Pavagada: ಚಿರತೆ ದಾಳಿಗೆ ಕರು ಬಲಿ
Team Udayavani, Jan 17, 2024, 1:22 PM IST
ಪಾವಗಡ: ಮಧ್ಯರಾತ್ರಿ ಸಮಯ ಚಿರತೆಯೊಂದು ದನದ ಕೊಟ್ಟಿಗೆಗೆ ನುಗ್ಗಿ 7 ತಿಂಗಳ ಗಂಡು ಕರವನ್ನು ಹುಣ್ಸೆಮರದ ಮೇಲಕ್ಕೆ ಎಳೆದೊಯ್ದು ಕೊಂದು ತಿಂದ ಘಟನೆ ಜ.16ರ ಮಂಗಳವಾರ ಮಧ್ಯರಾತ್ರಿ 2.30ರ ಸಮಯದಲ್ಲಿ ನಡೆದಿದೆ.
ಪಾವಗಡ ತಾಲೂಕಿನ ಮಂಗಳವಾಡ ಗ್ರಾಮದ ಕರಿಯಮ್ಮ ದೇವಸ್ಥಾನದ ಹಿಂಭಾಗದಲ್ಲಿರುವ ದೊಡ್ಡಣ್ಣ ಎಂಬವರಿಗೆ ಸೇರಿದ ಕರು ಇದಾಗಿದ್ದು, ರಾತ್ರಿ ಸಮಯ ದನ ಕರುಗಳನ್ನು ಒಂದೆಡೆ ಕಟ್ಟಿ ಹಾಕಿದ್ದರು.
ಮಧ್ಯರಾತ್ರಿ ಏಕಾಏಕಿ ದನದ ಕೊಟ್ಟಿಗೆಗೆ ಚಿರುತೆ ನುಗ್ಗಿ ಗಂಡು ಕರುವನ್ನು ಸಮೀಪದಲ್ಲಿರುವ ಹುಣಸೆ ಮರದ ಮೇಲೆ ಎಳೆದುಕೊಂಡು ಹೋಗಿ ಅರ್ಧ ದೇಹವನ್ನು ತಿಂದು ಉಳಿದ ದೇಹವನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದೆ.
ಇತ್ತೀಚಿನ ದಿನಗಳಲ್ಲಿ ಮಂಗಳವಾಡ ಗ್ರಾಮದ ಸುತ್ತಮುತ್ತಲಿನಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಂಬಂಧ ಪಟ್ಟ ಅರಣ್ಯ ಇಲಾಖೆಯವರು ಈ ಬಗ್ಗೆ ಸೂಕ್ತ ರೀತಿಯಲ್ಲಿ ಕ್ರಮ ವಹಿಸಬೇಕಾಗಿದೆ.