ಬಾಳೆಬರೆ ಘಾಟಿ ಅಭಿವೃದ್ಧಿಗೆ ಚಾಲನೆ; 3 ಕೋ.ರೂ. ವೆಚ್ಚ; ಬೇಕಿದೆ ಇನ್ನಷ್ಟು ಅನುದಾನ
1 ಕಿ.ಮೀ. ಅಭಿವೃದ್ಧಿ ಕಾಮಗಾರಿ ಆರಂಭ
Team Udayavani, Nov 26, 2022, 7:53 AM IST
ಕುಂದಾಪುರ: ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾದ ಬಾಳೆಬರೆ (ಹುಲಿಕಲ್) ಘಾಟಿ ಅಭಿವೃದ್ಧಿಗೆ ಯೋಜನೆ ಸಿದ್ಧಗೊಂಡಿದ್ದು, ವಿಸ್ತರಣೆಗೆ ಚಾಲನೆ ನೀಡಲಾಗಿದೆ. ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ 3 ಕೋ.ರೂ. ವೆಚ್ಚದಲ್ಲಿ 1 ಕಿ.ಮೀ. ದೂರದವರೆಗೆ ಅಭಿವೃದ್ಧಿಯಾಗಲಿದೆ. ಬಾಕಿ ಉಳಿದ 3.5 ಕಿ.ಮೀ. ಕಾಂಕ್ರೀಟಿಕರಣಕ್ಕೆ ಇನ್ನಷ್ಟು ಅನುದಾನದ ಅಗತ್ಯವಿದೆ.
ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳನ್ನು ಬೆಸೆಯುವ ಬಾಳೆಬರೆ ಘಾಟಿಯು ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ 8 ಕಿ.ಮೀ. ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ 6.5 ಕಿ.ಮೀ. ಉದ್ದವಿದೆ. ಒಟ್ಟಾರೆ ಇಡೀ ಹುಲಿಕಲ್ ಚೆಕ್ಪೋಸ್ಟ್ನಿಂದ ಹೊಸಂಗಡಿ ಘಾಟಿಯ ಬುಡದವರೆಗೆ 14.5 ಕಿ.ಮೀ. ದೂರವಿದೆ. ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ 8 ಕಿ.ಮೀ. ರಸ್ತೆಯು ಈಗಾಗಲೇ ಸಂಪೂರ್ಣ ಕಾಂಕ್ರೀಟಿಕರಣಗೊಂಡಿದೆ. ಉಡುಪಿ ಜಿಲ್ಲೆಯ 6.5 ಕಿ.ಮೀ. ರಸ್ತೆಯ ಪೈಕಿ 2 ಕಿ.ಮೀ. ಈಗಾಗಲೇ ಕಾಂಕ್ರೀಟಿಕರಣಗೊಂಡಿದೆ.
ಪ್ರಮುಖ ಘಾಟಿ
ಶಿರಾಡಿ, ಚಾರ್ಮಾಡಿ ಘಾಟಿಗಳಂತೆಯೇ ಅತ್ಯಂತ ಹೆಚ್ಚಿನ ವಾಹನಗಳ ಒತ್ತಡವಿರುವ ಬಾಳೆಬರೆ ಘಾಟಿಯು ಹಲವು ಕಡಿದಾದ ತಿರುವು, ಒಂದು ಹೇರ್ ಪಿನ್ ಮಾದರಿ ಅಪಾಯಕಾರಿ ತಿರುವನ್ನು ಹೊಂದಿದೆ. ಆಗಾಗ ಅಪಘಾತ, ಮಳೆಗಾಲದಲ್ಲಿ ತಡೆಗೋಡೆ ಕುಸಿತ ಸಾಮಾನ್ಯ. ಮಂಗಳೂರು, ಉಡುಪಿ, ಕುಂದಾಪುರ ಭಾಗದಿಂದ ಬೆಂಗಳೂರು, ದಾವಣಗೆರೆ, ಬಳ್ಳಾರಿ, ಶಿವಮೊಗ್ಗ, ಹೈದರಾಬಾದ್ ಮೊದಲಾದೆಡೆಗೆ ಇದೇ ಘಾಟಿ ಮೂಲಕ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಶಿರಾಡಿ, ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡರೆ ಈ ಘಾಟಿಯೇ ಕರಾವಳಿಯಿಂದ ರಾಜಧಾನಿಗೆ ಪ್ರಮುಖ ಸಂಪರ್ಕ ಸೇತುವಾಗಿದೆ. 2020ರ ವಾಹನ ಗಣತಿ ಪ್ರಕಾರ ಈ ಘಾಟಿಯಲ್ಲಿ ದಿನಕ್ಕೆ ಸರಾಸರಿ 4,935 ವಾಹನಗಳು ಸಂಚರಿಸುತ್ತವೆ.
ಪ್ರಸ್ತುತ ಲೋಕೋಪ ಯೋಗಿ ಇಲಾಖೆ ಯಿಂದ 3 ಕೋ.ರೂ. ಮಂಜೂರಾಗಿದ್ದು, ಅದರಡಿ 870 ಮೀ. ಕಾಂಕ್ರೀಟಿಕರಣ, 7 ಮೀ. ವಿಸ್ತರಣೆ, ಚರಂಡಿ, ಕುಸಿಯುವ ಭೀತಿ ಇರುವಲ್ಲಿ ರಕ್ಷಣ ಗೋಡೆಗಳ ನಿರ್ಮಾಣವಾಗಲಿದೆ. ಇನ್ನು ಶಿವಮೊಗ್ಗ ವ್ಯಾಪ್ತಿ ಯಲ್ಲಿ 10 ಕೋ.ರೂ. ಮಂಜೂರಾಗಿದ್ದು ವಿಸ್ತರಣೆ, ತಡೆಗೋಡೆ ಸಹಿತ ಇನ್ನಿತರ ಕಾಮಗಾರಿ ನಡೆಯಲಿದೆ. ಘಾಟಿಯುದ್ದಕ್ಕೂ ಮರು ಡಾಮರೀಕರಣ ಕಾಮಗಾರಿ ನಿರ್ವಹಣ ವೆಚ್ಚದಲ್ಲಿ ಆಗಲಿದೆ. ಬಾಕಿ ಉಳಿದ 3.5 ಕಿ.ಮೀ. ರಸ್ತೆ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
– ದುರ್ಗಾದಾಸ್,
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ ಕುಂದಾಪುರ
-ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್