ಉಡುಪಿ-ಚಿಕ್ಕಮಗಳೂರು: ಮಾಜಿ ಸಚಿವರಿಬ್ಬರ ಸ್ಪರ್ಧೆಗೆ ವೇದಿಕೆ ಸಿದ್ಧ
Team Udayavani, Mar 22, 2019, 1:00 AM IST
ಉಡುಪಿ: ಉಡುಪಿ -ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಲು ಉಭಯ ಪಕ್ಷಗಳೂ ಟಿಕೆಟ್ ಘೋಷಿಸಿವೆ.
ಬಿಜೆಪಿ ಟಿಕೆಟ್ ಹಾಲಿ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಮತ್ತು ಜೆಡಿಎಸ್- ಕಾಂಗ್ರೆಸ್ ಟಿಕೆಟ್ ಮಾಜಿ ಸಚಿವ ಪ್ರಮೋದ್ ಮಧ್ವರಾಜರಿಗೆ ಸಿಕ್ಕಿದೆ.
ಶೋಭಾ ಕರಂದ್ಲಾಜೆಯವರು 2014ರ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದು ಈಗ ಮತ್ತೆ ಕಣಕ್ಕೆ ಇಳಿಯುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್, ಇಂಧನ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ಪ್ರಸ್ತುತ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಪ್ರಮೋದ್ ಮಧ್ವರಾಜರು ಉಡುಪಿ ಶಾಸಕರಾಗಿ ಆಯ್ಕೆಯಾಗಿ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಮೊಗವೀರ ಮಹಾಜನ ಸಂಘ, ಯುವ ಕಾಂಗ್ರೆಸ್, ಕಾಂಗ್ರೆಸ್ನಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಈಗ ಜೆಡಿಎಸ್ ಟಿಕೆಟ್ನಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಪ್ರಮೋದರಿಗೆ ಜೆಡಿಎಸ್ ಟಿಕೆಟ್
ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಪ್ರಮೋದ್ ಮಧ್ವರಾಜರಿಗೆ ಗುರುವಾರ ಜೆಡಿಎಸ್ ಅಧ್ಯಕ್ಷ ಎಚ್.ಡಿ. ದೇವೇಗೌಡರು ಬಿಫಾರ್ಮ್ ನೀಡಿದ್ದಾರೆ.
ದೇವೇಗೌಡ, ದೇವೇಗೌಡರ ಪತ್ನಿ ಚೆನ್ನಮ್ಮ, ರೇವಣ್ಣ ಅವರು ಬೆಂಗಳೂರು ಜೆಪಿ ನಗರದ ಲಕ್ಷ್ಮೀ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಪ್ರಮೋದ ಮಧ್ವರಾಜರಿಗೆ ದೇವೇಗೌಡರು ಬಿಫಾರ್ಮ್ ನೀಡಿದರು. ತಾನು ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಟಿಕೆಟ್ನಿಂದ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪ್ರಮೋದ್ ಪ್ರಕಟಿಸಿದರು.
ಪಕ್ಷದ ರಾಷ್ಟ್ರ, ರಾಜ್ಯ ನಾಯಕರು ವಿಶ್ವಾಸ ಇಟ್ಟು ನನಗೆ ಅವಕಾಶ ನೀಡಿ¨ªಾರೆ. ಕ್ಷೇತ್ರದ ಜನ ಆಶೀರ್ವಾದ ಮಾಡುತ್ತಾರೆ ಅನ್ನುವ ನಂಬಿಕೆ ಇದೆ. ಒಗ್ಗಟ್ಟಿನಿಂದ ಬಿಜೆಪಿ ರಥ ಎಳೆಯುತ್ತೇವೆ. ಪಕ್ಷದ 300 ಸಂಸದರು ಗೆದ್ದು ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುತ್ತೇವೆ. ಅವಕಾಶವನ್ನು ಸವಾಲಾಗಿ ಸ್ವೀಕರಿಸಿ ಕ್ಷೇತ್ರದ ಅಭಿವೃದ್ಧಿ ಮಾಡುವೆ.
-ಶೋಭಾ ಕರಂದ್ಲಾಜೆ, ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ
ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್ ಲಭಿಸಿದೆ. ಹಿರಿಯ ನಾಯಕರ ಆಶೀರ್ವಾದ, ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಈ ಅವಕಾಶ ಸಿಕ್ಕಿದೆ ಎಂದು ಭಾವಿಸಿದ್ದೇನೆ.
– ಪ್ರಮೋದ್ ಮಧ್ವರಾಜ್, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