ಕಾರ್ಯ-ಕಾರ್ಯೇತರ ಆಯಾಮಗಳಲ್ಲಿ ವ್ಯಕ್ತಿತ್ವ ವಿಕಸನ
Team Udayavani, Jan 28, 2017, 3:40 AM IST
ಉಡುಪಿ: ಜೀವನದಲ್ಲಿ ಕಾರ್ಯ ಮತ್ತು ಕಾರ್ಯೇತರ ವಿಭಾಗಗಳನ್ನಾಗಿ ಮಾಡಿ ಕೆಲವು ಉತ್ತಮಾಂಶಗಳನ್ನು ರೂಢಿಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಕಮಿನ್ಸ್ ಇಂಡಿಯಾ ಲಿ. ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ, ಮಣಿಪಾಲ ಎಂಐಟಿ ಪ್ರಾಕ್ತನ ವಿದ್ಯಾರ್ಥಿ ಅನಂತ ಜೆ. ತಲೌಲಿಕರ್ ಕರೆ ನೀಡಿದರು. ಮಣಿಪಾಲ ಎಂಐಟಿ ವಜ್ರಮಹೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಮೊದಲು ಕಾರ್ಯಕ್ಷೇತ್ರದಲ್ಲಿ ವ್ಯಕ್ತಿತ್ವ ವಿಕಸನ ಕ್ರಮವನ್ನು ವಿವರಿಸಿದರು. ಸ್ವಂತ ಕೆಲಸವಿರಲಿ, ನೌಕರಿಯಾಗಿರಲಿ ತಮ್ಮ ಮನಸ್ಸಿಗೆ ಒಪ್ಪುವಂತಹ ಕೆಲಸಗಳನ್ನು ಮಾಡಬೇಕು. ಕೆಲವು ದೌರ್ಬಲ್ಯಗಳಿದ್ದರೂ ಬಲ ಮತ್ತು ದೌರ್ಬಲ್ಯಗಳ ನಡುವೆ ನಿಷ್ಠೆಯಿಂದ ‘ಸತ್ಯಮೇವ ಜಯತೇ’ ಎಂಬ ನೀತಿ ವಾಕ್ಯದಂತೆ ಕೆಲಸ ಮಾಡಬೇಕು ಎಂದು ಹೇಳಿದರು.
ಯಾವುದೇ ಕೆಲಸವಾದರೂ ಸಂತೋಷಪಟ್ಟು ಕೌಶಲ ತೋರಬೇಕು. ತಮಗಾಗದ ವಿಭಿನ್ನ ಧೋರಣೆಯವರು, ವಿಭಿನ್ನ ಜಾತಿ, ಸಮುದಾಯದವರಿದ್ದರೂ ಪ್ರೀತಿಸಬೇಕು. ಉತ್ಪಾದನೆ, ಯೋಜನೆಗಳನ್ನು ಹಾಕಿಕೊಳ್ಳುವಾಗ ಅಡ್ಡಗೋಡೆಗಳನ್ನು ಕೆಡವಿ ಜಾಗತೀಕರಣದ ಮನಃಸ್ಥಿತಿಯನ್ನು ನಿರ್ಮಿಸಿಕೊಳ್ಳಬೇಕು. ಲಕ್ಷಾಂತರ ಯುವಕರಿಗೆ ಮಣಿಪಾಲದಂತಹ ಸಂಸ್ಥೆಗಳಲ್ಲಿ ಓದಲು ಅವಕಾಶ ದೊರಕುವುದಿಲ್ಲ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಹವ್ಯಾಸ, ಆರೋಗ್ಯ ಮುಖ್ಯ
ಕಾರ್ಯೇತರ ವಿಭಾಗವನ್ನು ನೋಡುವಾಗ ಸಂಗೀತವೇ ಮೊದಲಾದ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಬೇಕು. ಆರೋಗ್ಯ ಬಹಳ ಮುಖ್ಯ. ಯೋಗ, ವ್ಯಾಯಾಮದ ಅಭ್ಯಾಸ ಬೆಳೆಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಯಮ ನಿಯಮವೇ ಮೊದಲಾದ ಯೋಗದ ವಿವಿಧ ಮಜಲುಗಳನ್ನು ದಾಟುತ್ತಿದ್ದಂತೆ ಆಂತರಿಕವಾಗಿ ಈಜಾಡಬೇಕು. ಸಂಸ್ಥೆ, ಸಂಬಂಧಿಕರನ್ನು ಪ್ರೀತಿಸುವ ಮೂಲಕ ಕಾಮ, ಕ್ರೋಧ, ಲೋಭವೇ ಮೊದಲಾದ ಅರಿಷಡ್ವರಿಗಳನ್ನು ನಿಯಂತ್ರಿಸಬಹುದು ಎಂದು ತಲೌಲಿಕರ್ ನುಡಿದರು.
