ಪೋಷಕರ ಕರೆ ತರಲು ಹೇಳಿದ್ದಕ್ಕೆ ಊರು ಬಿಟ್ಟು ಬಂದ ವಿದ್ಯಾರ್ಥಿಗಳು
Team Udayavani, Sep 17, 2019, 5:10 PM IST
•ಶಾಲೆಗೆ ಚಕ್ಕರ್ ಹೊಡೆದು ಜಾತ್ರೆಗೆ ಹೋಗಿದ್ದ ವಿದ್ಯಾರ್ಥಿಗಳು •ಶಿಕ್ಷಕರು ಪ್ರಶ್ನಿಸಿದ್ದಕ್ಕೆ ಹೆದರಿ ರೈಲು ಹತ್ತಿದರು
ಕುಣಿಗಲ್: ತರಗತಿಗೆ ಗೈರು ಹಾಜರಾಗಿದ್ದಕ್ಕೆ ಪೋಷಕರನ್ನು ಕರೆತರುವಂತೆ ಶಿಕ್ಷಕರು ಸೂಚಿಸಿದ್ದರಿಂದ ಗಾಬರಿ ಗೊಂಡು ರೈಲು ಹತ್ತಿ ಊರು ಬಿಟ್ಟು ಬಂದಿದ್ದ ಆರು ಅಪ್ರಾಪ್ತ ವಿದ್ಯಾರ್ಥಿ ಗಳನ್ನು ಕುಣಿಗಲ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಘಟನೆ ವಿವರ: ಹಾಸನ ಜಿಲ್ಲೆ ಚನ್ನ ರಾಯಪಟ್ಟಣ ತಾಲೂಕು ಗೋವಿಂದಕೆರೆ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾದ ಮನು, ಅಮೀತ್, ಮೋಹನ್, ನಿಶಾಂತ್, ಅಭಿಷೇಕ್, ಮಂಜೇಕಗೌಡ ಸೆ.14ರಂದು ಶಾಲೆಗೆ ಚಕ್ಕರ್ ಹೊಡೆದು ಕೃಷ್ಣಾಪುರ ತಾಲೂಕಿನ ಸಮೀಪ ದಂಡಿನ ಕೆಂಚರಾಯ ಸ್ವಾಮಿ ಜಾತ್ರೆಗೆ ಹೋಗಿದ್ದಾರೆ.
ಸೋಮವಾರ ಎಂದಿನಂತೆ ಶಾಲೆಗೆ ಹೋದಾಗ ಶಿಕ್ಷಕರು ಪ್ರಶ್ನೆ ಮಾಡಿ ಪೋಷಕರನ್ನ ಕರೆದುಕೊಂಡು ಬರುವಂತೆ ತಿಳಿಸಿದ್ದಾರೆ. ಇದರಿಂದ ಹೆದರಿದ ಮಕ್ಕಳು ಶ್ರವಣಬೆಳಗೊಳದ ರೈಲು ನಿಲ್ದಾಣಕ್ಕೆ ಆಗಮಿಸಿ ಬೆಂಗಳೂರು ಕಡೆಗೆ ತೆರಳುತ್ತಿದ್ದ ರೈಲು ಹತ್ತಿದ್ದಾರೆ. ಪ್ರಯಾಣಿಕನೋರ್ವ ಗಮನಿಸಿ ಕುಣಿಗಲ್ ಸಮೀಪ ರೈಲು ಬಂದಾಗ ಪಟ್ಟಣದ ಠಾಣೆಗೆ ವಿಷಯ ಮುಟ್ಟಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ.
15 ಕಿ.ಮೀ ನಡೆದ ವಿದ್ಯಾರ್ಥಿಗಳು: ಶನಿವಾರ ಶಾಲೆ ಬಿಟ್ಟು ಸುಮಾರು 15 ಕಿ.ಮೀ ನಡೆದುಕೊಂಡೇ ಬಂದಿದ್ದ ವಿದ್ಯಾರ್ಥಿಗಳು ಮಾರ್ಗಮಧ್ಯೆ ಕಬ್ಬು, ಗೆಣಸು ತಿಂದು ಹೊಟ್ಟೆ ತುಂಬಿಸಿಕೊಂಡಿ ದ್ದಾರೆ. ಬಳಿಕ ರೈಲು ಹತ್ತಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಾರೆ. ಪ್ರಯಾಣಿಕರ ಸಮಯ ಪ್ರಜ್ಞೆಗೆ ಮಕ್ಕಳು ಪೋಷಕರ ಮಡಿಲು ಸೇರಿದ್ದಾರೆ.