ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ
Team Udayavani, Dec 26, 2019, 5:07 AM IST
ಮಂಗಳೂರು/ಉಡುಪಿ:ಯೇಸು ಕ್ರಿಸ್ತರ ಜನನದ ಹಬ್ಬವಾದ ಕ್ರಿಸ್ಮಸ್ನ್ನು ಬುಧವಾರ ಕರಾವಳಿ ಯಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಬಲಿಪೂಜೆ, ಗೋದಲಿ ರಚನೆ ನೆರವೇರಿಸಿ ಪರಸ್ಪರ ಸಿಹಿ ಹಂಚಿ, ಶುಭಾಶಯ ವಿನಿಮಯ ಮಾಡಿ ಕೊಂಡು ಕ್ರೈಸ್ತ ಬಾಂಧವರು ಹಬ್ಬವನ್ನು ಸಂಭ್ರಮಿಸಿದರು.
ಮಂಗಳವಾರ ರಾತ್ರಿ ಕೆಥೋಲಿಕ್, ಸಿರಿಯನ್, ಪ್ರೊಟೆಸ್ಟೆಂಟ್, ಮಲಂಕರ ಮೊದಲಾದ ಚರ್ಚ್ಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದವು. ಯೇಸು ಕ್ರಿಸ್ತರು ದನದ ಹಟ್ಟಿಯಲ್ಲಿ ಜನಿಸಿದರು ಎನ್ನುವುದರ ಸಂಕೇತವಾಗಿ ಚರ್ಚ್ಗಳಲ್ಲಿ ಮತ್ತು ಕ್ರೈಸ್ತರ ಮನೆಗಳಲ್ಲಿ ಆಕರ್ಷಕ ಗೋದಲಿ (ಕ್ರಿಬ್)ಗಳು ನಿರ್ಮಾಣಗೊಂಡಿದ್ದವು. ಪೂಜೆಯ ವೇಳೆ ಸಿಂಗರಿಸಿಟ್ಟ ಗೋದಲಿಯಲ್ಲಿ ಬಾಲಯೇಸು ಮೂರ್ತಿಯನ್ನು ಇಟ್ಟು ದೇವರ ಸ್ತುತಿ, ಜೋಗುಳದ ಮೂಲಕ ಭಕ್ತರು ಆರಾಧಿಸಿದರು.
ಯುವ, ಮಹಿಳಾ ಸಂಘಟನೆಗಳ ಸದಸ್ಯರಿಂದ ಸಾಂತಾಕ್ಲಾಸ್ ವೇಷ ಧರಿಸಿದ ನೃತ್ಯಗಳು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬೆಳಗ್ಗಿನಿಂದಲೇ ಕ್ರಿಸ್ಮಸ್ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು.
ಬಿಷಪ್ರಿಂದ ಬಲಿಪೂಜೆ
ಮಂಗಳೂರು ನಗರದ ಕೊಡಿಯಾಲ್ಬೈಲ್ ಬಿಷಪ್ಸ್ ಹೌಸ್ ಚಾಪೆಲ್ನಲ್ಲಿ ಮತ್ತು ಕಲ್ಯಾಣಪುರದ ಕೆಥೆಡ್ರಲ್ನಲ್ಲಿ ಕ್ರಿಸ್ಮಸ್ ಬಲಿಪೂಜೆಯನ್ನು ಬುಧವಾರ ನೆರವೇರಿಸ ಲಾಯಿತು. ಮಂಗಳೂರು ಬಿಷಪ್ ರೈ| ರೆ| ಡಾ| ಪೀಟರ್ ಪೌಲ್ ಸಲ್ಡಾನ್ಹ, ಹಿರಿಯ ಧರ್ಮಗುರು ರೆ| ಮ್ಯಾಕ್ಸಿಂ ಎಲ್. ನೊರೊನ್ಹಾ, ಸಾರ್ವಜನಿಕ ಸಂಪರ್ಕಾಧಿಕಾರಿ ವಂ| ವಿಕ್ಟರ್ ವಿಜಯ್ ಲೋಬೋ, ಉಡುಪಿ ಬಿಷಪ್ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೋ, ಪ್ರಧಾನ ಧರ್ಮಗುರು ವಂ| ಡಾ| ಲಾರೆನ್ಸ್ ಡಿ’ಸೋಜಾ, ಸಹಾಯಕ ಧರ್ಮಗುರು ವಂ| ಕೆನ್ಯೂಟ್ ನೋರೋನ್ಹಾ ಉಪಸ್ಥಿತರಿದ್ದರು.