ತಳಮಟ್ಟದಿಂದ ಪಕ್ಷ ಕಟ್ಟಲು ಸಹಕರಿಸಿ: ಯಂಡಿಗೇರಿ
19ರಂದು ಬೆಂಗಳೂರಿನ ಜೆಪಿ ಭವನದಲ್ಲಿ ದೇವೇಗೌಡರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ
Team Udayavani, Sep 16, 2019, 5:17 PM IST
ವಿಜಯಪುರ: ಜೆಡಿಎಸ್ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿದರು.
ವಿಜಯಪುರ: ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ಪರ ಇರುವ ಜೆಡಿಎಸ್ ಪಕ್ಷವನ್ನು ರಾಜ್ಯದ ಬಲಿಷ್ಠ ಪ್ರಾದೇಶಿಕ ಪಕ್ಷವಾಗಿ ಬಲಪಡಿಸಲು ನಿರ್ಧರಿಸಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಕೂಡ ಕ್ಷೇತ್ರದಲ್ಲಿ ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟಿಸಲು ಪಕ್ಷದ ಎಲ್ಲ ಹಂತದ ನಾಯಕರು, ಕಾರ್ಯಕರ್ತರು ಸಂಪೂರ್ಣ ಸಹಾಯ, ಸಹಕಾರ ನೀಡಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮನವಿ ಮಾಡಿದರು.
ರವಿವಾರ ನಗರದಲ್ಲಿರುವ ಜಿಲ್ಲಾ ಜಾತ್ಯತೀತ ಜನತಾ ದಳದ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ತಾಲೂಕು ಮತ್ತು ವಿಧಾನಸಭಾ ಕ್ಷೇತ್ರ ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಅದ್ಯತೆ ನೀಡಬೇಕಿದೆ. ಇದಕ್ಕಾಗಿ ತಳ ಮಟ್ಟದ ಕಾರ್ಯಕರ್ತರನ್ನು ತಲುಪುವ ಅಗತ್ಯವಿದೆ. ಹೀಗಾಗಿ ಬೇರು ಮಟ್ಟದಲ್ಲಿ ಸಂಘಟಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.
ಪಕ್ಷದ ಸಂಘಟನೆಗಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಧ್ಯಕ್ಷತೆಯಲ್ಲಿ ಸೆ. 19ರಂದು ಬೆಂಗಳೂರಿನ ಜೆಪಿ ಭವನದಲ್ಲಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಜಿಲ್ಲೆ ನಾಯಕರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಪಕ್ಷದ ಸಂಘಟನೆಗೆ ಸಲಹೆ, ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ನಾಗಠಾಣ ಶಾಸಕ ಡಾ| ದೇವಾನಂದ ಚವ್ಹಾಣ ಮಾತನಾಡಿ, ಪಕ್ಷವನ್ನು ಬಲಿಷ್ಠವಾಗಿ ಕಟ್ಟುವಲ್ಲಿ ಕಾರ್ಯಕರ್ತರ ಪಾತ್ರ ಮಹತ್ವಾದ್ದಾಗಿದ್ದು, ತನು-ಮನ-ಧನದಿಂದ ಎಲ್ಲರೂ ಪಕ್ಷದ ಸಂಘಟನೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಬಿ.