ಇಂದು ಗಣೇಶನ ಹಬ್ಬ; ಪರಿಸರ ಸ್ನೇಹಿಯಾಗಿರಲಿ ಆಚರಣೆ
Team Udayavani, Sep 2, 2019, 5:54 AM IST
ಮಹಾನಗರ: ವಿಘ್ನವಿನಾಶಕ ಗಣಪತಿಯ ಆರಾಧನೆಗೆ ಸಕಲ ತಯಾರಿ ಸಂಪನ್ನಗೊಂಡಿದೆ. ವಿವಿಧೆಡೆ ಪೂಜಿಸಲ್ಪಡುವ ಗಣೇಶನ ವಿಗ್ರಹಗಳನ್ನು ರವಿವಾರ ಸಂಜೆ ಮೆರವಣಿಗೆಯೊಂದಿಗೆ ಕೊಂಡೊಯ್ದಿದ್ದು, ಚೌತಿ ಸಂಭ್ರಮ ಕಳೆಗಟ್ಟಿದೆ.
ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಹಿಂದೂ ಯುವ ಸೇವೆಯ 27ನೇ ವರ್ಷದ ಮಂಗಳೂರು ಗಣೇಶೋತ್ಸವ ಸಹಿತ ಬಹುತೇಕ ಭಾಗಗಳಲ್ಲಿ ಗಣೇಶನ ವಿಗ್ರಹಗಳನ್ನು ರವಿವಾರ ಸಂಜೆಯೇ ಮೆರವಣಿಗೆ ಮೂಲಕ ತರಲಾಯಿತು. ಈ ನಡುವೆ ಮನೆಗಳಲ್ಲಿ ಪೂಜೆ ನಡೆಸುವವರು ಅಲಂಕಾರ, ಪೂಜೆಗೆ ಬೇಕಾದ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದುದು ಸಾಮಾನ್ಯವಾಗಿತ್ತು.
ದೇಗುಲಗಳಲ್ಲಿ ಪೂಜೆಗಳಿಗೆ ಸಿದ್ಧತೆ
ಗಣೇಶ ಹಬ್ಬಕ್ಕಾಗಿ ಎಲ್ಲೆಡೆ ಸಂಭ್ರಮದ ತಯಾರಿ ನಡೆಯುತ್ತಿದೆ. ವಿವಿಧ ದೇವಸ್ಥಾನಗಳಲ್ಲಿ ಈಗಾಗಲೇ ಹಬ್ಬದ ಸಿದ್ಧತೆ ಮುಗಿದಿದೆ. ಪೊಲೀಸ್ ಲೇನ್ ಶ್ರೀ ಮುನೀಶ್ವರ ಮಹಾಗಣಪತಿ ದೇವಸ್ಥಾನ, ಕದ್ರಿ ದೇವಸ್ಥಾನ, ಕುದ್ರೋಳಿ ಕ್ಷೇತ್ರ, ಬಿಕರ್ನಕಟ್ಟೆ ಶ್ರೀ ಕ್ಷೇತ್ರ ಬಲಮುರಿ ಸಿದ್ಧಿವಿನಾಯಕ ದೇವಸ್ಥಾನ, ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಮಣ್ಣಗುಡ್ಡೆ ಹರಿದಾಸ್ ಲೇನ್ ಶ್ರೀ ಮಡಕೈ ನವದುರ್ಗಾ ಮಹಾಗಣಪತಿ ದೇವಸ್ಥಾನ ಸಹಿತ ವಿವಿಧೆಡೆ ಶ್ರೀ ಸಿದ್ಧಿವಿನಾಯಕನಿಗೆ ವಿವಿಧ ಪೂಜೆ ಪುರಸ್ಕಾರಗಳು ನಡೆಯಲಿವೆ.
ವಿವಿಧ ಸಂಘ- ಸಂಸ್ಥೆಗಳಿಂದಲೂ ಗಣೇಶೋತ್ಸವ ಜರಗಲಿದೆ. ದೇವರ ವಿಗ್ರಹ ಪ್ರತಿಷ್ಠಾಪನೆಯಿಂದ ಹಿಡಿದು ಭಜನೆ, ಮಹಾಪೂಜೆ, ವಿವಿಧ ಹೋಮಗಳು, ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆಯಲಿವೆ. ಅಲ್ಲಲ್ಲಿ ಗರಿಷ್ಠ ಏಳು ದಿನಗಳ ಕಾಲ ಗಣಪನನ್ನು ಪೂಜಿಸಿ ವೈಭವದ ಶೋಭಾಯಾತ್ರೆಯೊಂದಿಗೆ ಮೂರ್ತಿಯನ್ನು ವಿಸರ್ಜನೆ ನಡೆಯಲಿದೆ.
