ಕನ್ನಡ ಭವನಕ್ಕೆ ಪೀಠೊಪಕರಣಗಳಿಗೆ ಅನುದಾನ ನೀಡಲು ಮನವಿ
Team Udayavani, Apr 28, 2022, 12:59 PM IST
ರಾಯಚೂರು: ನಗರದ ಕನ್ನಡ ಭವನಕ್ಕೆ ಪೀಠೊಪಕರಣನ್ನು ಒದಗಿಸುವುದು ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ನ ಚಟುವಟಿಕೆಗಳ ನಡೆಸಲು ಅಗತ್ಯ ಅನುದಾನ ಕಲ್ಪಿಸಬೇಕು ಎಂದು ಕಸಾಪ ಜಿಲ್ಲಾ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳು ಹಾಗೂ ಸದಸ್ಯರು ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಕ್ರಿಯವಾಗಿದ್ದು, ಕನ್ನಡಪರ ಅನೇಕ ಚಟುವಟಿಕೆಗಳನ್ನು ನಡೆಸುತ್ತಿದೆ. ಇನ್ನೂ ಹೆಚ್ಚಿನ ಕಾರ್ಯಕ್ರಮಗಳಿಗಾಗಿ ಅನುದಾನದ ಅವಶ್ಯಕತೆ ಇದೆ. ಇನ್ನೂ ಕನ್ನಡ ಭವನದಲ್ಲಿ ಕೆಲವೊಂದು ಪೀಠೊಪರಣಗಳನ್ನು ಒದಗಿಸಿದರೆ, ಸಾಹಿತ್ಯಕ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು. ಪರಿಷತ್ತಿನ ಚಟುವಟಿಕೆಗಳಿಗೆ ಸದಾ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಜಿಲ್ಲಾ ಕೋಶಾಧ್ಯಕ್ಷ ಜಿ ಸುರೇಶ್, ಹಿರಿಯ ಮಾರ್ಗದರ್ಶಕರಾದ ಹನುಮಂತಪ್ಪ ಗವಾಯಿ, ನಾಗಪ್ಪ ಹೊರಪ್ಯಾಟಿ, ತಾಲೂಕು ಗೌರವ ಕಾರ್ಯದರ್ಶಿ ಆಂಜನೇಯ ಕಾವಲಿ, ರಾವುತರಾವ್ ಬರೂರ, ಗೌರವ ಕೋಶಾಧ್ಯಕ್ಷ ರುದ್ರಯ್ಯ ಗುಣಾರಿ, ಮುರುಳಿಧರ್ ಕುಲಕರ್ಣಿ, ಲಕ್ಷ್ಮೀಕಾಂತರೆಡ್ಡಿ ಉಪಸ್ಥಿತರಿದ್ದರು.