ಆ್ಯಸಿಡ್ ಸುರಿದ ಪಾಗಲ್ ಪ್ರೇಮಿ ಸೆರೆ
Team Udayavani, Feb 19, 2023, 2:55 PM IST
ಕನಕಪುರ: ಪ್ರೀತಿ ನಿರಾಕರಿಸಿದ ಕಾರಣಕ್ಕೆ ಬಿ.ಕಾಂ ವಿದ್ಯಾರ್ಥಿನಿಯ ಮೇಲೆ ಆ್ಯಸಿಡ್ ಎರಚಿದ್ದ ಪಾಗಲ್ ಪ್ರೇಮಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಗರದ ಕುರುಪೇಟೆಯ ಸುಮಂತ್ ಅಲಿಯಾಸ್ ಅಪ್ಪು (22) ಆ್ಯಸಿಡ್ ದಾಳಿ ನಡೆಸಿದ್ದ ಆರೋಪಿ ಎಂದು ಗುರುತಿಸಲಾಗಿದೆ.
ಆರೋಪಿ ಸುಮಂತ್ ಹಲವಾರು ದಿನಗಳಿಂದ ಯುವತಿಯ ಹಿಂದೆ ಬಿದ್ದು ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದ. ಈ ನಡುವೆ ಶುಕ್ರವಾರ ಸಂಜೆ ಯವತಿ ಹಾಗೂ ಆಕೆಯ ಸಹೋದರ ಇಬ್ಬರು ನಗರದ ಬೈಪಾಸ್ ರಸ್ತೆಯಲ್ಲಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಅವರನ್ನು ಆರೋಪಿ ಅಡ್ಡಗಟ್ಟಿ ಪ್ರೀತಿಸುವಂತೆ ಬೇಡಿಕೊಂಡಿದ್ದಾನೆ. ಆ್ಯಸಿಡ್ ದಾಳಿ ಮಾಡಲು ಮೊದಲೇ ಸಿದ್ಧತೆ ಮಾಡಿಕೊಂಡು ಬಂದಿದ್ದ. ಈ ವೇಳೆ ಪ್ರೀತಿಯನ್ನು ನಿರಾಕರಿಸಿದ ಕೂಡಲೇ ತನ್ನ ಪ್ಯಾಂಟಿನ ಪಾಕೆಟ್ನಲ್ಲಿದ್ದ ಆ್ಯಸಿಡನ್ನು ಯುವತಿಯ ಮುಖದ ಮೇಲೆ ಎರಚಿ ಪರಾರಿಯಾಗಿದ್ದ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ಸುಮಂತ್ ಅಲಿಯಾಸ್ ಅಪ್ಪು ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ. ಕಳೆದ ಒಂದು ವರ್ಷದಿಂದ ಯುವಕ- ಯುವತಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಇತ್ತೀಚೆಗೆ ಇಬ್ಬರ ನಡುವೆ ಗಲಾಟೆ ನಡೆದು ವಿದ್ಯಾರ್ಥಿನಿ ಪ್ರೀತಿ ನಿರಾ ಕರಿಸಿದ್ದಳು. ಹೀಗಾಗಿ ಆ್ಯಸಿಡ್ ಎರಚಿದ್ದ. ಕಾರ್ ಎಂಜಿನ್ ಶುಚಿಗೊಳಿಸಲು ಬಳಸುತ್ತಿದ್ದ ಆ್ಯಸಿಡ್ ಅನ್ನು ಮುಖದ ಮೇಲೆ ಎರಚಿದ್ದ. ಘಟನೆಯಲ್ಲಿ ಯುವತಿಯ ಎಡಭಾಗದ ಕಣ್ಣಿಗೆ ಗಂಭೀರ ಗಾಯವಾಗಿದ್ದು, ಬೆಂಗಳೂರಿನ ಮಿಂಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.