ಮಣಿಪಾಲ- ವಿಸ್ತರಣೆ
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ವಿ.ವಿ. ಕುಲಪತಿ ಡಾ| ಎಚ್. ವಿನೋದ ಭಟ್ ಮಾತನಾಡಿ, ಆರಂಭದಲ್ಲಿ ಒಟ್ಟು 500 ವಿದ್ಯಾರ್ಥಿಗಳಿದ್ದರು. ಈಗ ವಿ.ವಿ.ಯಲ್ಲಿ 30,000 ವಿದ್ಯಾರ್ಥಿಗಳಿದ್ದಾರೆ. ದೇಶ, ವಿದೇಶಗಳಲ್ಲಿ ಕಾಂಪಸ್ ಇವೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಕ್ಯಾಂಪಸ್ ಹೊಂದುವ ಯೋಜನೆ ಇದೆ. ಎಂಐಟಿಗೆ 60 ವರ್ಷಧಿವಾದರೆ ವಿ.ವಿ.ಗೆ ಮುಂದಿನ ವರ್ಷ 25 ವರ್ಷವಾಗುತ್ತಿದೆ. ವಿ.ವಿ.ಯಲ್ಲಿ 20 ಸಂಸ್ಥೆಗಳು, 71 ವಿಭಾಗ, ಕೇಂದ್ರಗಳಿವೆ. ಎಂಐಟಿ ಬೆಳೆದುಬಂದ ಬಗೆ ತಲೌಲಿಕರ್ ಅವರಂತಹವರಲ್ಲಿ ಪ್ರತಿಫಲಿಸುತ್ತಿದೆ ಎಂದರು.
ಜಾಗತಿಕ ಸ್ಥಾನ
ವಿವಿಧ ಸಂಸ್ಥೆಗಳು ನಡೆಸುತ್ತಿರುವ ಸಂಶೋಧನ ಸಾಧನೆಗಳು ಐದು ವರ್ಷಗಳಲ್ಲಿ ಶೇ. 300 ಹೆಚ್ಚಿದೆ. ಸಂಶೋಧನ ಅನುದಾನ 100 ಕೋ.ರೂ. ಬಂದಿದೆ. ಎಂಐಟಿಯಲ್ಲಿ ಸಂಶೋಧನೆಗಾಗಿಯೇ ಇನ್ಕ್ಯುಬೇಟರ್ ಇದ್ದು ಬಯೋಮೆಡಿಕಲ್ ಡಿವೈಸಸ್ ಮತ್ತು ಉತ್ಪಾದನ ಕ್ಷೇತ್ರಕ್ಕೆ ಸಂಬಂಧಿಸಿ ಇನ್ನೂ ಎರಡು ಇನ್ಕ್ಯುಬೇಟರ್ ಬರಲಿದೆ. 2020ರಲ್ಲಿ ಜಗತ್ತಿನ ಶ್ರೇಷ್ಠ 200 ವಿ.ವಿ.ಗಳಲ್ಲಿ ಒಂದಾಗಿ ಮಣಿಪಾಲ ವಿ.ವಿ. ಮೂಡಿಬರುವ ಎಲ್ಲ ವಿಶ್ವಾಸಗಳೂ ಇವೆ. ಇದಕ್ಕೆ ಪೂರಕವಾಗಿ ಹಲವು ಮಾನ್ಯತೆಗಳು ವಿ.ವಿ.ಗೆ ಬಂದಿವೆ. ಹಿಂದಿನಿಂದಲೂ ಲಾಭದಾಯಕ ದೃಷ್ಟಿ ಹೊಂದಿರದೆ ಸಲ್ಲಿಸಿದ ಸೇವೆಯಿಂದಾಗಿ ಈ ಎಲ್ಲ ಸಾಧನೆಗಳು ಮೂಡಿಬಂದಿವೆ ಎಂದು ಡಾ| ವಿನೋದ ಭಟ್ ತಿಳಿಸಿದರು.
