ಹುಣಸೂರು: ಇಂದಿನಿಂದ ನಾಗರಹೊಳೆಯಲ್ಲಿ ಹುಲಿ ಗಣತಿ ಕಾರ್ಯ ಆರಂಭ
Team Udayavani, Jan 27, 2023, 10:26 AM IST
ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜ.27 ರಿಂದ ಫೆ.6 ರವರೆಗೆ ಎಂಟು ದಿನಗಳ ಕಾಲ ಹುಲಿಗಣತಿ ಕಾರ್ಯ ನಡೆಯಲಿದೆ.
ಈ ಸಂಬಂಧ ಜ.26 ಗುರುವಾರದಂದು ವೀರನಹೊಸಹಳ್ಳಿ ವಲಯ ಕಚೇರಿಯಲ್ಲಿ ಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನಾಗರಹೊಳೆ ಹುಲಿಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದರ ನೇತೃತ್ವದಲ್ಲಿ ಬೆಂಗಳೂರಿನ ಟೈಗರ್ಸೆಲ್ನ ವಿನಯ್ ಹಾಗೂ ಡಿಆರ್ಎಫ್ಓ ನಂದನ್ ತರಬೇತಿ ನೀಡಿದರು.
ಈ ವೇಳೆ ಮಾಹಿತಿ ನೀಡಿದ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದರವರು ಮೊದಲ ಮೂರು ದಿನ ಮಾಂಸಹಾರಿ ಹಾಗೂ ದೊಡ್ಡ ಪ್ರಾಣಿಗಳ ಸಮೀಕ್ಷೆ ನಡೆಸಿ ಎಕಾಲಾಜಿಕಲ್ ಆ್ಯಪ್ನಲ್ಲಿ ದಾಖಲಿಸಬೇಕು.
ನಂತರ ಮೂರು ದಿನ ಲೈನ್ ಟ್ರಾಂಜ್ಯಾಕ್ಟ್ ಮೂಲಕ ಪ್ರತಿ ಬೀಟ್ನಲ್ಲಿ ಸುಮಾರು 1-2 ಕಿ.ಮೀ ವರೆಗೆ ಸಸ್ಯಹಾರಿ ಪ್ರಾಣಿಗಳ ಸರ್ವೆ, ಮರಗಿಡ, ಗಿಡಮೂಲಿಕೆ ಸಸ್ಯ ಪ್ರಬೇಧಗಳ ಮಾಹಿತಿ ಸಂಗ್ರಹಣೆ, ಸಸ್ಯಹಾರಿ ಪ್ರಾಣಿಗಳ ಹಿಕ್ಕೆಗಳ ಪರಿವೀಕ್ಷಣೆ ನಡೆಸಲಾಗುವುದು.
ಏಳನೇ ದಿನ ರಣಹದ್ದುಗಳ ಸಮೀಕ್ಷೆ ನಡೆಸಲಾಗುವುದು. ಕೊನೆಯ ದಿನ ಸಮಗ್ರ ಮಾಹಿತಿಯನ್ನು ಕ್ರೋಡೀಕರಿಸಿ ಇಲಾಖೆಗೆ ಸಲ್ಲಿಸುವಂತೆ ಸೂಚಿಸಿದರು.
ಉದ್ಯಾನದ 8 ವಲಯಗಳ 91 ಬೀಟ್ನಲ್ಲಿ ಗಣತಿ ಕಾರ್ಯ ನಡೆಯಲಿದ್ದು, ಗಣತಿ ಕಾರ್ಯದಲ್ಲಿ ಸಂಪೂರ್ಣ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ತೊಡಗಿಸಿಕೊಳ್ಳಲಿದ್ದಾರೆ. ಯಾವುದೇ ಸ್ವಯಂ ಸೇವಕರನ್ನು ಈ ಕಾರ್ಯಕ್ಕೆ ಬಳಸಿಕೊಂಡಿಲ್ಲವೆಂದು ಡಿಸಿಎಫ್ ಮಾಹಿತಿ ನೀಡಿದರು.
ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕಳೆದ ಬಾರಿ ನಡೆಸಿದ್ದ ಹುಲಿ ಗಣತಿ ಕಾರ್ಯದ ಅಂಕಿ ಅಂಶ ಈವರೆಗೂ ಬಿಡುಗಡೆಯಾಗದಿರುವುದು, ಮತ್ತೆ ಈಗ ಗಣತಿ ಕಾರ್ಯಾರಂಭವಾಗಿರುವುದು ಇದೀಗ ಚರ್ಚಾ ಗ್ರಾಸವಾಗಿದೆ.