ಬೆಳೆ ಪರಿಹಾರದಲ್ಲಿ ಸರ್ಕಾರ ತಾರತಮ್ಯ
Team Udayavani, Nov 29, 2021, 4:25 PM IST
ಸಿರವಾರ: ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ರೈತರಿಗೆ ಬೆಳೆ ಪರಿಹಾರ ಅನುದಾನ ನೀಡುವಲ್ಲಿ ಸರ್ಕಾರ ತಾರತಮ್ಯ ಮಾಡಿದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಆರೋಪಿಸಿದರು.
ಚಾಗಭಾವಿ ಕ್ಯಾಂಪ್ನಲ್ಲಿ ಹಾನಿಯಾದ ಭತ್ತದ ಬೆಳೆ ವೀಕ್ಷಿಸಿದ ನಂತರ ಮಾತನಾಡಿದ ಅವರು, ರಾಜ್ಯದ ಎಲ್ಲ ಜಿಲ್ಲೆಗೆ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ರೈತರಿಗೆ ಪರಿಹಾರದ ಅನುದಾನ ನೀಡುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ತೋರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಮಾನ್ವಿ ವಿಧಾನಸಭಾ ಕ್ಷೇತ್ರದ ಮಾನ್ವಿ ಮತ್ತು ಸಿರವಾರ ತಾಲೂಕಿನ ರೈತರ ಬಹಳಷ್ಟು ಭತ್ತ, ಹತ್ತಿ ನಷ್ಟವಾಗಿದೆ. ನಷ್ಟವಾದ ಬೆಳೆಗೆ ಸುಮಾರು 1 ಎಕರೆಗೆ 30 ಸಾವಿರ ರೂ.ನಂತೆ ಸೂಕ್ತ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.
ಈ ವೇಳೆ ರಾಜ್ಯ ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ತಹಶೀಲ್ದಾರ್ ವಿಜಯೇಂದ್ರ ಹುಲಿ ನಾಯಕ, ಕಂದಾಯ ನಿರೀಕ್ಷಕ ಶ್ರೀನಾಥ, ಅಯ್ಯನಗೌಡ ಏರಡ್ಡಿ, ಜೆಡಿಎಸ್ ಮುಖಂಡ ನಾಗರಾಜ್ ಬೋಗಾವತಿ, ಗೋಪಾಲ ನಾಯಕ ಹರವಿ, ಸೂಗೂರಯ್ಯ ಸ್ವಾಮಿ ಹಿರೇಮಠ, ಅಮರೇಶ ಗೌಡ ಇತರರಿದ್ದರು.