ಕೆಳಭಾಗಕ್ಕೆ ತಲುಪದ ನೀರು-ಶಾಸಕ ಪರಿಶೀಲನೆ
Team Udayavani, Mar 22, 2022, 2:14 PM IST
ಮಸ್ಕಿ: ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯ ಮಾನ್ವಿ ಹಾಗೂ ಸಿರವಾರ ಭಾಗದ ಅಚ್ಚುಕಟ್ಟು ಪ್ರದೇಶ ಕೆಳ ಭಾಗದ ರೈತರಿಗೆ ನೀರು ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದ್ದು ರೈತರು ಆತಂಕ ಪಡಬೇಕಾಗಿಲ್ಲ ಎಂದು ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಎಡದಂಡೆ ಮುಖ್ಯ ಕಾಲುವೆ ಸಮೀಪದ 69ನೇ ಮೈಲ್ನಲ್ಲಿ ನೀರಿನ ಅಳತೆ ಮಾಪನ ಪರಿಶೀಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿ, ಮೈಲ್ 69ರಲ್ಲಿ 9.2 ಅಡಿ ನೀರು ಹರಿಯಬೇಕು, ಶನಿವಾರ ಸಂಜೆಯಿಂದ ನೀರಿನ ಪ್ರಮಾಣ ಏರಿಕೆಯಾಗಿದ್ದು ಒಂದೆರಡು ದಿನಗಳಲ್ಲಿ ಕೊನೆ ಭಾಗದ ರೈತರಿಗೆ ನೀರು ಮುಟ್ಟಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಕೊನೆ ಭಾಗಕ್ಕೆ ನೀರು ಹರಿಸುವ ಸಂಬಂಧ ಜಿಲ್ಲಾಧಿಕಾರಿ ಹಾಗೂ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕ ಹೊಂದಲಾಗಿದೆ. ನೀರು ಕಡಿಮೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಈ ವೇಳೆ ಜೆಡಿಎಸ್ ಮಾನ್ವಿ ತಾಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಬಲ್ಲಟಗಿ ಸೇರಿದಂತೆ ಅನೇಕ ಮುಖಂಡರು, ಅಧಿಕಾರಿಗಳು ಇದ್ದರು.