ರಸ್ತೆ ನಿರ್ಮಿಸಿ ಕೊಡುವಂತೆ ಗ್ರಾಮಸ್ಥರ ಆಗ್ರಹ
Team Udayavani, Jun 26, 2019, 11:54 AM IST
ಅಂಕೋಲಾ: ತೀವ್ರ ಹದಗೆಟ್ಟ ಮಲಗೇರಿ ರಸ್ತೆ
ಅಂಕೋಲಾ: ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ವಂದಿಗೆ ಗ್ರಾಪಂ ವ್ಯಾಪ್ತಿಯ, ಬೊಳೆ ಗ್ರಾಮ ಜಮಗೋಡದ ಮಲಗೇರಿ ರಸ್ತೆ ತೀವ್ರ ಹದಗೆಟ್ಟಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.
ರಸ್ತೆ ತೀವ್ರ ಹದಗೆಟ್ಟಿರುವ ಪರಿಣಾಮ ಇಲ್ಲಿ ವಾಸಿಸುವ 40ಕ್ಕೂ ಹೆಚ್ಚು ಕುಟುಂಬಗಳಿಗೆ ಸಂಚಾರಕ್ಕೆ ಅಯೋಗ್ಯವಾಗಿ ಪ್ರತಿನಿತ್ಯ ಅಪಘಾತಕ್ಕೆ ದಾರಿ ಮಾಡಿಕೊಡುತ್ತಿದೆ. ಈ ರಸ್ತೆಯನ್ನೆ ಅವಲಂಬಿಸಿರುವ ವಿದ್ಯಾರ್ಥಿಗಳು, ಪಾದಚಾರಿಗಳು, ವಾಹನ ಸವಾರರು ಪರದಾಡುವಂತಾಗಿದೆ. ಗ್ರಾಪಂ ಸದಸ್ಯೆ ಸರೋಜಾ ನಾಯಕ ಗ್ರಾಮ ವಿಕಾಸ ಯೋಜನೆಯಡಿ ಈ ರಸ್ತೆಯ ಅಭಿವೃದ್ಧಿಗೆ ಈ ಹಿಂದೆ 15 ಲಕ್ಷ ರೂ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದ್ದರು. ಆದರೆ ಗ್ರಾಮ ವಿಕಾಸ ಯೋಜನೆಯಿಂದ ದೊರೆಕಿದ್ದು ಮಾತ್ರ 8 ಲಕ್ಷ ರೂ ಮಾತ್ರ. ಹೀಗಾಗಿ ಈ ಅನುದಾನ ರಸ್ತೆಯ ಅಭಿವೃದ್ಧಿಗೆ ಸಮರ್ಪಕವಾಗಿ ಸಾಕಾಗದೆ ರಸ್ತೆ ಕಾಮಗಾರಿ ಅರ್ಧಕ್ಕೆ ನಿಲ್ಲುವಂತಾಯಿತು.
ಇನ್ನು 500 ಮೀ ರಸ್ತೆ ಆದಲ್ಲಿ ಗ್ರಾಮಸ್ಥರ ರೋಧನೆ ನಿಲ್ಲಲಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಮಲಗೇರಿ ರಸ್ತೆ ಅಭಿವೃದ್ಧಿಗೆ ಆಡಳಿತ ವ್ಯವಸ್ಥೆ ಮುಂದಾಗುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.