ಕುಟುಂಬ ರಾಜಕಾರಣ ದೈವೇಚ್ಛೆ: ದೇವೇಗೌಡ
Team Udayavani, Mar 23, 2019, 12:17 AM IST
ಹಾಸನ: ಜಿದ್ದಾಜಿದ್ದಿನ ಕ್ಷೇತ್ರವಾಗಿ ಬದಲಾಗಿರುವ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು. ಈ ವೇಳೆ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ, ರೇವಣ್ಣ, ಭವಾನಿ ರೇವಣ್ಣ ಮತ್ತು ಕುಟುಂಬ ಸದಸ್ಯರು ಹಾಜರಿದ್ದು, ಕುಟುಂಬದ ಕುಡಿಗೆ ಶುಭ ಹಾರೈಸಿದರು. ಬಳಿಕ ಪತ್ರಕರ್ತರ ಜತೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ, ಇದು ತಮ್ಮ ಪಾಲಿಗೆ ದೇವರು ಕೊಟ್ಟ ಪ್ರಸಾದ ಎನ್ನುವ ಮೂಲಕ ಕುಟುಂಬ ರಾಜಕಾರಣವನ್ನು ಸಮರ್ಥಿಸಿಕೊಂಡರು.
ಗೌಡರ ಮಾತಿನ ಪ್ರಮುಖ ಅಂಶಗಳು
ಕುಟುಂಬ ರಾಜಕಾರಣ, ವಂಶ ಪಾರಂಪರ್ಯ ನಮ್ಮ ಬಯಕೆಯಲ್ಲ. ಇದೆಲ್ಲ ದೈವೇಚ್ಛೆ.
ಹೊಳೆನರಸೀಪುರ ಬಿಟ್ಟು, ರಾಮನಗರದಲ್ಲಿ ಸ್ಪರ್ಧಿಸಿ ಸಿಎಂ ಆದೆ. ಪ್ರಧಾನಿಯಾಗಿ ದಿಲ್ಲಿಗೆ ಹೋದೆ.
ತಮ್ಮ ತಂದೆ ಕುಮಾರಸ್ವಾಮಿಯವರ ಆರೋಗ್ಯ ಕುಂದಿದಾಗ ಅವರಿಗೆ ನೆರವಾಗಲು ನಿಖೀಲ್ ಮಂಡ್ಯ ರಾಜಕಾರಣ ಪ್ರವೇಶ ಮಾಡುತ್ತಿದ್ದಾನೆ. ನಾನೀಗ ನಿಮ್ಮ ಮಡಿಲಿಗೆ ಪ್ರಜ್ವಲ್ನನ್ನು ಹಾಕಿರುವೆ.
ಹಾಸನ ಬಿಟ್ಟು ಹೋದೆ ಎಂಬ ಭಾವನೆ ಬೇಡ, ನಾನು ಎಲ್ಲಿದ್ದರೂ ಹಾಸನ ಜಿಲ್ಲೆಯವನೇ. ನಿಮ್ಮವನೆ.
ಪ್ರಜ್ವಲ್, ಒಬ್ಬ ಸಾಮಾನ್ಯ ರೈತನ ಮೊಮ್ಮಗ ಎಂದು ಭಾವಿಸಿ, ಗೆಲ್ಲಿಸಿ. ದಾರಿ ತಪ್ಪಿದರೆ, ಆತನ ಕಿವಿ ಹಿಂಡಿ, ಬುದ್ಧಿ ಹೇಳುವ ಶಕ್ತಿ ಇನ್ನೂ ನನಗಿದೆ.
ಪರಸ್ಪರ ಎದುರಾಳಿಗಳಾಗಿದ್ದ ಕಾಂಗ್ರೆಸ್-ಜೆಡಿಎಸ್ ಒಂದಾಗಿ ಸಮ್ಮಿಶ್ರ ಸರಕಾರ ರಚನೆ ಮಾಡಿಕೊಂಡಿದ್ದು, ಬಿಜೆಪಿ ವಿರುದ್ಧ ಹೋರಾಡುತ್ತಿವೆ. ಇದು ಕರ್ನಾಟಕದ ಇತಿಹಾಸದಲ್ಲಿ ಹೊಸ ಮೈಲುಗಲ್ಲು.
ಸಿದ್ದರಾಮಯ್ಯ ನಮ್ಮನ್ನು ಬಿಟ್ಟು ಕಾಂಗ್ರೆಸ್ ಸೇರಿದ ಅನಂತರ, ಮತ್ತೆ ಒಂದಾಗಿದ್ದು, ಬಿಜೆಪಿ ವಿರುದ್ಧ ಹೋರಾಡಲು.
ಕೈ-ಜೆಡಿಎಸ್ ಸಮಾಗಮ
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು. ಈ ವೇಳೆ ನೆರೆದಿದ್ದ ಜೆಡಿಎಸ್-ಕಾಂಗ್ರೆಸ್ ನಾಯಕರ ಸಮಾ ಗಮ, ಜಿಲ್ಲೆಯ ರಾಜಕೀಯ ರಂಗದಲ್ಲಿ ಹೊಸ ಮೈಲುಗಲ್ಲು ಬರೆಯಿತು.
6 ಕೋ. ರೂ. ಒಡೆಯ
28 ವರ್ಷದ ಪ್ರಜ್ವಲ್, 6.44 ಕೋ. ರೂ.ಆಸ್ತಿಯ ಒಡೆಯರಾಗಿದ್ದಾರೆ. ನೆಲಮಂಗಲದ ಸಮೀಪ 8 ಕಡೆ, ಹೊಳೆನರಸೀಪುರ ತಾಲೂಕು ಮಾರಗೊಂಡನಹಳ್ಳಿಯಲ್ಲಿ 4 ಕಡೆ, ಹಾಸನ ತಾಲೂಕು ದುದ್ದ ಹೋಬಳಿ ಗೌರಿಪುರ ಬಳಿ ಸಹಿತ 41 ಎಕರೆಗೂ ಹೆಚ್ಚು ಕೃಷಿ ಭೂಮಿ ಹೊಂದಿದ್ದಾರೆ. 91.10ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಾಗಿ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಜತೆಗೆ, 3.72 ಕೋ. ರೂ.ಸಾಲ ಮಾಡಿರುವ ಇವರು, ತಂದೆ ರೇವಣ್ಣ ಬಳಿ 1.26 ಕೋ. ರೂ., ತಾಯಿ ಭವಾನಿಯಿಂದ 43.75 ಲ. ರೂ., ಅತ್ತೆ ಅನುಸೂಯ ಮಂಜುನಾಥ್ರಿಂದ 22 ಲ. ರೂ. ಸಾಲ ಪಡೆದುಕೊಂಡಿದ್ದಾರೆ.