ಬಿಜೆಪಿಯಿಂದ ಜಾಧವ್, ಬಚ್ಚೇಗೌಡ ಸ್ಪರ್ಧೆ ಖಚಿತ
Team Udayavani, Mar 15, 2019, 12:30 AM IST
ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿಯಲ್ಲಿ ಹಾಲಿ ಸಂಸದರ ಪೈಕಿ ಬಹುತೇಕ ಎಲ್ಲರಿಗೂ ಟಿಕೆಟ್ ದೊರೆಯುವ ಖಾತರಿ ಇರುವುದರಿಂದ ಉಳಿದ ಕ್ಷೇತ್ರಗಳಲ್ಲಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವಲ್ಲಿ ಬಿಜೆಪಿ ನಿರತವಾಗಿದೆ. ಕಲಬುರಗಿ ಕ್ಷೇತ್ರದಿಂದ ಡಾ.ಉಮೇಶ್ ಜಾಧವ್ ಹಾಗೂ ಚಿಕ್ಕಬಳ್ಳಾಪುರದಿಂದ ಬಿ.ಎನ್.ಬಚ್ಚೇಗೌಡ ಸ್ಪರ್ಧೆ ಖಚಿತವಾಗಿದೆ.
ಚಿಕ್ಕೋಡಿ ಕ್ಷೇತ್ರಕ್ಕೆ ರಮೇಶ್ ಕತ್ತಿ/ ಲಕ್ಷ್ಮಣ ಸವದಿ ಹೆಸರು ಕೇಳಿಬರುತ್ತಿದೆ.ರಾಯಚೂರು ಕ್ಷೇತ್ರದಿಂದ ಗಂಗಾಧರ ನಾಯಕ್, ತಿಪ್ಪರಾಜು ಹವಾಲ್ದಾರ್, ಅನಂತರಾಜು ಇತರರು ಆಕಾಂಕ್ಷಿಗಳಾಗಿದ್ದಾರೆ. ಬಳ್ಳಾರಿ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್, ಮಾಜಿ ಸಂಸದರಾದ ಜೆ.ಶಾಂತಾ, ಸಣ್ಣ ಫಕೀರಪ್ಪ ಅವರ ಹೆಸರು ಕೇಳಿಬಂದಿದೆ. ಚಿತ್ರದುರ್ಗ ಕ್ಷೇತ್ರದಿಂದ ಎ. ನಾರಾಯಣಸ್ವಾಮಿ, ಮಾನಪ್ಪ ವಜ್ಜಲ್, ನಿವೃತ್ತ ಐಎಎಸ್ ಅಧಿಕಾರಿ ಎಂ.ಲಕ್ಷ್ಮೀನಾರಾಯಣ್ ಹೆಸರು ಚಾಲ್ತಿಯಲ್ಲಿದೆ. ತುಮಕೂರು ಕ್ಷೇತ್ರದಿಂದ ಬಸವರಾಜು, ಸುರೇಶ್ಗೌಡ ಆಕಾಂಕ್ಷಿಗಳಾಗಿದ್ದಾರೆ.
ಕೋಲಾರ ಕ್ಷೇತ್ರದಿಂದ ಕಳೆದ ಬಾರಿ ಪರಾಜಿತ ಅಭ್ಯರ್ಥಿ ಡಿ.ಎಸ್.ವೀರಯ್ಯ, ಛಲವಾದಿ ನಾರಾಯಣಸ್ವಾಮಿ, ವೈಟ್ ಫೀಲ್ಡ್ನ ಮುನಿಸ್ವಾಮಿ, ಚಿ.ನಾ.ರಾಮು ಆಕಾಂಕ್ಷಿಗಳು ಎನ್ನಲಾಗಿದೆ. ತೀವ್ರ ಕುತೂಹಲ ಮೂಡಿಸಿರುವ ಮಂಡ್ಯ ಹಾಗೂ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಬಗ್ಗೆ ಬಿಜೆಪಿ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದೆ. ಹಾಸನದಲ್ಲಿ ಎ.ಮಂಜು ಜತೆಗೆ ನಿವೃತ್ತ ಐಎಫ್ಎಸ್ ಅಧಿಕಾರಿ ಲಕ್ಷ್ಮೀನಾರಾಯಣ್ ಆಕಾಂಕ್ಷಿಯಾಗಿದ್ದಾರೆ. ಮಂಡ್ಯದಲ್ಲಿ ಸುಮಲತಾ ಅವರು ಮಾರ್ಚ್ 18 ತಮ್ಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದು ಆ ನಂತರ ಬಿಜೆಪಿ ಅಭ್ಯರ್ಥಿ ತೀರ್ಮಾನವಾಗಲಿದೆ.