ಬಸ್ಸಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ: ಇಬ್ಬರ ಸ್ಥಿತಿ ಗಂಭೀರ
Team Udayavani, Jan 9, 2020, 10:56 PM IST
ಕುಂದಾಪುರ: ಕೊಲ್ಲೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸಿನಲ್ಲಿಯೇ ತಮಿಳುನಾಡು ಮೂಲದ ಒಂದೂವರೆ ವರ್ಷದ ಗಂಡು ಮಗುವಿಗೂ ಲಘುವಾಗಿ ಕೀಟ ನಾಶ ನೀಡಿ, ದಂಪತಿ ಕೀಟ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ಸಂಭವಿಸಿದೆ. ವಿಷ ಕುಡಿದು ಹೊರಳಾಡುತ್ತಿದ್ದಂತೆ ಬಸ್ಸಿನಲ್ಲಿದ್ದ ಎಲ್ಲರಿಗೂ ಗೊತ್ತಾಗಿದ್ದು, ಕೂಡಲೇ ಅದೇ ಬಸ್ಸಿನಲ್ಲಿ ಚಾಲಕನು, ನಿರ್ವಾಹಕನ ಸಹಕಾರದೊಂದಿಗೆ ಎಲ್ಲಿಯೂ ನಿಲ್ಲಿಸದೇ ಆಸ್ಪತ್ರೆಗೆ ಕರೆದು ತಂದು ದಾಖಲಿಸಿ ಆಪತ್ಭಾಂಧವರಾಗಿ ಕಾಣಿಸಿಕೊಂಡಿದ್ದಾರೆ.
ತಮಿಳುನಾಡು ಮೂಲದ ರಾಜ್ಕುಮಾರ್ (35) ಹಾಗೂ ಪತ್ನಿ ಸಂಗೀತಾ (27) ಬಸ್ಸಿನಲ್ಲಿಯೇ ಕೀಟ ನಾಶಕ ಸೇವಿಸಿ ಆತ್ಮಹತ್ಯೆಗೆ ಮುಂದಾದವರು.
ಇವರೊಂದಿಗೆ ಒಂದೂವರೆ ವರ್ಷದ ಗಂಡು ಮಗು ಜತೆಗಿದ್ದು, ಆ ಮಗುವಿಗೂ ಲಘುವಾಗಿ ಕೀಟ ನಾಶಕ ನೀಡಿದ್ದು, ದಂಪತಿಯನ್ನು ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಗುವನ್ನು ಉಡುಪಿಯ ಬಿ.ಆರ್. ಶೆಟ್ಟಿ ತಾಯಿ- ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದೆ ಎಂದು ತಿಳಿದು ಬಂದಿದೆ.
ಇವರು ತಮಿಳುನಾಡಿನ ರಾಜಧಾನಿ ಚೆನ್ನೈ ಸಮೀಪದ ಸೆಲ್ವಂ ಎನ್ನುವ ಊರಿನವರಾಗಿದ್ದು, ಮೂಲದವರಾಗಿದ್ದು, ಸದ್ಯ ಉಡುಪಿಯ ಅಂಬಲಪಾಡಿಯ ಹೆದ್ದಾರಿ ಪಕ್ಕದ ಬಿಡಾರದಲ್ಲಿ ವಾಸವಿದ್ದು, ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. 15 ದಿನಗಳ ಹಿಂದಷ್ಟೇ ಇವರು ತಮಿಳುನಾಡಿನಿಂದ ಉಡುಪಿಗೆ ಬಂದಿದ್ದು, ರಾಜ್ ಕುಮಾರ್ಗೆ ಕುಡಿತದ ಚಟವಿದ್ದು, ಪತಿ-ಪತ್ನಿಯರಿಬ್ಬರೂ ಆಗಾಗ ಜಗಳ ಆಡುತ್ತಿದ್ದರೂ ಎನ್ನುವುದಾಗಿ ಇವರಿಗೆ ಕೆಲಸ ವಹಿಸುತ್ತಿದ್ದ ಮೇಸ್ತಿÅ ಬಾಬು ತಿಳಿಸಿದ್ದಾರೆ.
ಬಸ್ಸಿನಲ್ಲಿ ಏನಾಯಿತು?
