ ಪರೀಕ್ಷೆಯಲ್ಲಿ ಅನುಕೂಲವಾಯಿತು. ಅಬ್ದುಲ್ ಕಲಾಂ ಅವರಿಂದ ಸ್ಫೂರ್ತಿ ಪಡೆದಿರುವ ತಾವು, ದ್ವಿತೀಯ ಪಿಯುಸಿಯಲ್ಲಿ ಪಿಸಿಎಂಸಿ ವ್ಯಾಸಂಗ ಮಾಡಲಿದ್ದು, ಮುಂದೆ ಏರೋನಾಟಿಕಲ್ ಎಂಜಿನಿಯರ್ ಆಗುವ ಕನಸು ಹೊಂದಿದ್ದೇನೆ.
-ಆರ್.ಕೀರ್ತನಾ, 624 ಅಂಕ ಪಡೆದ ವಿದ್ಯಾರ್ಥಿನಿ
ತರಗತಿ ಆರಂಭದಿಂದಲೂ ಪ್ರತಿದಿನದ ಪಠ್ಯವನ್ನು ಅದೇ ದಿನದಲ್ಲಿ ವ್ಯಾಸಂಗ ಮಾಡುತ್ತಿದ್ದೆ. ನಿತ್ಯವೂ 3 ಗಂಟೆಗಳ ಕಾಲ ಓದುವ ಅಭ್ಯಾಸ ಮಾಡುತ್ತಿದ್ದೆ. ಓದಿನ ಜತೆಗೆ ಹಾಡುಗಾರಿಕೆ ಹಾಗೂ ಚಿತ್ರಕಲೆಯ ಹವ್ಯಾಸ ಹೊಂದಿದ್ದೇನೆ. ಪೋಷಕರು, ಶಿಕ್ಷಕರ ಪೋ›ತ್ಸಾಹ, ಮಾರ್ಗದರ್ಶನ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಯಿತು.
-ಶಿವಾನಿ ಎಂ.ಭಟ್, ಮರಿಮಲ್ಲಪ್ಪ ಶಾಲೆ ವಿದ್ಯಾರ್ಥಿ