ಮಕ್ಕಳಾಗಿಲ್ಲವೆಂದು ಪತ್ನಿ ಕೊಲೆಗೈದ ಪೇದೆ!
Team Udayavani, Jul 19, 2017, 4:25 AM IST
ಯಾದಗಿರಿ: ಮಕ್ಕಳಾಗಿಲ್ಲ ಎನ್ನುವ ಕಾರಣಕ್ಕೆ ಪೊಲೀಸ್ ಪೇದೆಯೊಬ್ಬ ಆಹಾರದಲ್ಲಿ ವಿಷ ಬೆರೆಸಿ ಪತ್ನಿಯನ್ನೇ ಕೊಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಣಮಂತಿ ಮಹೇಂದ್ರ (26) ಕೊಲೆಗೀಡಾದ ಮಹಿಳೆ. ನಗರದ ಪೊಲೀಸ್ ವಸತಿ ನಿಲಯದಲ್ಲಿ ವಾಸ ವಾಗಿರುವ ಪೇದೆ ಮಹೇಂದ್ರ ಕಳೆದ ರವಿವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಪತ್ನಿಗೆ ಆಹಾರದಲ್ಲಿ ವಿಷ ಬೆರೆಸಿ ತಿನ್ನಿಸಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ನಗರ ಪೊಲೀಸ್ ಠಾಣೆ ಪೇದೆಯಾಗಿದ್ದ ಯಾದಗಿರಿ ತಾಲೂಕಿನ ಕಲ್ಲನಕೇರ ಗ್ರಾಮದ ಮಹೇಂದ್ರ 8 ವರ್ಷಗಳ ಹಿಂದೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದ ಹಣಮಂತಿಯೊಂದಿಗೆ ಮದುವೆಯಾಗಿದ್ದ. 8 ವರ್ಷಗಳಾದರೂ ಮಕ್ಕಳಾಗಿಲ್ಲವೆಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ. ಬೇರೊಂದು ಮದುವೆ ಆಗಲು ಪತ್ನಿ ಒಪ್ಪದಿರುವುದಕ್ಕೆ ಆತ ಆಹಾರದಲ್ಲಿ ವಿಷ ಬೆರೆಸಿದ್ದ ಎನ್ನಲಾಗಿದೆ.
ವಿಷಾಹಾರ ತಿಂದು ತೀವ್ರ ಅಸ್ವಸ್ಥಗೊಂಡ ಹಣಮಂತಿಯನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸೋಮವಾರ ಅಸುನೀಗಿದ್ದಾಳೆ. ಮಹೇಂದ್ರ ವಿಷ ಉಣಿಸಿ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಮೃತಳ ತಂದೆ ಈರಪ್ಪ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪೇದೆ ಮಹೇಂದ್ರನನ್ನು ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ.