ಕೋವಿಡ್: ಇನ್ನಷ್ಟು ಕಾಳಜಿ ಅಗತ್ಯ: ರೂಪಾಲಿ
Team Udayavani, Sep 7, 2020, 4:13 PM IST
ಕಾರವಾರ: ಕೋವಿಡ್ ಕಾಯಿಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರವಿವಾರ ಒಂದೇ ದಿನ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಅಂದರೆ 238 ರಷ್ಟು ಜನರಲ್ಲಿ ಸೋಂಕು ಪತ್ತೆಯಾಗಿದೆ.
ನನ್ನ ಕ್ಷೇತ್ರದಲ್ಲೂ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಕಾಯಿಲೆಯನ್ನು ಲಘುವಾಗಿ ಪರಿಗಣಿಸದೆ ಸಾರ್ವಜನಿಕರು ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ವಿನಂತಿಸಿದ್ದಾರೆ. ಅಮಾಯಕ ಜನರು, ವೈದ್ಯರು, ಜನಪ್ರತಿನಿಧಿಗಳು, ಕೋವಿಡ್ ವಾರಿಯರ್ಸ್, ಅಧಿಕಾರಿಗಳು ಹೀಗೆ ಕೋವಿಡ್ ಎಲ್ಲರನ್ನೂ ಕಾಡುತ್ತಿದೆ. ಜನರನ್ನು ಅಕಾಲಿಕವಾಗಿ ಬಲಿ ಪಡೆಯುತ್ತಿದೆ. ಕಾಯಿಲೆ ನಿಯಂತ್ರಣ ಹಾಗೂ ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಂಡಿದೆ. ಹಾಗಿದ್ದರೂ ಇಂತಹ ಸೂಕ್ಷ¾ ಸಮಯದಲ್ಲಿ ಆದಷ್ಟೂ ಹೆಚ್ಚು ಎಚ್ಚರಿಕೆಯಿಂದ ಇದ್ದು ಸರ್ಕಾರ ನಿಯಮಾವಳಿ ಪಾಲಿಸಿ ಕೈಜೋಡಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ ಎಂದಿದ್ದಾರೆ.
ಕೋವಿಡ್ ನಿಯಂತ್ರಣದ ಜತೆ ಆರ್ಥಿಕ ಅಭಿವೃದ್ಧಿಯನ್ನೂ ಸಾಧಿಸ ಬೇಕಾದ ಹಿನ್ನೆಲೆಯಲ್ಲಿ ಸರ್ಕಾರ ಬಹುತೇಕ ನಿಬಂಧ ನೆಗಳನ್ನುಸಡಿಲಿಸಿದೆ. ಜನತೆಗೆ ಮುಕ್ತ ಸಂಚಾರ ಆರಂಭವಾಗಿದ್ದರಿಂದ ಕೋವಿಡ್ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಇನ್ನಷ್ಟು ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸುವುದು ಅವಶ್ಯಕವಾಗಿದೆ ಎಂದು ಶಾಸಕಿ ಹೇಳಿದ್ದಾರೆ.
ತುರ್ತು ಕೆಲಸ ಇದ್ದಲ್ಲಿ ಮಾತ್ರ ಮನೆಯಿಂದ ಹೊರಹೋಗಬಹುದು, ಪ್ರತಿಯೊಬ್ಬರೂ ಮಾಸ್ಕ್ ಧರಿಸದೆ ಮನೆಯಿಂದ ಹೊರಬೀಳಬೇಡಿ. ಪೇಟೆ ಪಟ್ಟಣಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಬೇರೆ ರಾಜ್ಯ ಅಥವಾ ಕೋವಿಡ್ ಹೆಚ್ಚಿರುವ ಪ್ರದೇಶದಿಂದ ನಿಮ್ಮ ಮನೆಗೆ ಯಾರೇ ಬಂದರೂ ಅವರನ್ನು ಕೆಲ ದಿನಗಳ ಮಟ್ಟಿಗೆ ಪ್ರತ್ಯೇಕವಾಗಿರಿಸಿ, 60 ವರ್ಷ ಮೇಲ್ಪಟ್ಟವರು, ಚಿಕ್ಕ ಮಕ್ಕಳು ಇನ್ನಷ್ಟು ಎಚ್ಚರಿಕೆ ವಹಿಸಬೇಕು ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ವಿನಂತಿಸಿದ್ದಾರೆ.