ಬಾರಕೂರು-ಕೊಕ್ಕರ್ಣೆ ರಸ್ತೆ ವಿಸ್ತರಣೆ ಎಂದು…?
Team Udayavani, Sep 28, 2018, 6:00 AM IST
ಬ್ರಹ್ಮಾವರ: ಬಾರಕೂರಿನಿಂದ ಹನೆಹಳ್ಳಿ, ಕೂರಾಡಿ ಮೂಲಕ ಕೊಕ್ಕರ್ಣೆ ಸಂಪರ್ಕಿಸುವ ರಸ್ತೆ ದಶಕಗಳಿಂದ ವಿಸ್ತರಣೆ ಕಂಡಿಲ್ಲ. ಇತ್ತೀಚಿನ ದಿನಗಳಲ್ಲಿ ವಾಹನ ಸಂಚಾರ ಹೆಚ್ಚಿದ್ದು ವಿಸ್ತರಣೆ ಅನಿವಾರ್ಯವಾಗಿದೆ.
ಬಾರಕೂರು ಜೂನಿಯರ್ ಕಾಲೇಜಿನಿಂದ ಹನೆಹಳ್ಳಿ, ಕೂರಾಡಿ, ಕಾಡೂರು, ಮಾವಿನಕಟ್ಟೆ ಮೂಲಕ ಕೊಕ್ಕರ್ಣೆ ಸಂಪರ್ಕಿಸುವ ಮುಖ್ಯರಸ್ತೆ ಇದಾಗಿದೆ.
ಹೆಚ್ಚುತ್ತಿದೆ ವಾಹನ
ಕೂರಾಡಿ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಉದ್ಯೋಗ ನಿಮಿತ್ತ ತೆರಳುವವರು ಇದೇ ಮಾರ್ಗವನ್ನು ಅವಲಂಭಿಸಿದ್ದಾರೆ. ಖಾಸಗಿ ಬಸ್ಗಳು, ಹತ್ತಾರು ಶಾಲಾ ಬಸ್ಗಳು ತೆರಳುವ ರಸ್ತೆಯಾದರೂ ಇದುವರೆಗೆ ವಿಸ್ತರಣೆ ಆಗಿಲ್ಲ.
ಸೇತುವೆ ನಿರ್ಮಾಣ
ಪ್ರಸ್ತುತ ಕೂರಾಡಿ-ನೀಲಾವರ ಸಂಪರ್ಕ ಸೇತುವೆ ನಿರ್ಮಾಣವಾಗಿದೆ. ಇದರಿಂದ ಕೂರಾಡಿ, ಹನೆಹಳ್ಳಿ ಭಾಗದವರಿಗೆ ನೀಲಾವರ, ಕುಂಜಾಲು ಬಹಳಷ್ಟು ಹತ್ತಿರವಾಗಿದೆ. ಹಾಗೆಯೇ ನೀಲಾವರ-ಮಂದಾರ್ತಿ ಅಂತರ ಕೇವಲ 7 ಕಿ.ಮೀ.ಆಗಿದೆ. ಆದ್ದರಿಂದ ಗ್ರಾಮಾಂತರ ಭಾಗದ ರಸ್ತೆಗಳು ವಿಸ್ತರಣೆಯಾಗಬೇಕಿದೆ.
ಅಪಾಯಕಾರಿ ತಿರುವು
ಕೂರಾಡಿ ರಸ್ತೆ ಹಲವೆಡೆ ಅಪಾಯಕಾರಿ ತಿರುವುಗಳಿಂದ ಕೂಡಿದೆ. ಮಳೆಗಾಲದಲ್ಲಿ ಹುಲ್ಲು, ಗಿಡಗಳು ಬೆಳೆದು ಅಪಘಾತಕ್ಕೆ ಕಾರಣವಾಗುತ್ತಿದೆ.
ರಸ್ತೆ ದುರಸ್ತಿಯೊಂದಿಗೆ ಸಮರ್ಪಕ ಚರಂಡಿ ನಿರ್ಮಾಣ ಆವಶ್ಯಕ. ರಸ್ತೆಯ ಇಕ್ಕೆಲಗಳು ಮಳೆ ನೀರಿನಿಂದ ಕೊಚ್ಚಿ ಹೋಗಿ ಬೈಕ್ ಸವಾರರು ಸ್ಕಿಡ್ ಆಗುವ ಸಾಧ್ಯತೆ ಹೆಚ್ಚಿದೆ. ಪಾದಚಾರಿಗಳ ಪಾಡು ಹೇಳ ತೀರದು. ಶೀಘ್ರದಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಯತ್ನದಲ್ಲಿದೆ
ಬಾರಕೂರು, ಕೂರಾಡಿ, ಕೊಕ್ಕರ್ಣೆ ರಸ್ತೆ ವಿಸ್ತರಣೆಗೆ ಅನುದಾನ ಕೇಳಿ ಈ ಹಿಂದೆಯೂ ಮನವಿ ಮಾಡಲಾಗಿತ್ತು. ಈಗ ಮತ್ತೂಮ್ಮೆ ಸಚಿವರಲ್ಲಿ ಮನವಿ ಮಾಡುತ್ತೇವೆ. ನಿರಂತರ ಪ್ರಯತ್ನದಲ್ಲಿದ್ದೇವೆ.
– ಹಾಲಾಡಿ ಶ್ರೀನಿವಾಸ ಶೆಟ್ಟಿ,ಶಾಸಕ
ಮುಕ್ತಿ ಎಂದು ?
ರಸ್ತೆ ಸಮಸ್ಯೆ ಕುರಿತು ಮನವಿ ಮಾಡಿದರೆ ಜಿ.ಪಂ.ನವರು ಪಿ.ಡಬ್ಲ್ಯೂಡಿ. ಎನ್ನುತ್ತಾರೆ. ಅವರನ್ನು ಕೇಳಿದರೆ ಜಿ.ಪಂ. ಎನ್ನುತ್ತಾರೆ. ಹಾಗಾದರೆ ಈ ಸಮಸ್ಯೆಗೆ ಮುಕ್ತಿ ಎಂದು ?
– ಕೆ.ರವೀಂದ್ರನಾಥ ಶೆಟ್ಟಿ,ಕೂರಾಡಿ