ಧೂಳು ಸಮಸ್ಯೆಯಿಂದ ಮುಕ್ತಿ ಕೊಡಿ
Team Udayavani, Mar 23, 2020, 3:00 AM IST
ತುಮಕೂರು: ನಗರದ ಪ್ರಶಾಂತ್ ಚಿತ್ರಮಂದಿರದ ಪಕ್ಕದ ರಸ್ತೆಯಿಂದ ಗುಬ್ಬಿವೀರಣ್ಣ ರಂಗಮಂದಿರದವರೆಗಿನ ರಸ್ತೆ ಧೂಳುಮಯವಾಗಿದ್ದು, ಇದರಿಂದ ರಕ್ಷಿಸಿ ಎಂದು ಆಟೋ ಚಾಲಕರು, ವರ್ತಕರು ಮತ್ತು ನಾಗರಿಕರು ಮೇಯರ್ ಫರೀದಾಬೇಗಂ ಮತ್ತು ಆಯುಕ್ತ ಟಿ.ಭೂಬಾಲನ್ ಅವರಲ್ಲಿ ಅಳಲು ತೋಡಿಕೊಂಡರು.
ಸಾರಿಗೆ ಬಸ್ ನಿಲ್ದಾಣ ಗುಬ್ಬಿ ವೀರಣ್ಣ ರಂಗಮಂದಿರದ ಎದುರಿನ ಸಾರಿಗೆ ಡಿಪೋನಲ್ಲಿ ತಾತ್ಕಾಲಿಕವಾಗಿ ಆರಂಭವಾಗಿದ್ದು, ಇದರಿಂದ ಪ್ರತಿನಿತ್ಯ ನೂರಾರು ಬಸ್ಗಳು ಸಂಚರಿಸುವುದರಿಂದ ಧೂಳು ಸೃಷ್ಟಿಯಾಗಿದೆ. ರಂಗಮಂದಿರದ ಪಕ್ಕದ ಜಾಗದಲ್ಲಿ ಪಾಲಿಕೆಯವರೇ ತ್ಯಾಜ್ಯ ಹಾಕುತ್ತಿದ್ದಾರೆ ಎಂದು ದೂರಿದರು.
ತ್ಯಾಜ್ಯ ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆಯುಕ್ತ ಟಿ.ಭೂಬಾಲನ್ ಹೇಳಿದರು. ಬೀದಿ ದೀಪ, ಸ್ವತ್ಛತೆಗೆ ಹೆಚ್ಚು ಆದ್ಯತೆ ನೀಡುವುದಾಗಿ ಮೇಯರ್ ಫರೀದಾ ಬೇಗಂ ತಿಳಿಸಿದರು. ಗುಬ್ಬಿವೀರಣ್ಣ ರಂಗ ಮಂದಿರ ಪಕ್ಕದಲ್ಲಿರುವ ಗುಜರಿ ಅಂಗಡಿಗಳಿಗೆ ಹೋಗಲು ರಸ್ತೆ ನಿರ್ಮಿಸಬೇಕೆಂದು ಬಾಳನಕಟ್ಟೆ ಕಬ್ಬಿಣ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘ ಮನವಿ ಸಲ್ಲಿಸಿತು.