ಕಳೆಗಟ್ಟಿದ ಚೌತಿ ಸಂಭ್ರಮ
ಮಹಾನಗರ: ಗಣೇಶ ಚತುರ್ಥಿ ಆಚರಣೆಗೆ ಪೂರ್ವ ಸಿದ್ಧತೆಯಾಗಿ ನಗರದಲ್ಲಿ ರವಿವಾರ ಖರೀದಿಯ ಗೌಜಿ ಜೋರಾಗಿತ್ತು.
ನಗರದ ಪ್ರಮುಖ ರಸ್ತೆಗಳ ಫುಟ್ಪಾತ್ಗಳಲ್ಲಿ ಹೂವು, ತುಳಸಿ ಮಾಲೆ, ಶುಂಠಿ ಗಿಡ, ಕಬ್ಬು , ಮೂಡೆ, ಹಲಸಿನ ಮೂಡೆ ಇತ್ಯಾದಿಗಳ ಮಾರಾಟದ ಭರಾಟೆ ಕಂಡು ಬಂದಿತ್ತು. ಸೆಂಟ್ರಲ್ ಮಾರ್ಕೆಟ್ನ ಒಳಗೆ ಮತ್ತು ಹೊರ ಭಾಗದಲ್ಲಿ ಸುತ್ತಲೂ ವಿವಿಧ ತರಕಾರಿ, ಹೂವು, ಹಣ್ಣುಗಳ ಮಾರಾಟಗಾರರು ಇದ್ದು, ಸಾರ್ವಜನಿಕರು ಮುಗಿ ಬಿದ್ದು ಖರೀದಿಸುತ್ತಿರುವುದು ಕಂಡು ಬಂತು. ಜೈಲ್ ರೋಡ್ನಂತಹ ಕೆಲವು ಒಳ ರಸ್ತೆಗಳ ಬದಿ ಸ್ಥಳೀಯ ತರಕಾರಿಗಳ ಮಾರಾಟ ನಡೆಯಿತು.
ಹಬ್ಬದ ಪ್ರಯುಕ್ತ ತರಕಾರಿ ಮತ್ತು ಹೂವುಗಳ ಬೆಲೆ ಎಂದಿಗಿಂತ ಸ್ವಲ್ಪ ಜಾಸ್ತಿ ಇತ್ತು. ರಸ್ತೆ ಬದಿ ಮಾರಾಟಗಾರರ ಬಳಿ ಬೆಲೆ ಇನ್ನೂ ಜಾಸ್ತಿ ಇತ್ತು.
ಚಿತ್ರದುರ್ಗ, ಮೈಸೂರು, ತುಮಕೂರು, ಕುಣಿಗಲ್ ಮತ್ತಿತರ ಕಡೆಗಳಿಂದ ವಿವಿಧ ಹೂವುಗಳನ್ನು ತಂದು ರಸ್ತೆ ಬದಿ ರಾಶಿ ಹಾಕಿ ಮಾರಾಟ ಮಾಡಲಾಗುತ್ತಿತ್ತು. ಸೇವಂತಿಗೆ (ಬಿಳಿ ಮತ್ತು ಹಳದಿ), ರೈಮಾನ್ ಹೂವುಗಳಿಗೆ (ಒಂದು ಮಾರು ಉದ್ದದ ಮಾಲೆಗೆ) 80 ರೂ., ಚಾಂದಿನಿ 150 ರೂ., ಗೊಂಡೆ 100 ರೂ. ಗಳಂತೆ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದರು. ಮಾರ್ಕೆಟ್ ಒಳಗಡೆ ಸೇವಂತಿ ಹೂವು 50 ರೂ. ಗಳಿಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.
