ಗಡಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮರೀಚಿಕೆ
ಅಧಿಕಾರಿಗಳ ನಿಷ್ಕಾಳಜಿ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ
Team Udayavani, May 15, 2019, 11:25 AM IST
ಯಾದಗಿರಿ: ಗುರುಮಠಕಲ್ ಹತ್ತಿರದ ನಜರಾಪೂರ ಫಾಲ್ಸ್. (ಸಂಗ್ರಹ ಚಿತ್ರ)
ಯಾದಗಿರಿ: ಜಿಲ್ಲೆಗೆ ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಟಿ.ಕೆ. ಅನಿಲ ಕುಮಾರ ಹಲವು ಬಾರಿ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಾಲು ಸಾಲು ಸಭೆ ನಡೆಸಿದರೂ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ.
ಸರ್ಕಾರ, ಆಡಳಿತ ವರ್ಗ ಹಾಗೂ ಜನಪ್ರತಿನಿಧಿಗಳ ನಿಷ್ಕಾಳಜಿಯಿಂದ ಅಭಿವೃದ್ಧಿಗಾಗಿ ಬಿಡುಗಡೆಯಾಗಿದ್ದ ಕೋಟ್ಯಂತರ ಅನುದಾನ ಖಜಾನೆಯಲ್ಲಿ ಕೊಳೆಯುವಂತಾಗಿದೆ. 2014-15ರಲ್ಲಿ ಬಿಸಿಲ ನಾಡಿನ ಪ್ರಸಿದ್ಧ ನಜರಾಪೂರ ಪಾಲ್ಸ್ ಮತ್ತು ಗವಿ ಸಿದ್ಧಲಿಂಗೇಶ್ವರ ಪ್ರವಾಸಿ ತಾಣದ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ 1.97 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಕಾಮಗಾರಿಗೆ ಅನುಮೋದನೆ ದೊರೆತು 4 ವರ್ಷಗತಿಸಿದರೂ ಈವರೆಗೂ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದಿರುವುದು ಸಾರ್ವಜನಕರ ಅಸಮಾಧಾನಕ್ಕೆ ಕಾರಣವಾಗಿದೆ.
ಜಿಲ್ಲೆಯ ಗುರುಮಠಕಲ್ ತಾಲೂಕು ಕೇಂದ್ರದಿಂದ 4 ಕಿ.ಮೀಟರ್ ದೂರದಲ್ಲಿರುವ ನಜರಾಪೂರಿನ ದಬಧಬಿ ಜಲಪಾತದ ಸಮಗ್ರ ಅಭಿವೃದ್ಧಿಗೆ ಈ ಹಿಂದಿನ ಜಿಲ್ಲಾಧಿಕಾರಿ ಜೆ. ಮಂಜುನಾಥ ಕಾರ್ಯ ಯೋಜನೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದರು. ಕಾಮಗಾರಿ ಹೊಣೆಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. ಯಾವುದೇ ಕಾಮಗಾರಿ ಪ್ರಗತಿಯಲ್ಲಿಲ್ಲ.
ಈ ಹಿಂದೆ ಪ್ರವಾಸೋದ್ಯಮ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಪ್ರಿಯಾಂಕ್ ಖರ್ಗೆ, ಕಾಮಗಾರಿ ಸಂಪೂರ್ಣ ವ್ಯವಸ್ಥಿತ ರೀತಿಯಲ್ಲಿ ನಡೆಯಬೇಕು ಎನ್ನುವ ಕಾರಣದಿಂದ ಜಿಲ್ಲೆಯ 2 ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ದುರದೃಷ್ಟವೆಂದರೆ ಸರ್ಕಾರವೇ ಬದಲಾದರೂ ಕಾಮಗಾರಿ ಆರಂಭವಾಗಿಲ್ಲ.
