ಪೆರ್ಣಂಕಿಲ: ಜಮೀನು ಸಕ್ರಮ ಮಾಡಲು ಲಂಚ… ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಗ್ರಾಮಲೆಕ್ಕಾಧಿಕಾರಿ
Team Udayavani, Dec 20, 2022, 10:27 PM IST
ಉಡುಪಿ: ನಗದು ಸ್ವೀಕರಿಸುತ್ತಿದ್ದಾಗ ಗ್ರಾಮಲೆಕ್ಕಾಧಿಕಾರಿ ಲೋಕಾಯುಕ್ತ ಪೊಲೀಸರಿಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ನಡೆದಿದೆ.
ಪೆರ್ಣಂಕಿಲದ ನಿವಾಸಿಯೊಬ್ಬರು ಗ್ರಾಮದ ಸರ್ವೆ ನಂ 171/1ರಲ್ಲಿ 1.15 ಎಕರೆ ಜಮೀನನ್ನು ಸಕ್ರಮ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು. ಅರ್ಜಿಗೆ ಸಂಬಂಧಿಸಿ ಗ್ರಾಮದ ಲೆಕ್ಕಾಧಿಕಾರಿ ಹರೀಶ್ ಎನ್.ಪಿ. ಅವರು ಜಮೀನು ಸಕ್ರಮ ಮಾಡಿಕೊಡಲು 10 ಸಾವಿರ ರೂ. ಬೇಡಿಕೆ ಇರಿಸಿದ್ದರು. ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿತ್ತು. ಮಂಗಳೂರು ಲೋಕಾಯುಕ್ತ ಎಸ್ಪಿ ಲಕ್ಷ್ಮೀ ಗಣೇಶ್ ಕೆ. ಅವರ ಮಾರ್ಗದರ್ಶನದಲ್ಲಿ ಉಡುಪಿ ಲೋಕಾಯುಕ್ತ ಠಾಣೆಯ ಪ್ರಭಾರ ಉಪಾಧೀಕ್ಷಕ ಜಯರಾಮ ಡಿ. ಗೌಡ ಅವರ ನೇತೃತ್ವದಲ್ಲಿ ಉಪಾಧೀಕ್ಷಕಿ ಕಲಾವತಿ ಕೆ. ಹಾಗೂ ಸಿಬಂದಿ ಮಂಗಳವಾರ ಟ್ರ್ಯಾಪ್ ಕಾರ್ಯಾಚರಣೆ ನಡೆಸಿದರು.
ಈ ವೇಳೆ ಆರೋಪಿ ಹರೀಶ್ 10 ಸಾವಿರ ರೂ.ತೆಗೆದುಕೊಳ್ಳುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು. ಲಂಚದ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಲೋಕಾಯುಕ್ತ ಎಸ್ ಪಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ವಿದ್ಯಾರ್ಥಿಗಳಿಂದ ಅಯ್ಯಪ್ಪ ವ್ರತಧಾರಿ ವಿದ್ಯಾರ್ಥಿಗೆ ಹಲ್ಲೆ