ಎಟಿಎಂನಲ್ಲಿ ಹಣದ ಸಮಸ್ಯೆ
Team Udayavani, May 17, 2020, 6:01 AM IST
ದೇವದುರ್ಗ: ಲಾಕ್ಡೌನ್ ಸಡಿಲಿಕೆ ನಂತರ ಪಟ್ಟಣದಲ್ಲಿರುವ ಎಟಿಎಂನಲ್ಲಿ ಹಣದ ಸಮಸ್ಯೆ ಎದುರಾಗಿದ್ದು, ಗ್ರಾಹಕರು ಪರದಾಡುವಂತಾಗಿದೆ. ಪಟ್ಟಣ ಸೇರಿ ನಾಲ್ಕು ಹೋಬಳಿಯ ವಿವಿಧೆಡೆ 150ಕ್ಕೂ ಹೆಚ್ಚು ಎಟಿಎಂಗಳಿದ್ದು, ಸಕಾಲಕ್ಕೆ ಹಣ ಲಭ್ಯವಾಗುತ್ತಿಲ್ಲ.
ಕನ್ನಡ ಭಾಷೆ ಮಾತನಾಡಲು ಬಾರದ ಬ್ಯಾಂಕ್ ಅಧಿಕಾರಿಗಳ ಮಧ್ಯೆ ಅವಿದ್ಯಾವಂತರ ಸಮಸ್ಯೆಗೆ ಸ್ಪಂದಿನೆ ಇಲ್ಲವಾಗಿದೆ. ಕ್ಯಾಶ್ ಲೆಸ್ ವ್ಯವಹಾರ ಹೆಸರಿಗೆ ಮಾತ್ರ ಸೀಮಿತವಾಗಿದ್ದು, ಎಲ್ಲದಕ್ಕೂ ನಗದು ವ್ಯವಹಾರ ಎಂಬಂತಾಗಿದೆ. ಎಸ್ಬಿಐ, ಎಸ್ಬಿಎಚ್, ಎಕ್ಸಿಸ್ ಬ್ಯಾಂಕ್, ಮಾನ್ವಿ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಪಿಕೆಜೆಬಿ ಸೇರಿದಂತೆ ಇತರೆ ಬ್ಯಾಂಕ್ಗಳ ಎಟಿಎಂಗಳನ್ನು ಬೆಳಗ್ಗೆ ಆರಂಭವಾಗಿ ಮಧ್ಯಾಹ್ನದ ವೇಳೆಗೆ ಹಣದ ಸಮಸ್ಯೆಯಿಂದ ಬಂದ್ ಮಾಡಲಾಗುತ್ತಿದೆ.
ಕೆಲ ಎಟಿಎಂಗಳು ಹೆಸರಿಗೆ ಮಾತ್ರ ಸೀಮಿತವಾಗಿವೆ. ಹೀಗಾಗಿ ಜನರಿಗೆ ಕೋವಿಡ್ ಮಧ್ಯೆ ಎಟಿಟಂಗಳಲ್ಲಿ ಹಣ ಇಲ್ಲದಿರುವುದು ತಲೆನೋವಾಗಿ ಪರಿಣಮಿಸಿದೆ. 10 ರಿಂದ 20ಸಾವಿರವರೆಗೆ ಹಣ ನೀಡುವುದಕ್ಕೆ ನಿರ್ಬಂಧ ಹೇರಲಾಗಿದೆ. ಖಾತೆಯಲ್ಲಿರುವ ಹಣ ತೆಗೆಯಲು ಅನೇಕ ಸಮಸ್ಯೆ ಎದುರಿಸುವಂತಾಗಿದೆ. ಹತ್ತಿ, ತೊಗರಿ ಸೇರಿದಂತೆ ಇತರೆ ಬೆಳೆ ಮಾರಾಟ ಮಾಡಿದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗಿದೆ. ಆದರೆ ಹಣ ಪಡೆಯಲು ಬ್ಯಾಂಕ್ ಮುಂದೆ ಪಾಸ್ಬುಕ್ ಹಿಡಿದು ಕ್ಯೂ ನಿಂತರೂ ಹಣ ಸಿಗದಿರುವುದು ಗ್ರಾಹಕರನ್ನು ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ. ಒಟ್ಟಿನಲ್ಲಿ ಬ್ಯಾಂಕ್ ವ್ಯವಹಾರಕ್ಕೂ ಕೋವಿಡ್ ವೈರಸ್ ಭೀತಿ ತಟ್ಟಿದೆ.