ನಜರಾಪೂರ ಜಲಪಾತ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಕಡ್ಡಾಯವಾಗಿ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು ಎನ್ನಲಾಗಿದ್ದು, ಈ ಕುರಿತು ಕೆಲ ತಿಂಗಳ ಹಿಂದೆ ಪ್ರವಾಸೋದ್ಯಮ ಇಲಾಖೆಯಿಂದ ಅರಣ್ಯ ಇಲಾಖೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
2018-19ರಲ್ಲಿ 50 ಲಕ್ಷ ಹೆಚ್ಚುವರಿ ಅನುದಾನ?: ಜಿಲ್ಲೆಯ ಗುರುಮಠಕಲ್ ಹತ್ತಿರದ ನಜರಾಪೂರ ಫಾಲ್ಸ್ ಅಭಿವೃದ್ಧಿಗೆ ಈ ಹಿಂದೆ ಬಿಡುಗಡೆಯಾಗಿರುವ ಅನುದಾನವೇ ಖರ್ಚಾಗಿ ಅಭಿವೃದ್ಧಿ ಕಂಡಿಲ್ಲ. ಅಂತಹದ್ದರಲ್ಲಿ 2018-19ರಲ್ಲಿಯೂ ಸರ್ಕಾರ ಫಾಲ್ಸ್ ಅಭಿವೃದ್ಧಿಗೆ ಹೆಚ್ಚುವರಿ 50 ಲಕ್ಷ ರೂಪಾಯಿ ಅನುದಾನವನ್ನು ಒದಗಿಸಿದೆ ಎನ್ನಲಾಗಿದೆ.
ಕಾರ್ಯದರ್ಶಿಗಳಿಗಿಲ್ಲವೇ ಅಭಿವೃದ್ಧಿಯ ಕಾಳಜಿ: ಪ್ರವಾಸೋದ್ಯಮ ಇಲಾಖೆ ಸರ್ಕಾರದ ಕಾರ್ಯದರ್ಶಿಯೇ ಜಿಲ್ಲೆಗೆ ಹಲವು ಬಾರಿ ಆಗಮಿಸಿ ಅಧಿಕಾರಿಗಳಿಂದ ಪ್ರವಾಸೋದ್ಯಮ ಅಭಿವೃದ್ಧಿ ಇನ್ನಿತರ ಪ್ರಗತಿ ಪರಿಶೀಲನೆ ಸಭೆಗಳು ನಡೆಸಿದ್ದಾರೆ. ಆದರೂ ಜಿಲ್ಲೆಯ 2 ಪ್ರವಾಸಿ ತಾಣಗಳ ಅಭಿವೃದ್ಧಿಯ ಕುರಿತು ಏಕೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಕಾರ್ಯದರ್ಶಿಗಳೂ ಅಭಿವೃದ್ಧಿಗೆ ಕಾಳಜಿ ತೋರುತ್ತಿಲ್ಲವೇ ಅಥವಾ ಅಧಿಕಾರಿಗಳೇನಾದರೂ ತಪ್ಪು ಮಾಹಿತಿ ನೀಡುತ್ತ ಸಮಯ ಕಳಿಯುತ್ತಿದ್ದಾರಾ ಎನ್ನುವ ಕುರಿತು ಎಲ್ಲೆಡೆ ಚರ್ಚೆಯಾಗುತ್ತಿದೆ. ಮೇ. 15ರಂದು ಸರ್ಕಾರದ ಕಾರ್ಯದರ್ಶಿಗಳು ಯಾದಗಿರಿಯಲ್ಲಿ ಪ್ರವಾಸೋದ್ಯಮ ಹಾಗೂ ಇನ್ನಿತರ ವಿಷಯಗಳ ಸಭೆ ನಡೆಸಲಿದ್ದು, ಈಗಲಾದರೂ ಅಭಿವೃದ್ಧಿಯಾದಗೇ ಉಳಿದಿರುವ ಪ್ರವಾಸಿ ತಾಣಗಳ ಕುರಿತು ಕಾಳಜಿ ವಹಿಸಿ ಕಾಮಗಾರಿಗಳಿಗೆ ಚಾಲನೆ ನೀಡಬೇಕಿದೆ.
ಜಿಲ್ಲೆಯ ಎರಡೂ ಪ್ರವಾಸಿ ತಾಣಗಳು ಗುರುಮಠಕಲ್ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದ್ದು, ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಅವರು ಅಭಿವೃದ್ಧಿಗೆ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದ್ದು, ಪ್ರಸ್ತುತ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವುದರಿಂದ ಕಂದಕೂರ ಅವರು, ಈ ಹಿಂದೆಯೇ ಅನುದಾನ ಬಿಡುಗಡೆಯಾಗಿ ಅಭಿವೃದ್ಧಿ ಮಾತ್ರ ಕಾಣದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನಿಸಿ ತಮ್ಮ ಕ್ಷೇತ್ರದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕಾಳಜಿ ವಹಿಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