ಕೊಲ್ಲೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಎಕೆಎಂಎಸ್ ಖಾಸಗಿ ಬಸ್ಸಿನಲ್ಲಿ ಈ ದಂಪತಿಯು ಮಗುವಿನೊಂದಿಗೆ ಕೊಲ್ಲೂರಿನಲ್ಲಿ ಬಸ್ ಹತ್ತಿದ್ದು, ಉಡುಪಿಗೆ ಟಿಕೇಟು ಪಡೆದಿದ್ದರು. ಬಸ್ನಲ್ಲಿದ್ದವರು ಹೇಳುವ ಪ್ರಕಾರ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಇವರು ವಂಡ್ಸೆ ಆಸುಪಾಸಿನಲ್ಲಿ ಕೀಟ ನಾಶಕ ಸೇವಿಸಿರಬಹುದು. ಕಟ್ಬೆಲೂ¤ರು ಸಮೀಪ ಬರುವಾಗ ಇಬ್ಬರು ಸೀಟಿನಿಂದ ಕೆಳಕ್ಕೆ ಬಿದ್ದು ಹೊರಳಾಡಿ, ಬಳಿಕ ಇಬ್ಬರೂ ಪ್ರಜ್ಞೆ ತಪ್ಪಿದ್ದಾರೆ. ಇದನ್ನು ಗಮನಿಸಿದ ನಿರ್ವಾಹಕ ಚಾಲಕನಿಗೆ ತಿಳಿಸಿದ್ದು, ಕೂಡಲೇ ಅಲ್ಲಿಂದ ಪ್ರಯಾಣಿಕರೊಂದಿಗೆಯೇ ಎಲ್ಲಿಯೂ ಬಸನ್ನು ನಿಲ್ಲಿಸದೇ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇಬ್ಬರಿಗೂ ತುರ್ತು ಚಿಕಿತ್ಸೆ ನೀಡಲಾಗಿದ್ದು, ಆದರೆ ಇಬ್ಬರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿ ಎಂದು ಜಿಲ್ಲಾಸ್ಪತ್ರೆಯ ಸರ್ಜನ್ ಡಾ| ಮಧುಸೂದನ್ ನಾಯಕ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕುಂದಾಪುರದ ಮಂಡಲದ ಬಿಜೆಪಿ ಮುಖಂಡ ಶಂಕರ ಅಂಕದಕಟ್ಟೆ ಹಾಗೂ ಸಾರ್ವಜನಿಕರು, ಮತ್ತಿತರರು ಆಗಮಿಸಿ ತುರ್ತು ಕ್ರಮಕೈಗೊಳ್ಳುವಲ್ಲಿ ಸಹಕರಿಸಿದರು.
ಮಾನವೀಯತೆ ಮೆರೆದ ಬಸ್ ಚಾಲಕ, ನಿರ್ವಾಹಕ
ದಂಪತಿ ಬಸ್ಸಿನಲ್ಲಿಯೇ ಕೀಟ ನಾಶಕ ಸೇವಿಸಿ, ಹೊರಳಾಡುತ್ತಿದ್ದನ್ನು ಬಸ್ ನಿರ್ವಾಹಕ ಸತೀಶ್ ಹಾಗೂ ಇತರೆ ಪ್ರಯಾಣಿಕರು ಕಟ್ ಬೆಲೂ¤ರು ಸಮೀಪ ನೋಡಿದ್ದು, ಕೂಡಲೇ ಅವರು ಬಸ್ ಚಾಲಕ ಇಕ್ಭಾಲ್ ಗಮನಕ್ಕೆ ತರುತ್ತಾರೆ. ಅಲ್ಲಿಂದ ಹೆಮ್ಮಾಡಿ, ತಲ್ಲೂರು, ಕುಂದಾಪುರ ಬಸ್ ನಿಲ್ದಾಣಗಳಲ್ಲಿ ಎಲ್ಲಿಯೂ ಬಸನ್ನು ನಿಲ್ಲಿಸದೇ, ಪ್ರಯಾಣಿಕರನ್ನು ಇಳಿಸದೇ, ನೇರವಾಗಿ ಹೆಡ್ಲೈಟ್ ಹಾಕಿ, ತ್ವರಿತಗತಿಯಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆ ತಂದು ದಾಖಲಿಸಿ, ಆಪತ್ಭಾಂಧವನಾಗಿ ಕಾಣಿಸಿಕೊಳ್ಳುತ್ತಾರೆ. ಸರಕಾರಿ ಆಸ್ಪತ್ರೆ ವೈದ್ಯರಿಗೂ ಮೊದಲೇ ಮಾಹಿತಿ ನೀಡಿದ್ದು, ಇದಲ್ಲದೆ ಚಾಲಕ ಇಕ್ಬಾಲ್ ಅವರು ಆಂಬುಲೆನ್ಸ್ನಲ್ಲಿ ಆ ಮಗುವನ್ನು ಹಿಡಿದುಕೊಂಡೇ ಉಡುಪಿಯ ಅಜ್ಜರಕಾಡಿನ ಆಸ್ಪತ್ರೆವರೆಗೂ ಪ್ರಯಾಣಿಸಿದ್ದು, ಚಾಲಕ ಹಾಗೂ ನಿರ್ವಾಹಕರ ಮಾನವೀಯ ನಡೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