ಕಬ್ಬು ಮಾರಾಟ
ಒಂದು ಕಬ್ಬಿನ ಬೆಲೆ 40 ರೂ. ಇದ್ದು, 10 ಕಬ್ಬುಗಳು 350 ರೂಪಾಯಿಗೆ ಸಿಗುತ್ತಿತ್ತು. ಶುಂಠಿ ಗಿಡದ ಬೆಲೆ ಎರಡಕ್ಕೆ 20 ರೂ. ಹಾಗೂ 50 ಗಿಡಗಳಿಗೆ 600 ರೂ. ಇತ್ತು. ಮೂಡೆ 100 ರೂಪಾಯಿಗೆ 4 ಹಾಗೂ ಹಲಸಿನ ಎಲೆಯ ಮೂಡೆ 10 ರೂಪಾಯಿಗೆ 1ರಂತೆ ಮಾರುತ್ತಿರುವುದು ಕಂಡು ಬಂತು. ಬಾಳೆ ಎಲೆ 10ಕ್ಕೆ 20ರಿಂದ 30 ರೂ. ಇತ್ತು. ಇದರ ಜತೆಗೆ ಕೆಲವೊಂದು ಸ್ಥಳೀಯ ತರಕಾರಿಗಳ ಬೆಲೆ ಜಾಸ್ತಿ ಆಗಿದ್ದರೂ ಜನರು ಗೌಜಿಯಿಂದಲೇ ಖರೀದಿಸಿದರು. ಬೆಲೆ ಎಷ್ಟೇ ಆಗಿದ್ದರೂ ಜನರು ಮುಗಿ ಬಿದ್ದು ಹಬ್ಬದ ಖರೀದಿಯನ್ನು ಮಾಡಿದರು.
ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಎಲ್ಲರೂ ಕೈ ಜೋಡಿಸಬೇಕಾಗಿದೆ. ಗಣೇಶನ ಮೂರ್ತಿಯನ್ನು ತಯಾರಿಸಲು ಉಪಯೋಗಿಸುವಂತಹ ಲೋಹದ ಸಂಬಂಧ ಬಣ್ಣಗಳಲ್ಲಿ ಸೀಸ, ಇನ್ನಿತರ ವಿಷಕಾರಿ ರಾಸಾಯನಿಕಗಳಿರುತ್ತವೆ. ಪ್ರತಿ 100 ಗ್ರಾಂ ಲೋಹದ ಬಣ್ಣದಲ್ಲಿ 12 ಗ್ರಾಂ ಗಳಷ್ಟು ಸೀಸದ ಅಂಶ ಇದ್ದು, ಇದು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೀಗಾಗಿ ಇಂತಹ ಮೂರ್ತಿಗಳನ್ನು ಖರೀದಿ ಮಾಡದೆ ಇದ್ದರೆ ಉತ್ತಮ. ಜತೆಗೆ ಈ ಲೋಹ ಸಂಬಂಧಿ ಬಣ್ಣಗಳಿಂದ ಎಲ್ಲ ತರಹದ ಜೀವಿಗಳಿಗೂ ಅಪಾಯವಾಗುವುದು ಸಂಶೋಧನೆಗಳಿಂದ ತಿಳಿದು ಬಂದಿದೆ. ಹೀಗಾಗಿ ಮೂರ್ತಿಗಳ ವಿಸರ್ಜನೆಯಿಂದ ಕೆರೆ ಬಾವಿ ಕೊಳಗಳಲ್ಲಿ ನೀರು ಮಲಿನವಾಗದಂತೆ ಎಚ್ಚರ ವಹಿಸಬೇಕಾಗಿದೆ. ಬಕೇಟ್ಗಳಲ್ಲಿ ವಿಸರ್ಜಿಸಿ ಮನೆಯಲ್ಲಿ ಆಚರಿಸುವವರೂ ನೈಸರ್ಗಿಕ ಬಣ್ಣಗಳಿಂದ ತಯಾರಿಸಿರುವ ಮೂರ್ತಿಗಳನ್ನೇ ಕೊಂಡುಕೊಳ್ಳಿ. ಗಣೇಶನ ವಿಗ್ರಹಗಳನ್ನು ಗೊತ್ತು ಪಡಿಸಿದ ಜಾಗದಲ್ಲಿ, ಮನೆಗಳಲ್ಲಿ ಬಕೇಟ್ಗಳಲ್ಲಿ ವಿಸರ್ಜಿಸಿ. ಹೂ ಹಾಗೂ ಇನ್ನಿತರ ಸಾಮಗ್ರಿಗಳನ್ನು ಕೆರೆ, ನದಿ ಅಥವಾ ಸಮುದ್ರದ ನೀರಿಗೆ ಹಾಕಬೇಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