ಅಕ್ರಮ ನೀರಾವರಿ ತೆರವಿಗೆ ವಿರೋಧ
Team Udayavani, Jan 11, 2022, 1:14 PM IST
ಮಸ್ಕಿ: ತಾಲೂಕಿನ 55ನೇ ವಿತರಣಾ ಕಾಲುವೆ ಮೇಲ್ಬಾಗದಲ್ಲಿ ಅನಧಿಕೃತ ನೀರಾವರಿ ವಿರುದ್ಧ ಕಾರ್ಯಾಚರಣೆಗೆ ರೈತರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಅರ್ಧಕ್ಕೆ ಸ್ಥಗಿತಗೊಳಿಸಲಾಯಿತು.
55ನೇ ವಿತರಣಾ ಕಾಲುವೆಯ 0 ಕಿ.ಮೀ. 16 ಕಿ.ಮೀ. ವ್ಯಾಪ್ತಿಯಲ್ಲಿ ಅಕ್ರಮವಾಗಿ ನೀರು ಬಳಕೆ ಮಾಡಲಾಗುತ್ತಿದ್ದು, ಇದರಿಂದ ಕೆಳಭಾಗದ ರೈತರಿಗೆ ಸಮರ್ಪಕ ನೀರು ಸಿಗದೆ ತೊಂದರೆಯಾಗುತ್ತಿದೆ ಎಂದು ಕಾಲುವೆ ಅಚ್ಚುಕಟ್ಟು ವ್ಯಾಪ್ತಿಯ ಕೆಳ ಭಾಗದ ರೈತರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಲೋಕಾಯುಕ್ತ ಇಲಾಖೆ ಅಧಿಕಾರಿಗಳ ಸೂಚನೆ ಮೇರೆಗೆ ನೀರಾವರಿ ಇಲಾಖೆ ಅಧಿಕಾರಿಗಳು ಪೊಲೀಸ್ ಭದ್ರತೆಯೊಂದಿಗೆ ಅಕ್ರಮ ನೀರು ಬಳಕೆ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದರು. 55ನೇ ವಿತರಣಾ ಕಾಲುವೆಯ ದುರ್ಗ ಕ್ಯಾಂಪ್ನಿಂದ ತೆರವು ಕಾರ್ಯ ಆರಂಭಿಸಲಾಗಿತ್ತು. ಆದರೆ, ಕಾರ್ಯಾಚರಣೆ ಸ್ಥಳಕ್ಕೆ ದೌಡಾಯಿಸಿದ ನೂರಾರು ರೈತರು ಕಾರ್ಯಾಚರಣೆಗೆ ಅಡ್ಡಿಪಡಿಸಿದರು. ಕೂಡಲೇ ತೆರವು ಕಾರ್ಯ ನಿಲ್ಲಿಸಬೇಕು ಎಂದು ಪಟ್ಟು ಹಿಡಿದರು. ಹೀಗಾಗಿ ತೆರವು ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಲಾಯಿತು.
ಇದಕ್ಕೂ ಮುನ್ನ ಅಕ್ರಮ ನೀರಾವರಿ ವಿರುದ್ಧ ಕಾರ್ಯಾಚರಣೆ ವಿಷಯ ತಿಳಿದು ಮಸ್ಕಿಯ ನೀರಾವರಿ ಕಚೇರಿಗೆ ಆಗಮಿಸಿ ಪ್ರತಿಭಟಿಸಿದರು. ಮೇಲ್ಬಾಗದ ಹುಲ್ಲೂರು, ಉದ್ಬಾಳ, ಸುಂಕನೂರು, ಕ್ಯಾತ್ನಹಟ್ಟಿ ಸೇರಿ ಹಲವು ಗ್ರಾಮಗಳಿಂದ ಆಗಮಿಸಿದ ರೈತರು ಕಾರ್ಯಾಚರಣೆ ನಡೆಸದಂತೆ ಪಟ್ಟು ಹಿಡಿದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಘೇರಾವ್ ಹಾಕಿದರು.