ಜಿಲ್ಲೆಯ 3ನೇ ಅತ್ಯುತ್ತಮ ‘ಪ್ಲಟೂನ್’ ಆಗಿ ನವಜೀವನ ಸ್ಟೂಡೆಂಟ್ ಪೊಲೀಸ್ ತಂಡ ಆಯ್ಕೆ
Team Udayavani, May 5, 2019, 12:46 PM IST
ಬದಿಯಡ್ಕ : ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಸ್ಟೂಡೆಂಟ್ ಪೊಲೀಸ್ ತಂಡವು ಕಾಸರಗೋಡು ಜಿಲ್ಲೆಯ ಮೂರನೇ ಅತ್ಯುತ್ತಮ ‘ಪ್ಲಟೂನ್’ ಆಗಿ ಹೊರಹೊಮ್ಮಿದೆ. ಉದಿನೂರು ಜಿ.ಎಚ್.ಎಸ್.ನಲ್ಲಿ 5 ದಿನಗಳ ಕಾಲ ನಡೆದ ಬೇಸಿಗೆ ಶಿಬಿರದಲ್ಲಿ ಒಟ್ಟು 27 ತಂಡಗಳು ಭಾಗವಹಿಸಿದ್ದವು. ನವಜೀವನ ಶಾಲೆ ವಿದ್ಯಾರ್ಥಿ ಪೊಲೀಸ್ ತಂಡವು ಶ್ರೇಷ್ಠಮಟ್ಟದ ಪ್ರದರ್ಶನವನ್ನು ನೀಡಿ ಗಮನ ಸೆಳೆದು ಮೂರನೇ ಸ್ಥಾನವನ್ನು ಪಡೆದುಕೊಂಡಿತು.
2016ರಲ್ಲಿ ನವಜೀವನ ಶಾಲೆಯಲ್ಲಿ ಸ್ಟೂಡೆಂಟ್ ಪೊಲೀಸ್ ತಂಡವು ಅಸ್ತಿತ್ವಕ್ಕೆ ಬಂದಿತ್ತು. ಈ ತಂಡದ ಮೂಲಕ ಶಾಲೆಯಲ್ಲಿ ಶಿಸ್ತು, ಶುಚಿತ್ವ ಹಾಗೂ ಸಮಾಜಮುಖಿ ಚಟುವಟಿಕೆಗಳು ನಿರಂತರವಾಗಿ ನಡೆದು ಬರುತ್ತಿತ್ತು. ಕಳೆದ ವರ್ಷವೂ ನವಜೀವನ ಶಾಲೆಯ ತಂಡವು ಪ್ರಶಸ್ತಿಯನ್ನು ಪಡೆದುಕೊಂಡಿದೆ.
ತರಬೇತುದಾರರಾಗಿ ಸಿ.ಪಿ.ಒ. ಕೃಷ್ಣ ಯಾದವ್, ಎ.ಸಿ.ಪಿ.ಒ. ವನಜ ಕುಮಾರಿ, ಬದಿಯಡ್ಕ ಪೊಲೀಸ್ ಠಾಣೆಯ ಡಿ.ಐ. ಆಗಿ ಶಿವರಾಮ, ಡಬ್ಲ್ಯು.ಡಿ.ಐ. ಆಗಿ ಶ್ರುತಿ ತರಬೇತು ನೀಡಿದ್ದರು. ತಂಡದ ಸಾಧನೆಗೆ ಶಾಲಾ ವ್ಯವಸ್ಥಾಪಕ ಮಂಡಳಿ, ರಕ್ಷಕ ಶಿಕ್ಷಕ ಸಂಘ, ಶಾಲಾ ಮುಖ್ಯೋಪಾಧ್ಯಾಯಿನಿ ತಂಗಮಣಿ ಹಾಗೂ ಅಧ್ಯಾಪಕ ವೃಂದವು ಅಭಿನಂದನೆಯನ್ನು ಸಲ್ಲಿಸಿದೆ.