ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ
Team Udayavani, Mar 6, 2019, 8:33 AM IST
ದೇವದುರ್ಗ: ದೇವದುರ್ಗ ತಾಲೂಕನ್ನು ಮಾದರಿ ಮಾಡುವ ಗುರಿಯೊಂದಿಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಶಾಸಕ ಕೆ. ಶಿವನಗೌಡ ನಾಯಕ ಹೇಳಿದರು.
ಸಮೀಪದ ಗಬ್ಬೂರು ಗ್ರಾಮದ ಮಾರುತಿ ದೇವಸ್ಥಾನ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 5.85 ಕೋಟಿ ಅನುದಾನದಲ್ಲಿ ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಚುನಾವಣೆ ಬಳಿಕ ಗ್ರಾಮದ ಸಮಗ್ರ ಅಭಿವೃದ್ಧಿಗೆ ಗ್ರಾಮಸ್ಥರು ಹಾಗೂ ಮುಖಂಡರು ಮನವಿ ಮಾಡಿದ್ದರು. ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಹಂತ-ಹಂತವಾಗಿ35 ಕೋಟಿ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದ್ದೆ. ಅದರಂತೆ ಇಂದು ಮೊದಲ ಹಂತವಾಗಿ 5.85 ಕೋಟಿ ಮಂಜೂರಾಗಿದ್ದು, ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇನ್ನೂ 5 ಕೋಟಿ ರೂ.ಗಳ ಅನುದಾನ ಟೆಂಡರ್ ಹಂತದಲಿದೆ. ಗ್ರಾಮದಲ್ಲಿ ಬಸ್ ನಿಲ್ದಾಣ, ಪ್ರವಾಸಿ ಮಂದಿರ, ಸಮುದಾಯ ಭವನ, ರಸ್ತೆ ಕಾಮಗಾರಿ, ಹೈಟೆಕ್ ಗ್ರಂಥಾಲಯ, ಒಂದೂವರೆ ಕೋಟಿ ವೆಚ್ಚದಲ್ಲಿ ಶಾಲೆ ಕಟ್ಟಡ ಸೇರಿ ದೇವಸ್ಥಾನ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಗ್ರಾಮದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಲಾಗುವುದು ಎಂದು ಹೇಳಿದರು.
ಬೂದಿಬಸವೇಶ್ವರ ಸಂಸ್ಥಾನ ಮಠದ ಶ್ರೀ ಬೂದಿಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಸುಲ್ತಾನಪುರು ಬೃಹನ್ಮಠದ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬಿಜೆಪಿ ಮುಖಂಡರಾದ ಸಂಗಯ್ಯತಾತಾ ಗಬ್ಬೂರು, ಶಿವಕುಮಾರ ಯಲಿ, ಚಂದ್ರಶೇಖರಸ್ವಾಮಿ,
ತಮಣ್ಣಪ್ಪಗೌಡ ಮಲದಕಲ್, ಬೂದೆಪ್ಪ ಸಾಹುಕಾರ, ಸಾಯಿಬಾಬಾ ತಾತಾ, ಶಾಂತಗೌಡ ಮಂದಕಲ್, ಲೋಕೋಪಯೋಗಿ ಇಲಾಖೆ ಎಇಇ ಬಿ.ಬಿ.ಪಾಟೀಲ, ಜೆಇ ಬಸವರಾಜ ಗೆಜ್ಜೆಬಾವಿ ಸೇರಿ ಗ್ರಾಮದ ಮುಖಂಡರು ಇದ್ದರು.
ಒಂದು ವೇಳೆ ರಾಯಚೂರು ಜಿಲ್ಲೆಯಲ್ಲಿ ಇನ್ನೊಂದು ಜಿಲ್ಲಾ ಕೇಂದ್ರ ಮಾಡಲು ಅವಕಾಶ ಸಿಕ್ಕರೆ ದೇವದುರ್ಗ ತಾಲೂಕನ್ನೇ ಜಿಲ್ಲೆಯನ್ನಾಗಿ ಮಾಡಲು ಶ್ರಮಿಸುವೆ.
ಶಿವನಗೌಡ ನಾಯಕ, ಶಾಸಕ