ಸಾಹಿತ್ಯ ಕ್ಷೇತ್ರ ಬಲವರ್ಧನೆಗೆ “ಪುಸ್ತಕ ಭಾಗ್ಯ’ ಕೊಡಿ
Team Udayavani, Mar 4, 2018, 4:18 PM IST
ರಾಯಚೂರು: ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾಹಿತ್ಯ ಕ್ಷೇತ್ರ ದುರ್ಬಲಗೊಳ್ಳುತ್ತಿದ್ದು, ಅನ್ನ ಭಾಗ್ಯ, ಶಾದಿ ಭಾಗ್ಯದಂತೆ ಸರ್ಕಾರ ಪುಸ್ತಕ ಭಾಗ್ಯ ಕರುಣಿಸಲಿ ಎಂದು ಬೆಳಗಾವಿ ಕಿತ್ತೂರು ರಾಣಿ ಚನ್ನಮ್ಮ ವಿವಿ ಕುಲಸಚಿವ ಡಾ| ರಂಗರಾಜ ವನದುರ್ಗ ಒತ್ತಾಯಿಸಿದರು.
ಕನ್ನಡ ಸಾಹಿತ್ಯ ಪರಿಷತ್ನಿಂದ ತಾಲೂಕಿನ ಮಟಮಾರಿಯ ಸರ್ಕಾರಿ ಮಹಾಂತೇಶ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡ ಎರಡು ದಿನಗಳ ನಾಲ್ಕನೇ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಈಗಾಗಲೇ ಸಾಕಷ್ಟು ಭಾಗ್ಯಗಳನ್ನು ನೀಡಿದೆ. ಪುಸ್ತಕ ಪ್ರಕಟಣೆಗೆ ನೆರವಾಗುವ ನಿಟ್ಟಿನಲ್ಲಿ ಪುಸ್ತಕ ಭಾಗ್ಯ ನೀಡಿದಲ್ಲಿ ಸಾಹಿತಿಗಳಿಗೆ ಸಾಕಷ್ಟು ನೆರವಾಗಲಿದೆ. ಕ್ರಿಕೆಟ್ ಆಟಗಾರರಂತೆ ಸಾಹಿತಿಗಳನ್ನೂ ಖರೀದಿಸಿ, ಅವರಿಂದ ಉತ್ತಮ ಸಾಹಿತ್ಯ ಬರೆಸಿ ಪ್ರಕಟಿಸುವ
ಕಾರ್ಯ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸಾಹಿತ್ಯ ಬೇರೆ ಯಾವುದೋ ಲೋಕದಿಂದ ಬರುವುದಲ್ಲ. ನಮ್ಮ ಸುತ್ತಲಿನ ಪರಿಸರ, ನೆರೆಹೊರೆಯಲ್ಲೇ ಹುಟ್ಟುತ್ತದೆ. ಸಾಹಿತಿಯಾದವನ ಮೇಲೆ ಸಾಕಷ್ಟು ಗುರುತರ ಹೊಣೆಗಳಿವೆ. ನಿಜವಾದ ಸಾಹಿತಿ ತನ್ನ ಬೇರುಗಳಿಂದಲೇ ಬರವಣಿಗೆ ಶುರು
ಮಾಡುತ್ತಾನೆ. ನೆರೆಹೊರೆಯವರ ನೋವು ಹಾಗೂ ನಲಿವುಗಳನ್ನು ಒರೆಗಲ್ಲಿಗೆ ಹಚ್ಚಿ ಬರಹದಲ್ಲಿ ಪ್ರಸ್ತುತಪಡಿಸುವವನೇ ನಿಜವಾದ ಸಾಹಿತಿ ಎಂದರು.
ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್ ಮಾತನಾಡಿ, ಸರ್ಕಾರ ಪುಸ್ತಕ ಖರೀದಿ ನಿಲ್ಲಿಸಿತ್ತು. ಆಗ ಒತ್ತಡ ಹೇರಿದ ಮೇಲೆ ಸರ್ಕಾರ ಖರೀದಿಸುವುದಾಗಿ ಉತ್ತರಿಸಿದೆ. ಈ ಭಾಗಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಕ್ಕೂ ಕೇಳಿ ಕೇಳಿ ಪಡೆಯುವ ಸನ್ನಿವೇಶ ನಿರ್ಮಾಣವಾಗಿರುವುದು ಖೇದಕರ. ಹೈ-ಕ ಭಾಗಕ್ಕೆ ನೀಡಿದ ವಿಶೇಷ ಸ್ಥಾನಮಾನದಿಂದ ಏನು ಲಾಭವಾಗಿದೆ ಎಂಬ ಪ್ರಶ್ನೆ ಎದುರಾಗಿದೆ. ಹೈ-ಕ ಭಾಗದಲ್ಲಿ 46 ಸಾವಿರ ಹುದ್ದೆಗಳು ಖಾಲಿಯಿದ್ದು, 20 ಸಾವಿರ ಹುದ್ದೆಗಳನ್ನು ಮಾತ್ರ ತುಂಬಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಡಾ| ಬಸವಪ್ರಭು ಪಾಟೀಲ್ ಮಾತನಾಡಿ, ಸಾಹಿತಿಗೆ ಆತ್ಮರತಿಯಾಗಲಿ, ಹೊಗಳಿಕೆಗಾಗಿ ಬರೆಯುವ ಖಯಾಲಿ ಇರಬಾರದು. ಅಂಥ ಸಾಹಿತ್ಯ ಎಂದಿಗೂ ಪ್ರಶಂಸನೀಯವಲ್ಲ. ತಾರತಮ್ಯ, ಜಾತೀಯತೆಯ ಮಜಲುಗಳನ್ನು ಮುಟ್ಟುವಂತೆ ಬರೆದಾಗ ಮಾತ್ರ ಅದು ಜನರಿಗೆ ಮುಟ್ಟುತ್ತದೆ. ಗ್ರಾಮೀಣ ಭಾಗದಲ್ಲಿ ಹುಟ್ಟಿದ ಸಾಹಿತ್ಯ ಶಾಶ್ವತ. ಇಂದಿಗೂ ಜಾನಪದ ಸಾಹಿತ್ಯ ಜನಮಾನಸದಲ್ಲಿ ಉಳಿದಿದೆ ಎಂದರು.
ಶಾಸಕ ತಿಪ್ಪರಾಜ್ ಹವಾಲ್ದಾರ್ ಮಾತನಾಡಿದರು. ಸಾಹಿತಿ ಈಶ್ವರಯ್ಯ ಮಠ, ತಾಪಂ ಸದಸ್ಯ ಉಮೇಶ ಪಾಟೀಲ್, ಗ್ರಾಪಂ ಅಧ್ಯಕ್ಷ ಟಿ.ತಾಯಣ್ಣ, ಮುಖಂಡರಾದ ಬಸಪ್ಪ ತಿಪ್ಪಾರೆಡ್ಡಿ, ರವೀಂದ್ರ ಜಲ್ದಾರ್, ಡಾ| ಅಬ್ದುಲ್ ರಜಾಕ್, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೀರಭದ್ರಪ್ಪ ಇತರರಿದ್ದರು.
ಕಸಾಪ ತಾಲೂಕು ಅಧ್ಯಕ್ಷೆ ಕೆ.ಗಿರಿಜಾ ಪ್ರಾಸ್ತಾವಿಕ ಮಾತನಾಡಿದರು. ಮಹಾಲಕ್ಷ್ಮೀ ಪ್ರಾರ್ಥಿಸಿದರು. ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಮಲ್ಲಿಕಾರ್ಜುನ ಶಿಖರಮಠ ನಿರೂಪಿಸಿದರು. ಸುಬ್ಬರಾವ್ ಕುಲಕರ್ಣಿ ವಂದಿಸಿದರು.
ಸಾಹಿತಿಯಾದವನು ಇಂದು ಸಾಕಷ್ಟು ಕಟ್ಟುಪಾಡುಗಳ ಮಧ್ಯೆ ಬರೆಯುವ ಸನ್ನಿವೇಶ ನಿರ್ಮಾಣವಾಗಿದೆ. ಹೃದಯಾಂತರಳಾದಿಂದ ಹೊಮ್ಮುವ ಆಪ್ಯಾಯತೆ, ಅಕ್ಕರೆ, ಪ್ರೀತಿ, ಪ್ರೇಮಗಳೇ ಮರೆಯಾಗುತ್ತಿವೆ. ಅವಿಲ್ಲದೇ ಬರೆಯುವ ಕತೆ, ಕವನ ಸಾಹಿತ್ಯ ಎನಿಸಲಾರದು. ಡಾ| ರಂಗರಾಜ ವನದುರ್ಗ, ಬೆಳಗಾವಿ ಕಿತ್ತೂರು ರಾಣಿ ಚನ್ನಮ್ಮ ವಿವಿ ಕುಲಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