ಕೊಂಕಣಿ ಸಾಹಿತ್ಯ ಸಮ್ಮೇಳನ: ಶೋಭಾಯಾತ್ರೆ
Team Udayavani, Mar 21, 2021, 2:40 AM IST
ಉಡುಪಿ: ಮಣಿಪಾಲದ ಆರ್ಎಸ್ಬಿ ಸಭಾಭವನದಲ್ಲಿ ಎರಡು ದಿನದ ಕೊಂಕಣಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಸಿಂಡಿಕೇಟ್ ಸರ್ಕಲ್ನಿಂದ ಹೊರಟ ಭವ್ಯ ಶೋಭಾಯಾತ್ರೆಗೆ ಮಣಿಪಾಲದ ಡಾ| ಟಿಎಂಎ ಪೈ ಫೌಂಡೇಶನ್ ಕಾರ್ಯದರ್ಶಿ ಟಿ. ಅಶೋಕ್ ಪೈ ಅವರು ತೆಂಗಿನ ಸಸಿಗೆ ನೀರುಣಿಸುವ ಮೂಲಕ ಶನಿವಾರ ಚಾಲನೆ ನೀಡಿದರು.
ಸಿಂಡಿಕೇಟ್ ಸರ್ಕಲ್ನಿಂದ ಟೈಗರ್ ಸರ್ಕಲ್ ಸುತ್ತುವರಿದು ಕೆನರಾ ಬ್ಯಾಂಕ್ ಪ್ರಧಾನ ಕಚೇರಿ ಎದುರಿನ ಮಾರ್ಗದಲ್ಲಿ ಆರ್ಎಸ್ಬಿ ಸಭಾಭವನದ ಮೆರವಣಿಗೆ ಸಾಗಿ ಬಂತು. ಜನಪದ-ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಕಲಾಪ್ರಕಾರಗಳು ಗಮನಸೆಳೆದವು.
ಸಮ್ಮೇಳನ ಅಧ್ಯಕ್ಷ ಡಾ| ಕಸ್ತೂರಿ ಮೋಹನ್ ಪೈ, ಟಿ. ಅಶೋಕ್ ಪೈ, ಸಮ್ಮೇಳನ ಸಂಘಟನ ಸಮಿತಿ ಗೌರವಾಧ್ಯಕ್ಷ ಗೋಕುಲದಾಸ್ ನಾಯಕ್ ಅವರನ್ನು ತೆರದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆ ತರಲಾಯಿತು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಕೆ. ಜಗದೀಶ್ ಪೈ, ರಿಜಿಸ್ಟ್ರಾರ್ ಮನೋಹರ ಕಾಮತ್, ಸಮ್ಮೇಳನ ಸಂಘಟನ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಠಾಕೂರ್, ಸಂಘಟನ ಸಮಿತಿ ಪ್ರಧಾನ ಸಂಚಾಲಕಿ ಪೂರ್ಣಿಮಾ ಸುರೇಶ್, ಪ್ರಧಾನ ಕಾರ್ಯದರ್ಶಿ ಅಮೃತ್ ಶೆಣೈ, ಸಮಿತಿಯ ಗೌರವ ಸಲಹೆಗಾರರು, ಅಕಾಡೆಮಿ ಸದಸ್ಯರು, ವಿವಿಧ ಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಕೊಂಕಣಿ ಮಾತನಾಡುವ ವಿವಿಧ ಸಮುದಾಯವರು ಉಪಸ್ಥಿತರಿದ್ದರು.