Kunigal; ಅಪಘಾತದಲ್ಲಿ ಬೈಕ್ ಹಿಂಬದಿ ಸವಾರ ಮೃತ್ಯು: ಕಾರು ಚಾಲಕ ಪರಾರಿ
Team Udayavani, Sep 10, 2023, 9:23 PM IST
ಕುಣಿಗಲ್ : ಬೈಕ್ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಾಯಗೊಂಡಿರುವ ಘಟನೆ ತಾಲೂಕಿನ ಹುಲಿಯೂರುದುರ್ಗ ಬೈಪಾಸ್ನಲ್ಲಿ ಭಾನುವಾರ ಸಂಜೆ ಸಂಭವಿಸಿದೆ.
ರಾಮನಗರ ತಾಲೂಕು ಕೈಲಾಂಚ ಹೋಬಳಿ ಲಕ್ಕೋಜನಹಳ್ಳಿ ಗ್ರಾಮದ ಉಮೇಶ್ (50) ಮೃತ ದುರ್ದೈವಿಯಾಗಿದ್ದು, ರಾಜಣ್ಣ (55) ಗಾಯಗೊಂಡಿದ್ದಾರೆ.
ಉಮೇಶ್ ಹಾಗೂ ರಾಜಣ್ಣ ಅವರು ಅಡುಗೆ ವೃತ್ತಿ ಮಾಡಿಕೊಂಡಿದ್ದು, ಕುಣಿಗಲ್ ತಾಲೂಕಿನ ಹಳೇವೂರು ದೇವಾಲಯದಲ್ಲಿ ಹಮ್ಮಿಕೊಂಡಿದ್ದ ದೇವರ ಕಾರ್ಯದಲ್ಲಿ ಭಾಗವಹಿಸಿ ಅಡುಗೆ ಮುಗಿಸಿ ತಮ್ಮ ಗ್ರಾಮಕ್ಕೆ ವಾಪಸಾಗುತ್ತಿರಬೇಕಾದರೆ ಮದ್ದೂರು ಕಡೆಯಿಂದ ಬಂದ ಕಾರು ಬೈಕ್ಗೆ ಢಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಉಮೇಶ್ ಸ್ಥಳದಲ್ಲೇ ಮೃತಪಟ್ಟರೇ, ರಾಜಣ್ಣ ತೀವ್ರವಾಗಿ ಗಾಯಗೊಂಡಿದ್ದಾರೆ.
ರಾಜಣ್ಣ ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಢಿಕ್ಕಿ ಹೊಡೆದ ಬಳಿಕ ಚಾಲಕ ಕಾರು ನಿಲ್ಲಿಸದೇ ಪರಾರಿಯಾಗಿದ್ದಾನೆ. ಹುಲಿಯೂರುದುರ್ಗ ಪಿಎಸ್ಐ ಸುನೀಲ್ಕುಮಾರ್ ಪ್ರಕರಣ ದಾಖಲಿಸಿಕೊಂಡು ಕಾರು ಮತ್ತು ಚಾಲಕನ ಪತ್ತೆಗೆ ಕ್ರಮಕೈಗೊಂಡಿದ್ದಾರೆ.