ಸುಳ್ಳೇ ಮೋದಿ ಮನೆಯ ದೇವರು
Team Udayavani, Feb 28, 2019, 1:22 AM IST
ವಿಜಯಪುರ: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಚೌಕಿದಾರ್ ಅಲ್ಲ, ಭ್ರಷ್ಟಾಚಾರದ ಭಾಗಿದಾರ. ಸುಳ್ಳೇ ಮೋದಿ ಮನೆಯ ದೇವರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.
ನಗರದಲ್ಲಿ ಬುಧವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪರಿವರ್ತನಾ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮೋದಿ ಹಾಗೂ ಯಡಿಯೂರಪ್ಪ ವಿರುದಟಛಿ ಕಿಡಿ ಕಾರಿದರು. ಭ್ರಷ್ಟಾಚಾರದ ಬಗ್ಗೆ ಭಾಷಣ ಹೊಡೆಯುವ ಮೋದಿ ಅವರು ತಮ್ಮನ್ನು ತಾವು ದೇಶದ ಚೌಕಿದಾರ್ ಎಂದು ಬಣ್ಣಿಸಿಕೊಳ್ಳುತ್ತಾರೆ. ಆದರೆ, ರಫೇಲ್ ಡೀಲ್ ನಲ್ಲಿ ಅವ್ಯವಹಾರ ನಡೆದಾಗ ಚೌಕಿದಾರ್ ಎಲ್ಲಿ ಹೋಗಿದ್ದ?. ಸ್ವಯಂ ಈ ಚೌಕಿದಾರ್ ಹಲವು ಭ್ರಷ್ಟಾಚಾರಗಳಿಗೆ ಪ್ರೋತ್ಸಾಹ ನೀಡಿದ್ದು, ಅದರಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ, ಪ್ರಧಾನಿ ಮೋದಿ ದೇಶದ ಚೌಕಿದಾರ್ ಅಲ್ಲ, ಭ್ರಷ್ಟಾಚಾರದ ಭಾಗಿದಾರ. ಸುಳ್ಳೇ ಮೋದಿ ಮನೆಯ ದೇವರು ಎಂದು ಕಿಡಿ ಕಾರಿದರು.
ಜೈಲಿಗೆ ಹೋಗಿ ಬಂದಿರುವ ಯಡಿಯೂರಪ್ಪ ಮತ್ತವರ ಗ್ಯಾಂಗ್, ಇದೀಗ ರಾಜ್ಯದ ಮೈತ್ರಿ ಸರ್ಕಾರದ ಪತನಕ್ಕೆ ಶಾಸಕರ ಖರೀದಿಗೆ ಮುಂದಾಗಿದೆ. ಇದಕ್ಕಾಗಿ ಒಬ್ಬೊಬ್ಬ ಶಾಸಕರಿಗೆ ಕೋಟ್ಯಂತರ ರೂ.ಗಳಂತೆ 600 ಕೋಟಿ ರೂ.ಕೊಟ್ಟು 20 ಶಾಸಕರನ್ನು ಖರೀದಿಸಲು ಹೋಗಿದ್ದರು. ಶಾಸಕರಿಗೆ ಹಣದ ಆಮಿಷ ತೋರಿಸಿದ್ದಾರೆ. ಹಾಗಾದರೆ, ಪಾರದರ್ಶಕ ಆಡಳಿತ ನೀಡಿದ ಬಿಜೆಪಿ ನಾಯಕರಿಗೆ ಈ ಮಟ್ಟದ ಹಣ ಎಲ್ಲಿಂದ ಬಂತು ಎನ್ನುವುದಕ್ಕೆ ಚೌಕಿದಾರ್ ಉತ್ತರಿಸಬೇಕು ಎಂದರು.
ಜಿಗಜಿಣಗಿಯನ್ನು ಯಾಕೆ ಗೆಲ್ಲಿಸ್ತೀರಿ?
ಕೆಲಸ ಮಾಡದೇ ಕಾಕಾ, ಮಾಮಾ ಅಂತ ಮಾತಿನಲ್ಲೇ ತಿರುಗುತ್ತಿರುವ ರಮೇಶ ಜಿಗಜಿಣಗಿ ಅವರನ್ನು ಮತ್ತೆ, ಮತ್ತೆ ಯಾಕೆ ಗೆಲ್ಲಿಸ್ತಿದ್ದೀರಿ. ಜಿಲ್ಲೆಯಿಂದ ರಾಜಕೀಯ ಶಕ್ತಿ ಪಡೆದ ಅವರಿಂದ ತವರು ಜಿಲ್ಲೆಗೆ ಆಗಿರುವ ಲಾಭವೇನು?. ಜಿಲ್ಲೆಗೆ ಅವರ ಕೊಡುಗೆ ಏನು?. ಇದೀಗ ಕೇಂದ್ರದಲ್ಲಿ ಗ್ರಾಮೀಣ ಕುಡಿಯುವ ನೀರಿನ ಖಾತೆ ಸಚಿವರಾಗಿದ್ದರೂ ಜಿಲ್ಲೆ ಅನುಭವಿಸುತ್ತಿರುವ ಕುಡಿಯುವ ನೀರಿನ ಗಂಭೀರ ಸಮಸ್ಯೆಗೆ ಪರಿಹಾರ ಕಂಡುಕೊಂಡಿಲ್ಲ. ಈ ಬಾರಿಯಾದರೂ ಅವರ ಕಾಕಾ, ಮಾಮಾ ಮಾತಿಗೆ ಮರುಳಾಗದೇ, ಅವರನ್ನು ಸೋಲಿಸಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.