ಜನಸಂಚಾರ ಸಂಪೂರ್ಣ ಸ್ಥಗಿತ
Team Udayavani, Mar 30, 2020, 4:50 PM IST
ತುಮಕೂರು: ಕೋವಿಡ್ 19 ಮಹಾಮಾರಿಯ ವೈರಸ್ ಜನ ಸಾಮಾನ್ಯರಿಗೆ ಹರಡಬಾರದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಡೀ ದೇಶವನ್ನು ಲಾಕ್ ಡೌನ್ ಮಾಡಿ ಮನೆಯಿಂದ ಯಾರೂ ಹೊರಬರ ಬರ ಬಾರದು ಸೂಚಿಸಿದೆ.
ಆದರೆ ನಗರದಲ್ಲಿ ಕೆಲವು ಯುವಕರು ಎಲ್ಲಾಕಡೆ ಲಾಕ್ಡೌನ್ ಇದ್ದರೂ ಅದನ್ನು ಲೆಕ್ಕಿಸದೇ ಮನೆಯಿಂದ ರಸ್ತೆಗೆ ಬಂದು ಸುತ್ತು ವರಿಯುತ್ತಿದ್ದರು ಅವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಮನೆಗೆ ಕಳುಹಿಸಿದರು. ಇನ್ನು ನಗರದ ವಿವಿಧ ರಸ್ತೆಗಳ ಸಂಚಾರ ಬಂದ್ ಇದ್ದರೂ ಹೋಗಲು ಯತ್ನ ನಡೆಸಿದರು. ಈ ವೇಳೆಯಲ್ಲಿ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿದ್ದ ಪೊಲೀಸರು ಬ್ಯಾರಿಕೇಡ್ ಬಳಿಯೇ ತಡೆದು ಬುದ್ಧಿವಾದ ಹೇಳಿ ಮನೆಗೆ ವಾಪಸ್ ಕಳುಹಿಸುತ್ತಿದ್ದರು.
ಇನ್ನು ನಗರದ ಕೆಲವು ರಸ್ತೆಗಳಲ್ಲಿ ಜನ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಯಾವುದೇ ವಾಹನ ಸಂಚಾರ ಇರಲಿಲ್ಲ. ಎಲ್ಲಾ ರಸ್ತೆಗಳು ಬಿಕೋ ಎನ್ನುವಂತಿತ್ತು, ನಗರದ ಕೆಲವು ಬಡಾವಣೆಗಳಲ್ಲಿ ಲಾಕ್ ಡೌನ್ ಇದೆಯಾ ಎನ್ನುವ ರೀತಿ ಜನ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಓಡಾಡುತ್ತಿದ್ದರು. ಮುಖ್ಯ ರಸ್ತೆಗಳಲ್ಲಿ ಭಾರೀ ಭದ್ರತೆ ಇದೆ. ಆದರೆ ಕೆಲವು ಬಡಾವಣೆಗಳಲ್ಲಿ ಯಾವುದೇ ರೀತಿಯ ಗಮನ ಹರಿಸಿಲ್ಲ. ನಗರದ ಹೊರ ಹೊಲಯದಲ್ಲಿ ಎಂದಿನಂತೆ ಜನ ಸಂದಣಿ ಕಂಡುಬರುತ್ತಿದೆ, ಈ ಕೋವಿಡ್ 19 ವೈರಸ್ ಮೂರನೇ ಹಂತ ತಲುಪ ಬಾರದು ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಕೆಲವರಿಗೆ ಈ ಬಗ್ಗೆ ಯಾವುದೇ ಅರಿವಿಲ್ಲದೇ ತಮ್ಮ ದೈನಂದಿನ ಕೆಲಸ ಕಾರ್ಯದಲ್ಲಿ ತಲ್ಲೀನರಾಗಿ ಯಥಾಸ್ಥಿತಿಯಲ್ಲಿಯೇ ಇದ್ದಾರೆ.