ಬಳ್ಳಾರಿ ಕಲಾವಿದನಿಂದ ಸುಣ್ಣದ ಕಲ್ಲಿನಲ್ಲಿ ರಾಷ್ಟ್ರ-ನಾಡಗೀತೆ
Team Udayavani, Feb 17, 2020, 6:19 PM IST
ರಾಯಚೂರು: ನಗರದಲ್ಲಿ ರವಿವಾರ ನಡೆದ ಚಿತ್ರಸಂತೆಯಲ್ಲಿ ಮತ್ತೊಂದು ಆಕರ್ಷಣೆಯಾಗಿ ಕಂಡು ಬಂದಿದ್ದು ಬಳ್ಳಾರಿಯ ಕಲಾವಿದ ಮಲ್ಲಿಕಾರ್ಜುನ ಅಪಗುಂಡಿ ಸುಣ್ಣದ ಕಲ್ಲಿನಲ್ಲಿ ಬಿಡಿಸಿದ ಕಲಾಕೃತಿಗಳು.
ನಾಡಗೀತೆ ಹಾಗೂ ರಾಷ್ಟ್ರಗೀತೆಗಳನ್ನು ಶುದ್ಧವಾಗಿ ಸುಣ್ಣದ ಕಲ್ಲಿನಲ್ಲಿ ಕೆತ್ತನೆ ಮಾಡಿದ್ದರು. ಅವುಗಳಿಗೆ ಫ್ರೇಮ್ ಹಾಕಿ ಪ್ರದರ್ಶನಕ್ಕಿಟ್ಟಿದ್ದರು. ಇವು ನೋಡುಗರನ್ನು ಆಕರ್ಷಿಸಿದ್ದು ವಿಶೇಷ. ರಾಷ್ಟ್ರಗೀತೆ ಬರೆಯಲು ಒಂದು ತಿಂಗಳಾದರೆ, ನಾಡಗೀತೆ ಬರೆಯಲು ಎರಡು ತಿಂಗಳು ಶ್ರದ್ಧೆ ವಹಿಸಿದ್ದಾಗಿ ವಿವರಿಸಿದರು ಮಲ್ಲಿಕಾರ್ಜುನ. ಅದರ ಜತೆಗೆ ಸಾಬೂನಿನಲ್ಲಿ ಬಿಡಿಸಿದ ಅನೇಕ ಕಲಾಕೃತಿಗಳು ನೋಡುಗರನ್ನು ಆಕರ್ಷಿಸಿತು.
ಕಾಗದಗಳ ಎಳೆಗಳಿಂದ ಬಿಡಿಸಿದ ಕಲಾಕೃತಿಗಳು ಆಕರ್ಷಣೀಯವಾಗಿದ್ದವು. ಅದರ ಜತೆಗೆ ಅಕ್ಕಿ ಕಾಳುಗಳನ್ನು ಜೋಡಿಸಿ ಅದರಲ್ಲಿ ರಾಷ್ಟ್ರಧ್ವಜ ಬಿಡಿಸಿದ್ದರು. ದೂರದಿಂದ ನೋಡಿದರೆ ಸಾಧಾರಣ ಚಿತ್ರಕಲೆಯಂತೆ ಕಂಡರೂ ಹತ್ತಿರದಿಂದ ನೋಡಿದವರಿಗೆ ಅದರೊಳಗಿನ ವಿಶೇಷತೆ ಕಂಡು ಬರುತ್ತಿತ್ತು.