ಭಟ್ಕಳ: ಮಳೆ ನೀರಿನಿಂದ ಅವಾಂತರ… ಸಮಸ್ಯೆ ಶೀಘ್ರ ಬಗೆಹರಿಸಲು ಕ್ರಮ: ಜಿಲ್ಲಾಧಿಕಾರಿ
Team Udayavani, Jul 5, 2023, 9:09 PM IST
ಭಟ್ಕಳ: ಭಟ್ಕಳದ ರಾಷ್ಟ್ರೀಯ ಹೆದ್ದಾರಿ ಹಾಗೂ ನಗರದ ವಿವಿಧ ಭಾಗಗಳಲ್ಲಿ ಮಳೆ ನೀರು ನಿಲ್ಲುವುದರಿಂದ ನಾಗರೀಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಿದ್ದು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ ಹೇಳಿದರು.
ಭಟ್ಕಳಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಅವರನ್ನು ಸಾರ್ವಜನಿಕರ ಭೇಟಿಯಾಗಿ ಭಟ್ಕಳದ ಸಮಸ್ಯೆಗಳನ್ನು ಮನದಟ್ಟು ಮಾಡಿ ಪರಿಹಾರಕ್ಕೆ ಆಗ್ರಹಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಭಟ್ಕಳದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿಯತ್ತಿದ್ದು ಇದರಿಂದ ಕೆಲವು ಕಡೆ ಮಳೆ ನೀರು ನಿಂತು ಸಂಚಾರಕ್ಕೆ ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಸಂಘ ಸಂಸ್ಥೆಗಳ ಮುಖಂಡರೂ ಸಹ ಪಟ್ಟಣದ ಸಮಸ್ಯೆ ಬಗ್ಗೆ ಮಾಹಿತಿ ನೀಡಿ ಪರಿಹರಿಸುವಂತೆ ತಿಳಿಸಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ತಾಲೂಕಿನಲ್ಲಿ ಮಳೆ ಹೆಚ್ಚಿರುವುದರಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಈಗಾಗಲೇ ನಡೆಸಲಾಗಿದ್ದ ತಹಸೀಲ್ದಾರ್ಗಳ ಸಭೆಯಲ್ಲಿ ಹೇಳಲಾಗಿದ್ದು ಎಲ್ಲಾ ವ್ಯವಸ್ಥೆಯನ್ನು ಮಾಡಿಟ್ಟುಕೊಳ್ಳಲು ತಿಳಿಸಲಾಗಿದೆ. ಯಾವುದೇ ಸಮಸ್ಯೆ ಎದುರಾದರೂ ಸಹ ತಾಲೂಕಾ ಆಡಳಿತ ಜನರೊಂದಿಗೆ ಇದೆ ಎಂದರು. ಅಗತ್ಯ ಬಿದ್ದರೆ ನೆರೆಪೀಡಿತ ಪ್ರದೇಶದಲ್ಲಿ ಎಲ್ಲೆಲ್ಲಿ ಕಾಳಜಿ ಕೇಂದ್ರ ತೆರೆಯಬೇಕಾಗಬಹುದು ಎನ್ನುದನ್ನು ಕೂಡಾ ಸಿದ್ಧಮಾಡಿಟ್ಟುಕೊಂಡು ಅಲ್ಲಿ ವಿದ್ಯುತ್ ನೀರು ಸರಬರಾಗು ಇತ್ಯಾದಿಗಳ ಕುರಿತೂ ವ್ಯವಸ್ಥೆ ಮಾಡಿಟ್ಟುಕೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು. ಈ ಸಂದರ್ಭದಲ್ಲಿ ಎಸಿ ಡಾ. ನಯನಾ ಎನ್., ತಹಸೀಲ್ದಾರ್ ತಿಪ್ಪೇಸ್ವಾಮಿ, ತಾ.ಪಂ.ಕಾ.ನಿ. ಅಧಿಕಾರಿ ಪ್ರಭಾಕರ ಚಿಕ್ಕನಮನೆ ಉಪಸ್ಥಿತರಿದ್ದರು.
ಇದನ್ನೂ ಓದಿ: ಹುಣಸೂರು: ಕೆರೆ ಬಳಿ ಯುವಕನ ಶವ ಪತ್ತೆ… ಕೊಲೆ ಮಾಡಿ ಬಿಸಾಕಿರುವ ಶಂಕೆ