ಓಟ್ ಹಾಕಿ ಗಿಫ್ಟ್ ತಗೋಳಿ!
ಅವೆನ್ಯೂ ರಸ್ತೆಯ ಅಂಗಡಿ ಮಾಲೀಕರ ವಿನೂತನ ಮತಜಾಗೃತಿ
Team Udayavani, Apr 6, 2019, 11:09 AM IST
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮತದಾನ
ಮಾಡುತ್ತೀರಾ? ಹಾಗಿದ್ದರೆ ನಮ್ಮ ಅಂಗಡಿಗೆ ಬಂದು ಉಡುಗೊರೆ
ಪಡೆದುಕೊಳ್ಳಿ…
ನಗರದ ಅವೆನ್ಯೂ ರಸ್ತೆಯಲ್ಲಿರುವ ಕುಸುಮ್ ಜನರಲ್ ಸ್ಟೋರ್ನ ಮಾಲೀಕ ಕೃಷ್ಣಮೂರ್ತಿ ಅವರು ಮತದಾನದ ಕುರಿತು ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದು, ಮತ ಚಲಾಯಿಸಿ ಬಂದು ಬೆರಳಿನ ಶಾಹಿ ತೋರಿಸುವ ಗ್ರಾಹಕರಿಗೆ ಉಚಿತ ಉಡುಗೊರೆ ನೀಡುವುದಾಗಿ ಘೋಷಿಸಿದ್ದಾರೆ.
ನಗರದ ಅವೆನ್ಯೂ ರಸ್ತೆಯಲ್ಲಿ 1960ರಿಂದ ಜನರಲ್ ಸ್ಟೋರ್ ಹೊಂದಿದ್ದು, ಮತದಾನದ ಬಗ್ಗೆ ಜಾಗೃತಿ ಹಾಗೂ ಪ್ಲಾಸ್ಟಿಕ್ ನಿಷೇಧದ ಕುರಿತಂತೆ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇದರೊಂದಿಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ ಹೊಂದಿರುವ ಕೃಷ್ಣಮೂರ್ತಿಯವರು ದಯವಿಟ್ಟು ಕನ್ನಡ ಭಾಷೆಯಲ್ಲಿಯೇ ವ್ಯವಹರಿಸುವಂತೆ ಅಂಗಡಿ ಮುಂದೆ
ಫಲಕಗಳನ್ನು ಹಾಕಿದ್ದಾರೆ.
ಮತದಾನ ಎಂಬುದು ಪ್ರಜಾಪ್ರಭುತ್ವದ ಹಬ್ಬವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಹಕ್ಕು ಚಲಾಯಿಸಬೇಕು. ಇತ್ತೀಚಿನ ದಿನಗಳಲ್ಲಿ ಜನರು ಮತದಾನದಲ್ಲಿ ಭಾಗಿಯಾಗಲು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಆ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದು, ಏಪ್ರಿಲ್ 18ರಂದು ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಏ.19ರಂದು ಮಳಿಗೆಗೆ ಬರುವವರಿಗೆ ಉಡುಗೊರೆ ನೀಡಲಾಗುವುದು ಎಂದು ಎಂಬತ್ತರ ಹರೆಯದ
ಕೃಷ್ಣಮೂರ್ತಿ ಅವರು ಹೇಳಿದರು.
ತಮಗೆ ಪರಿಚಯವಿರುವ ಎಲ್ಲ ಅಂಗಡಳಿಗೆ ಮತದಾನ ಮಾಡಿದವರಿಗೆ ಉಡುಗೊರೆ ನೀಡುವ ಕರಪತ್ರಗಳನ್ನು ಹಂಚಲಾದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಮಾಹಿತಿ ಹರಿಬಿಟ್ಟಿದ್ದು, ಕೃಷ್ಣಮೂರ್ತಿಯವರ ಅಭಿಯಾನಕ್ಕೆ ಕೈಜೋಡಿಸಿ ರುವ ಕೆಲ ಸಂಸ್ಥೆಗಳು ಉಡುಗೊರೆಯಾಗಿ ತಮ್ಮ ಉತ್ಪನ್ನಗಳನ್ನು ನೀಡಲು ಮುಂದಾಗಿವೆ. ಜತೆಗೆ ತಮ್ಮದೇ ಖರ್ಚಿನಲ್ಲೂ ಉಡುಗೊರೆ ನೀಡಲು ಕೃಷ್ಣಮೂರ್ತಿ ಮುಂದಾಗಿದ್ದಾರೆ.