ವೈದ್ಯರ ನೇಮಕಾತಿಗೆ ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ಕ್ರಮ
ಚಿಕನ್ ಗುನ್ಯಾ ರೋಗ ನಿಯಂತ್ರಣಕ್ಕೆ ಬೇಕಾದ ಚಿಕಿತ್ಸೆಗೆ ಹೆಚ್ಚುವರಿ 120 ಹಾಸಿಗೆಗಳ ಘಟಕ ನಿರ್ಮಿಸಲಾಗಿದೆ.
Team Udayavani, Sep 28, 2021, 6:24 PM IST
ರಾಯಚೂರು: ಜಿಲ್ಲೆಯಲ್ಲಿ ಡೆಂಘೀ, ಚಿಕನ್ ಗುನ್ಯಾ ನಿಯಂತ್ರಣಕ್ಕೆ ರಿಮ್ಸ್ ಹಾಗೂ ಓಪೆಕ್ ಆಸ್ಪತ್ರೆಯಲ್ಲಿ ಮಕ್ಕಳ ತುರ್ತು ನಿಗಾ ಘಟಕ ಆರಂಭಿಸಲಾಗಿದೆ. ಹೆಚ್ಚುವರಿಯಾಗಿ ವೈದ್ಯರು ಮತ್ತು ಸಿಬ್ಬಂದಿ ನೇಮಕಾತಿಗೆ ಶೀಘ್ರದಲ್ಲೇ ವೈದ್ಯಕೀಯ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.
ನಗರದ ರಿಮ್ಸ್ ಆಸ್ಪತ್ರೆಯ 3ನೇ ಮಹಡಿಯಲ್ಲಿ ಶಿಲ್ಪಾ ಫೌಂಡೇಶನ್ ಸಹಯೋಗದಲ್ಲಿ ನಿರ್ಮಿಸಿದ ಮಕ್ಕಳ ತುರ್ತು ಚಿಕಿತ್ಸಾ ಘಟಕಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿದ್ದು, ಡೆಂಘೀ ಮತ್ತು ಚಿಕನ್ ಗುನ್ಯಾ ರೋಗ ನಿಯಂತ್ರಣಕ್ಕೆ ಬೇಕಾದ ಚಿಕಿತ್ಸೆಗೆ ಹೆಚ್ಚುವರಿ 120 ಹಾಸಿಗೆಗಳ ಘಟಕ ನಿರ್ಮಿಸಲಾಗಿದೆ.
ಸರ್ಕಾರದೊಂದಿಗೆ ಶಿಲ್ಪಾ ಫೌಂಡೇಶನ್ ಕೈಜೋಡಿಸಿ ಉತ್ತಮ ಮಕ್ಕಳ ಚಿಕಿತ್ಸಾ ಘಟಕ ಆರಂಭಿಸಿರುವುದು ಉತ್ತಮ ಕಾರ್ಯ ಎಂದರು. ಸಂಸದ ರಾಜಾ ಅಮರೇಶ್ವರ ನಾಯಕ, ರಾಯಚೂರು ನಗರ ಕ್ಷೇತ್ರದ ಶಾಸಕ ಡಾ| ಶಿವರಾಜ ಪಾಟೀಲ್, ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್, ಜಿಲ್ಲಾಧಿಕಾರಿ ಡಾ| ಬಿ.ಸಿ.ಸತೀಶ್, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಎಡಿಸಿ ಕೆ.ಆರ್.ದುರುಗೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅ ಧಿಕಾರಿ ಡಾ| ಕೆ.ನಾಗರಾಜ್, ರಿಮ್ಸ್ ನಿರ್ದೇಶಕ ಡಾ| ಬಸವರಾಜ ಪೀರಾಪೂರ, ತಹಶೀಲ್ದಾರ್ ಡಾ| ಹಂಪಣ್ಣ ಸಜ್ಜನ್, ಶಿಲ್ಪಾ ಮೆಡಿಕೇರ್ ಸಂಸ್ಥೆಯ ಮುಖ್ಯಸ್ಥ ವಿಷ್ಣುಕಾಂತ ಬೂತಡ ಇದ್ದರು.
ಸುಸಜ್ಜಿತ ವ್ಯವಸ್ಥೆಯುಳ್ಳ ವಿಭಾಗ
ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಸುಮಾರು 20 ಮಕ್ಕಳ ಬೆಡ್ಗಳನ್ನು ನಿರ್ಮಿಸುವ ಮೂಲಕ ಶಿಲ್ಪಾ ಫೌಂಡೇಶನ್ ರಿಮ್ಸ್ ಕಾರ್ಯಕ್ಷಮತೆ ಹೆಚ್ಚಳಕ್ಕೆ ಸಹಕರಿಸಿದೆ. ಕೊರೊನಾ ಮೂರನೇ ಅಲೆ ಜತೆಗೆ ಮಕ್ಕಳ ಚಿಕಿತ್ಸೆಗೆ ಬೇಕಾದ ಎಲ್ಲ ರೀತಿಯಾದ ಸಲಕರಣೆಗಳನ್ನು ಇಲ್ಲಿ ನೀಡಲಾಗಿದೆ. ಸುಮಾರು 55 ಲಕ್ಷ ರೂ. ವೆಚ್ಚದಲ್ಲಿ ಈ ಕೊಠಡಿ ನಿರ್ಮಿಸಲಾಗಿದೆ. ವೆಂಟಿಲೇಟರ್, ಎಕ್ಸರೇ ಮಶಿನ್ ಕೂಡ ಅಳವಡಿಸಲಾಗಿದೆ. ಮಕ್ಕಳನ್ನು ಬೇರೆ ಬೇರೆ ಕಡೆ ಅಲೆಸದಂತೆ ಎಲ್ಲ
ರೀತಿಯಲ್ಲೂ ಒಂದೇ ಕಡೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ಗೋಡೆಗಳಿಗೆ ಕಾಟೂìನ್ಗಳನ್ನು ಬಿಡಿಸುವ ಮೂಲಕ ಆಕರ್ಷಕವಾಗಿ ನಿರ್ಮಿಸಲಾಗಿದೆ.