ಜಿ. ಪಾಟೀಲ (ಹಲಸಂಗಿ) ಮಾತನಾಡಿ, ಜಾತ್ಯತೀತ ತತ್ವ-ಸಿದ್ಧಾಂತದಲ್ಲಿ ಜನ್ಮ ತಳೆದಿರುವ ಜೆಡಿಎಸ್ ಪಕ್ಷ ಜಾತಿ-ಮತ ಪಂಥ ಎಣಿಸದೇ ಎಲ್ಲ ಸಮುದಾಯಗಳನ್ನು ಒಗ್ಗೂಡಿ ಕರೆದೊಯ್ಯುವ ಶಕ್ತಿ ಹೊಂದಿದೆ. ಇಂಥ ಪಕ್ಷವನ್ನು ರಾಜ್ಯದಲ್ಲಿ ಬಲಿಷ್ಠವಾಗಿ ಕಟ್ಟಲು ತಮ್ಮ ಸಹಕಾರ ನೀಡಬೇಕು ಎಂದು ಕೋರಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಸವನಬಾಗೇವಾಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಪ್ಪುಗೌಡ ಪಾಟೀಲ (ಮನಗೂಳಿ), ದೇವರಹಿಪ್ಪರಗಿ ಕ್ಷೇತ್ರದ ರಾಜುಗೌಡ ಪಾಟೀಲ, ಮುದ್ದೇಬಿಹಾಳ ಕ್ಷೇತ್ರದ ಮಂಗಳಾದೇವಿ ಬಿರಾದಾರ, ಪಕ್ಷದ ಮುಖಂಡರಾದ ಅಶೋಕ ಮನಗೂಳಿ, ಚಂದ್ರಕಾಂತ ಹಿರೇಮಠ, ಇಜಾಜ್ ಮುಕಬಿಲ್, ಬಸವರಾಜ ಹೊನವಾಡ, ಯಾಕೂಬ ಕೊಪರ, ಬಸವರಾಜ ಮಾಡಗಿ, ಮೈಬೂಬ ಬೇವನೂರ, ಸಿದ್ದು ಕಾಮತ, ಸತ್ತಾರ ಇನಾಮದಾರ, ಮುಕದ್ದಸ ಇನಾಮದಾರ ಮಾತನಾಡಿದರು.
ಶಾಸಸಕರಾದ ಮಾಜಿ ಸಚಿವ ಎಂ.ಸಿ. ಮನಗೂಳಿ ಅಧ್ಯಕ್ಷತೆಯಲ್ಲಿದ್ದ ಕಾರ್ಯಕಾರಿ ಸಮಿತಿಯನ್ನು ಪುನರ್ ಸಂಘಟಿಸಲು ನೂತನ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಸಭೆಯಲ್ಲಿ ಸಂಪೂರ್ಣ ಅಧಿಕಾರ ನೀಡಲಾಯಿತು.
ನೂತನವಾಗಿ ಆಯ್ಕೆಯಾದ ರಾಜ್ಯಘಟಕ ಮಹಿಳಾ ಕಾರ್ಯಧ್ಯಕ್ಷೆ ಮಂಗಳಾದೇವಿ ಬಿರಾದಾರ ಅವರನ್ನು ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಜಿಲ್ಲಾ ಮುಖಂಡರಾದ ದಸ್ತಗಿರ್ ಸಾಲೋಟಗಿ, ಬಸವರಾಜ ಸುತಾಲೆ, ಬಿ.ಡಿ. ಪಾಟೀಲ (ಹಂಜಗಿ), ಕೌಸರ ಶೇಖ್, ಮಹಾದೇವಿ ತಳಕೇರಿ, ರೇಖಾ ಮಾಶಾಳ, ಸ್ನೇಹಾ ಶೆಟ್ಟಿ, ರೇಣುಕಾ ಮಡಿವಾಳರ, ರಮಿಜಾ ನದಾಫ್, ಅನ್ವರ್ ಮಕಾನದಾರ, ಸುನೀಲ ರಾಠೊಡ, ಹುಸೇನಬಾಷಾ ಬಾಗಾಯತ, ಆರ್.ಎ. ನಿಕ್ಕಂ, ಸೈಯ್ಯದ್ ಅಮಿನ್, ಅರವಿಂದ ಹಂಗರಗಿ, ವಿನೋದ ಕೊಟ್ಯಾಳ, ಸದಾಶಿವ ಜತ್ತಿ, ಸುಭಾಷ್ ನಾಯಕ ಇದ್ದರು. ಜಿಲ್ಲಾ ವಕ್ತಾರ ಎಸ್.ಎಸ್. ಖಾದ್ರಿ ಇನಾಮದಾರ ಸ್ವಾಗತಿಸಿದರು.