ಕಾಂಗ್ರೆಸ್ ನಿಂದ ದಲಿತರ ಕಲ್ಯಾಣ ಅಸಾಧ್ಯ
Team Udayavani, Apr 6, 2021, 8:09 PM IST
ಮಸ್ಕಿ: ಕಾಂಗ್ರೆಸ್ ಪಕ್ಷದಿಂದ ದಲಿತರ ಕಲ್ಯಾಣ ಸಾಧ್ಯವಿಲ್ಲ. ಹೀಗಾಗಿ ದಲಿತರು ಈಗ ಜಾಗೃತರಾಗಿದ್ದಾರೆ. ಶೋಷಿತ ಸಮುದಾಯಗಳ ಮತ ಕಾಂಗ್ರೆಸ್ಗೆ ಬೀಳುವುದಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಡಾ| ಬಾಬು ಜಗಜೀವನ್ರಾಂ ಅವರ 114ನೇ ಜಯಂತಿಯಲ್ಲಿ ಅವರು ಮಾತನಾಡಿದರು. ಡಾ| ಅಂಬೇಡ್ಕರ್ ಸಂವಿಧಾನ ಬದ್ಧವಾಗಿ ಮೀಸಲಾತಿ ನೀಡಿದ್ದರು. ಅದನ್ನು ಡಾ| ಬಾಬು ಜಗಜೀವನರಾಂ ಅನುಷ್ಠಾನಕ್ಕೆ ತಂದ ಕೀರ್ತಿಗೆ ಪಾತ್ರರಾದರು. ಇಡೀ ವಿಶ್ವವೇ ಮೆಚ್ಚಿದ ಬಹುದೊಡ್ಡ ಜ್ಞಾನಿ ಡಾ| ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪಕ್ಷ ಸರಿಯಾಗಿ ಗೌರವಿಸಲಿಲ್ಲ.
ಅವರು ನಿಧನರಾದಾಗ ದೆಹಲಿಯಲ್ಲಿ ಸಂಸ್ಕಾರ ಮಾಡಲು ದೆಹಲಿ ತಮ್ಮ ಪಿತ್ರಾರ್ಜಿತ ಆಸ್ತಿಯಂತೆ ಕಾಂಗ್ರೆಸ್ನವರು ವರ್ತಿಸಿದರು. ಹಲವು ಬಾರಿ ಅವರನ್ನು ಕಾಂಗ್ರೆಸ್ ಪಕ್ಷ ಅಪಮಾನಿಸಿದ್ದನ್ನು ಮೆಲುಕು ಹಾಕಿದ ಗೋವಿಂದ ಕಾರಜೋಳ ಈ ಎಲ್ಲ ಸಂಗತಿಗಳನ್ನು ದಲಿತರು ಮರೆತಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾಂಗ್ರೆಸ್ ದಿವಾಳಿಯಾಗಲು ದಲಿತರು ಕಾರಣರಾಗಿದ್ದಾರೆ. ದಲಿತರು ಇತ್ತೀಚೆಗೆ ವಿದ್ಯಾವಂತರಾಗಿ ರಾಜ್ಯದ ದೇಶದ ಆಗುಹೋಗುಗಳನ್ನು ಗಮನಿಸುತ್ತಿದ್ದಾರೆ ಎಂದರು.
ಇದಕ್ಕಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ದಲಿತರು ಮತ ನೀಡದೇ ಬಿಜೆಪಿ ಬೆಂಬಲಿಸಿ ರಾಷ್ಟ್ರದಲ್ಲಿ ಮೋದಿ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ಬೆಂಬಲಿಸಿದ್ದಾರೆ. ಮಸ್ಕಿಯಲ್ಲೂ ದಲಿತರೆಲ್ಲ ಪ್ರತಾಪಗೌಡ ಪರವಾಗಿ ಮತ ಹಾಕಲಿದ್ದಾರೆ ಎಂದರು. ಈ ವೇಳೆ ಎಂಎಲ್ಸಿ ಎನ್. ರವಿಕುಮಾರ, ಶಾಸಕ ಬಸವರಾಜ ದಢೇಸುಗೂರು, ಜಿಲ್ಲಾ ಬಿಜೆಪಿ ಅಧ್ಯಕ್ಷ ರಮನಾಂದ ಯಾದವ್, ಜಿಪಂ ಸದಸ್ಯ ದುರುಗಪ್ಪ ಗುಡಗಲದಿನ್ನಿ, ಪುರಸಭೆ ಮಾಜಿ ಅಧ್ಯಕ್ಷ ಮೌನೇಶ ಮುರಾರಿ ಇದ್ದರು.