ಪರಂಪರಾಗತ ಕೃಷಿ ವಿಕಾಸ ಯೋಜನೆ ಬಳಸಿಕೊಳ್ಳಿ
Team Udayavani, Dec 26, 2020, 6:48 PM IST
ರಾಯಚೂರು: ಜಿಲ್ಲೆಯಲ್ಲಿ ಪರಂಪರಾಗತ ಕೃಷಿ ವಿಕಾಸ ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಲು ರೈತರ ಪಾಲ್ಗೊಳ್ಳುವಿಕೆ ಅತ್ಯಗತ್ಯ. ಈ ದಿಸೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ತಿಳಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ 2020-21ನೇ ಸಾಲಿನ ಪರಂಪರಾಗತ ಕೃಷಿ ವಿಕಾಸ ಯೋಜನೆ ಅನುಷ್ಠಾನ ಕುರಿತು ಹಮ್ಮಿಕೊಂಡ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪರಂಪರಾಗತ ಕೃಷಿ ವಿಕಾಸ ಯೋಜನೆಯಲ್ಲಿ ರೈತರು ಪಾಲುದಾರರಾಗುವಂತೆ ಅವರ ಮನವೊಲಿಸಿ ಕರೆತರಲು ಯತ್ನಿಸಬೇಕು. ಈ ಯೋಜನೆ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಸಂಬಂಧಿಸಿದ ಇಲಾಖೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಕೈಗೊಳ್ಳಬೇಕು ಎಂದರು.
ಇಲಾಖೆ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಿ, ಉತ್ತಮವಾಗಿ ಕಾರ್ಯನಿರ್ವಹಿಸಿದಲ್ಲಿ ಅದು ಯಶಸ್ವಿಯಾಗಲಿದೆ. ವಿವಿಧ ರೀತಿಯ ಪ್ರಚಾರ ಕಾರ್ಯ ರೂಪಿಸಿ, ರೈತರು ಈ ಯೋಜನೆಯಡಿ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದರು.
ಇದನ್ನೂ ಓದಿ:ಪಿಎಫ್ಐ ಬಾಲ ಬಿಚ್ಚಿದರೆ ಬಾಲನೂ ಕಟ್, ತಲೆನೂ ಕಟ್: ಸಿ.ಟಿ.ರವಿ
ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಈ ಯೋಜನೆಯಡಿ ಭಾಗವಹಿಸಲು ಆಸಕ್ತರಿರುವ ರೈತರ ಸಮೀಕ್ಷೆ ನಡೆಸಬೇಕು. ಗುರುತಿಸುವ ರೈತರಿಗೆ ಈ ಯೋಜನೆಯಿಂದ ಆಗುವ ಲಾಭಗಳ ಕುರಿತು ಮನವರಿಕೆ ಮಾಡಿಕೊಡಬೇಕು. ತೋಟಗಾರಿಕೆ ಬೆಳೆಗಳಿಗೆ ಮುಕ್ತ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದು, ರೈತರಿಗೆ ಸಹಾಯ ಧನ ನೀಡಬೇಕು. ತೋಟಗಾರಿಕೆ ಬೆಳೆ ಬೆಳೆದು ಮಾರುಕಟ್ಟೆಯಲ್ಲಿ ಮೂರು ಪಟ್ಟ ಅಧಿಕ ಲಾಭ ಪಡೆಯಬಹುದು ಎಂದರು.
ತಾಲೂಕಿನ ಚಂದ್ರಬಂಡಾ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಯಾಪಲದಿನ್ನಿ, ಗಾಜರಾಳ, ಅಪ್ಪದೊಡ್ಡಿ ಗ್ರಾಮಗಳಲ್ಲಿ ತೋಟಗಾರಿಕೆ ಬೆಳೆಗಳಾದ ಮಾವು, ಮೋಸಂಬಿ ಬೆಳೆಯನ್ನು ಅತಿ ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಪರಂಪರಾಗತ ಕೃಷಿ ವಿಕಾಸ ಯೋಜನೆ ಆ ಭಾಗದಲ್ಲಿ ಅನುಷ್ಠಾನಗೊಳಿಸಲು ಸಹಕಾರಿಯಾಗಲಿದೆ ಎಂದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಹ್ಮದ್ ಅಲಿ, ದೀಪಿಕಾ, ಹನುಮೇಶ, ಖಾದರ್ ಭಾಷಾ ಸೇರಿ ಇತರರಿದ್ದರು.