ಅಂಚೆ ಚೀಟಿ – ಲಕೋಟೆ ಬಿಡುಗಡೆ
ವಜ್ರ ಮಹೋತ್ಸವದ ಅಂಗವಾಗಿ ಅಂಚೆ ಇಲಾಖೆ ಹೊರತಂದ ಅಂಚೆ ಚೀಟಿ, ವಿಶೇಷ ಲಕೋಟೆಯನ್ನು ದಕ್ಷಿಣ ಕರ್ನಾಟಕ ಪ್ರದೇಶದ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಬಿಡುಗಡೆಗೊಳಿಸಿದರು. ಉದ್ಯಮಿಗಳೂ ಪ್ರಾಕ್ತನ ವಿದ್ಯಾರ್ಥಿಗಳೂ ಆದ ಸಚಿನ್ ಮೆನನ್, ಥಾಮಸ್ ಚೆರುಕರ ಅವರನ್ನು ಅಭಿನಂದಿಸಲಾಯಿತು. ಎಂಐಟಿ ನಿರ್ದೇಶಕ ಡಾ| ಜಿ.ಕೆ. ಪ್ರಭು ಸ್ವಾಗತಿಸಿ, ಜಂಟಿ ನಿರ್ದೇಶಕ ಡಾ| ಬಿ.ಎಚ್.ವಿ. ಪೈ ವಂದಿಸಿದರು. ವಜ್ರ ಮಹೋತ್ಸವ ಸಮಿತಿ ಅಧ್ಯಕ್ಷ ಡಾ| ರಮೇಶ್ ಸಿ. ಅತಿಥಿಗಳನ್ನು ಪರಿಚಯಿಸಿದರು. ಪ್ರಾಧ್ಯಾಪಕರಾದ ಅಗಸ್ಟಿನ್ ಬರ್ಬೋಜ, ಡಾ| ಸುಮಾ ಎ. ರಾವ್ ಕಾರ್ಯಕ್ರಮ ನಿರ್ವಹಿಸಿಧಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ದರ್ಶನ್ ನಾಂದೇಕರ್ ಉಪಸ್ಥಿತರಿದ್ದರು.
‘ಆ ಚಲ್ ಕೇ ತುಜೇ ಮೈ ಲೇಕೆ ಚಲೂಂ…’
ಅನಂತ್ ತಲೌಲಿಕರ್ ಅವರು ಆರಂಭ ಮತ್ತು ಕೊನೆಯಲ್ಲಿ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳನ್ನೂ ಹಿರಿಯರನ್ನೂ ರಂಜಿಸಿದರು. ಕಿಶೋರ್ ಬೆನಕುಮಾರ್ ಅವರು ‘ದೂರ್ ಗಗನ್ ಕೀ ಚಾಹೋ ಮೇ’ ಚಲನಚಿತ್ರಕ್ಕೆ ದಶಕಗಳ ಹಿಂದೆ ಹಾಡಿ ಜನಪ್ರಿಯಗೊಂಡ ‘ಆ ಚಲ್ ಕೇ ತುಜೇ ಮೈ ಲೇಕೆ ಚಲೂಂ ಏಕ್ ಐಸೆ ಗಗನ್ ಕೇ ತಲೇ…’ ಹಾಡನ್ನು ತಲೌಲಿಕರ್ ಸುಶ್ರಾವ್ಯವಾಗಿ ಹಾಡಿದರು. ಆರಂಭದಲ್ಲಿ ತಾವು ವಿದ್ಯಾರ್ಥಿ ದೆಸೆಯಲ್ಲಿರುವಾಗ ಹಾಡುತ್ತಿದ್ದ ಇಂಗ್ಲಿಷ್ ಹಾಡನ್ನು ಆರಂಭದಲ್ಲಿ ಹಾಡಿದರು. ಸಂಗೀತದಂತಹ ಹವ್ಯಾಸಗಳು ವ್ಯಕ್ತಿತ್ವ ವಿಕಸನಕ್ಕೆ ಅಗತ್ಯ ಎಂದೂ ಅವರು ಪ್ರತಿಪಾದಿಸಿದರು. 1984ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಕಲಿಯುತ್ತಿದ್ದ ಸಮಯದ ಕೆಲವು ಘಟನೆಗಳನ್ನು, ಎಚ್ಕೆವಿ ರಾವ್ ಅವರಂತಹ ಶಿಕ್ಷಕರನ್ನು ತಲೌಲಿಕರ್ ನೆನಪಿಸಿಕೊಂಡರು. ಮೂಲತಃ ಗೋವಾದವನಾದ ತಾನು, ಮುಂಬಯಿಯಲ್ಲಿ ನೆಲೆಸಿ ಮಧ್ಯಮ ವರ್ಗದಿಂದ ಬಂದರೂ ಎಂಐಟಿಯ ಪ್ರೇರಣೆಯಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಅವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