ಉಡುಪಿ ರೈಲು ನಿಲ್ದಾಣ : ಸ್ವಚ್ಛತಾ ಪಾಕ್ಷಿಕ ಅಭಿಯಾನಕ್ಕೆ ಚಾಲನೆ
Team Udayavani, Aug 18, 2017, 6:35 AM IST
ಉಡುಪಿ: ಭಾರತೀಯ ರೈಲ್ವೆ ಮಂತ್ರಾಲಯದ ನಿರ್ದೇಶನದಂತೆ ದೇಶದ ಪ್ರತಿ ರೈಲು ನಿಲ್ದಾಣಗಳಲ್ಲೂ ಸ್ವಚ್ಛತೆಯ ಬಗ್ಗೆ ಜನಜಾಗೃತಿ ಉದ್ದೇಶದಿಂದ ರೈಲ್ವೆ ಯಾತ್ರಿಕರ ಸಂಘದ ಸಹಯೋಗದೊಂದಿಗೆ ಆಯೋಜಿಸಲಾದ ಸ್ವಚ್ಛತಾ ಪಾಕ್ಷಿಕ ಅಭಿಯಾನಕ್ಕೆ ಉಡುಪಿ ರೈಲು ನಿಲ್ದಾಣದಲ್ಲಿ ಕೊಂಕಣ ರೈಲ್ವೆಯ ಪ್ರಾಂತೀಯ ಸಂದೇಶ ಮತ್ತು ದೂರವಾಣಿ ಅಭಿಯಂತರ ಸಂತೋಷ್ ಶೀಟುಕರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಂತೋಷ್ ಈ ಅಭಿಯಾನವು ಆ. 16 ರಿಂದ 31 ರವರೆಗೆ ನಿರಂತರ 15 ದಿನಗಳ ಕಾಲ ನಡೆಯಲಿದ್ದು, ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ, ರೈಲು ನಿಲ್ದಾಣಗಳ ಸಿಬಂದಿಗೆ ಅಥವಾ ಪ್ರಸ್ತಾವಿತ ರೈಲು ನಿಲ್ದಾಣಕ್ಕೆ ಮಾತ್ರ ಸೀಮಿತವಾಗಿರದೆ ನಿಲ್ದಾಣದ ಸುತ್ತ ಮುತ್ತಲಿನ ಪರಿಸರಗಳ ಸಾರ್ವಜನಿಕ ಆಸ್ತಿ- ಪಾಸ್ತಿಗಳಾದ ರಸ್ತೆಗಳು, ಬಸ್ಸು ನಿಲ್ದಾಣಗಳು, ಮಠ ಮಂದಿರಗಳು, ಶಾಲಾ ಕಾಲೇಜುಗಳು ಹೀಗೆ ಎಲ್ಲ ಕಡೆ ಸಂಚರಿಸಿ ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮ ಇದಾಗಿದೆ ಎಂದರು.
ರೈಲ್ವೆ ಯಾತ್ರಿಕರ ಸಂಘದ ಅಧ್ಯಕ್ಷ ಆರ್. ಎಲ್ ಡಯಾಸ್, ಕಾರ್ಯದರ್ಶಿ ಮಂಜುನಾಥ ಮಣಿಪಾಲ, ನಿರ್ದೇಶಕ ಪ್ರಭಾಕರ್ ಆಚಾರ್ಯ, ಜೋನ್ ರೆಬೆಲ್ಲೊ, ಸದಾನಂದ ಅಮೀನ್, ಕೊಂಕಣ್ ರೈಲ್ವೆಯ ಕಮರ್ಷಿಯಲ್ ಸೂಪರ್ ವೈಸರ್ಗಳಾದ ಸತೀಶ್ ಹೆಗ್ಡೆ, ರಮೇಶ್ ಶೆಟ್ಟಿ, ವಿಭಾಗ ಅಭಿಯಂತರರಾದ ಥಾಮಸ್, ಚಂದ್ರನ್, ಸ್ಟೇಷನ್ ಮಾಸ್ಟರ್ ವಿನೋದ್, ಮೀಸಲು ಪೊಲೀಸ್ ಪಡೆ ನಿರೀಕ್ಷಕ ಶಿವರಾಂ ರಾಥೋಡ್, ಸಂತೋಷ್ ಗಾಂವಕರ್ ಉಪಸ್ಥಿತರಿದ್ದರು.