ಜಿಲ್ಲಾ ಆಸ್ಪತ್ರೆ: ರಾಷ್ಟ್ರೀಯ ಗುಣಮಟ್ಟ ಪರಿಶೋಧನೆ ಸಂಪನ್ನ
ಅತ್ಯುತ್ತಮ ಸೇವೆ ನೀಡುತ್ತಿರುವ ವೈದ್ಯರು, ಸಿಬಂದಿಗೆ ಶಾಭಾಸ್ಗಿರಿ
Team Udayavani, Jun 15, 2019, 5:44 AM IST
ಕಾಸರಗೋಡು: ಕಾಸರಗೋಡು ಜಿಲ್ಲಾ ಆಸ್ಪತ್ರೆಯ ನಿರ್ವಹಣೆಯ ಗುಣಮಟ್ಟವನ್ನು ನಿರ್ಣಯಿ ಸಲು ಆಗಮಿಸಿದ ರಾಷ್ಟ್ರೀಯ ಗುಣಮಟ್ಟ ಪರಿಶೋಧನೆ (ನ್ಯಾಶನಲ್ ಕ್ವಾಲಿಟಿ ಅಶೂರೆನ್ಸ್ ಸಿಸ್ಟಂ) ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಿ ಸಂಪನ್ನಗೊಳಿಸಿದರು.
ಪರಿಶೋಧನೆ ನಡೆಸಿದ ಕೇಂದ್ರದ ತಜ್ಞರ ತಂಡ ಆಸ್ಪತ್ರೆಯ ನಿರ್ವಹಣೆ ಗುಣಮಟ್ಟದಲ್ಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಒಂದೇ ಒಂದು ವೈದ್ಯಕೀಯ ಕಾಲೇಜು ಇಲ್ಲದ ಕಾಸರಗೋಡು ಜಿಲ್ಲೆಯಲ್ಲಿ ಆರೋಗ್ಯ ಸಂರಕ್ಷಣೆ ರಂಗದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಜಿಲ್ಲಾ ಆಸ್ಪತ್ರೆಯಲ್ಲಿ ಅತ್ಯುತ್ತಮ ಸೇವೆಯನ್ನು ಚಿಕಿತ್ಸೆಯನ್ನು ನೀಡುತ್ತಿರುವ ವೈದ್ಯರನ್ನು, ಸಿಬಂದಿಗಳನ್ನು ಕೇಂದ್ರ ತಂಡ ಅಭಿನಂದಿಸಿದೆ.
ಕೇಂದ್ರ ಆರೋಗ್ಯ ಇಲಾಖೆ ನಿಯೋಗಿಸಿದ ಡಾ|ಕಣಿಕ ಜೈನ್(ದೆಹಲಿ), ಡಾ|ಪ್ರದೀಪ್ ಕುಮಾರ್ ಶರ್ಮ(ಪಂಜಾಬ್), ಪಾ|ರಮೇಶ್ ಚಂದರ ಆರ್ಯ (ಹರಿಯಾಣ) ಒಳಗೊಂಡ ತಜ್ಞ ವೈದ್ಯರ ತಂಡ ಕಾಸರಗೋಡು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಗುಣಮಟ್ಟವನ್ನು ಪರಿಶೋಧಿಸಿತು. ಮೂರು ದಿನಗಳಲ್ಲಿ ಸುಮಾರು 1,500 ಕ್ಕೂ ಅಧಿಕ ಜನರನ್ನು ಈ ತಂಡ ತಪಾಸಣೆ ನಡೆಸಿತು.
ಜಿಲ್ಲಾ ಆಸ್ಪತ್ರೆ ವಿಭಾಗದಲ್ಲಿ ರಾಜ್ಯದಲ್ಲೇ ಕಾಸರಗೋಡು ಜಿಲ್ಲಾ ಆಸ್ಪತ್ರೆಯನ್ನು ಮಾತ್ರವೇ ಪರಿಶೋಧನೆಗೆ ಆಯ್ಕೆ ಮಾಡಿದೆ. ಗುಣಮಟ್ಟ ಪರಿಶೋಧಿಸಿದ ತಂಡ ಈ ಆಸ್ಪತ್ರೆಯನ್ನು ಉತ್ತಮ ಆಸ್ಪತ್ರೆಯಾಗಿ ಆಯ್ಕೆ ಮಾಡಿದರೆ ಪ್ರತೀ ವರ್ಷ ಈ ಆಸ್ಪತ್ರೆಗೆ ಕೇಂದ್ರ ಸರಕಾರದಿಂದ 40 ಲಕ್ಷ. ರೂ. ಅನುದಾನ ಲಭಿಸಲಿದೆ.
ಕೇಂದ್ರ ಸರಕಾರದಿಂದ ಅನುದಾನ ಲಭಿಸಿದಲ್ಲಿ ಇನ್ನಷ್ಟು ಉತ್ತಮ ಚಿಕಿತ್ಸೆ, ಸೇವೆಯನ್ನು ನೀಡಲು ಸಾಧ್ಯವಾಗಬಹುದು.
ಉತ್ತಮ ಗುಣಮಟ್ಟದ ಆಸ್ಪತ್ರೆಗಳ ಸಾಲಿಗೆ ಈ ಆಸ್ಪತ್ರೆಯನ್ನು ಆಯ್ಕೆ ಮಾಡುವ ನಿರೀಕ್ಷೆಯಿದೆ ಎಂದು ಆರ್.ಎಂ.ಒ. ಡಾ| ರಿಜಿತ್ ಕೃಷ್ಣನ್ ಭರವಸೆ ವ್ಯಕ್ತಪಡಿಸಿದ್ದಾರೆ.
ತೃಪ್ತಿ ತಂದಿದೆ
ಕೇಂದ್ರ ಸರಕಾರದಿಂದ 40 ಲಕ್ಷ ರೂ. ಅನುದಾನ ಲಭಿಸಿದಲ್ಲಿ ಆಸ್ಪತ್ರೆಯಲ್ಲಿ ಇನ್ನೂ ಉತ್ತಮ ರೀತಿಯಲ್ಲಿ ಚಿಕಿತ್ಸೆ ಹಾಗೂ ಸೇವೆಯನ್ನು ಕಲ್ಪಿಸಲು ಸಾಧ್ಯವಾಗ ಲಿದೆ. ಕೇಂದ್ರದ ತಂಡ ಕಳೆದ ಮೂರು ದಿನಗಳಿಂದ ನಡೆಸಿದ ಪರಿಶೋಧನೆ ಯಲ್ಲಿ ತೃಪ್ತಿ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಈ ಆಸ್ಪತ್ರೆ ಉತ್ತಮ ಗುಣಮಟ್ಟದ ಆಸ್ಪತ್ರೆ ಎಂಬ ಯಾದಿಯಲ್ಲಿ ಸೇರ್ಪಡೆಗೊಳ್ಳಲು ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಕೇಂದ್ರ ತಂಡ ಶಿಫಾರಸು ಮಾಡಬೇಕು.
– ಡಾ| ಎಸ್. ಸ್ಟಾ ನ್ಲಿ
ಆಸ್ಪತ್ರೆ ಸುಪರಿಂಟೆಂಡೆಂಟ್.