ವರ್ಕಾಡಿ ಗ್ರಾ.ಪಂ.: ವಾರ್ಡ್ ಮಟ್ಟದ ಕೃಷಿಕರ ಸಭೆ, ಸಮ್ಮಾನ
Team Udayavani, Jul 13, 2019, 5:50 AM IST
ವರ್ಕಾಡಿ: ಕೇರಳ ಕೃಷಿ ಅಭಿವೃದ್ಧಿ ಕ್ಷೇಮ ಇಲಾಖೆಯ ವರ್ಕಾಡಿ ಗ್ರಾ.ಪಂ. ನ ಜನಪರ ಯೋಜನೆ 2019-20 ರ ಕಾಲಾವಧಿಯಲ್ಲಿ ವಿವಿಧ ಯೋಜನೆಗಳ ಬಗ್ಗೆ ಕೃಷಿಕರಲ್ಲಿ ಜಾಗೃತಿಯನ್ನು ಮೂಡಿಸಿ ತನ್ಮೂಲಕ ಕೃಷಿ ವಲಯವನ್ನು ಉನ್ನತಿಗೇರಿಸುವ ಉದ್ದೇಶದಿಂದ ಕೇರಳ ಕೃಷಿ ಅಭಿವೃದ್ಧಿ ಕ್ಷೇಮ ಇಲಾಖೆ ಹಾಗೂ ವರ್ಕಾಡಿ ಗ್ರಾ.ಪಂ. ಜಂಟಿ ಆಶ್ರಯದಲ್ಲಿ ವಾರ್ಡು ಮಟ್ಟದಲ್ಲಿ ಆಯೋಜಿಸಲಾಗಿದ್ದ ಕೃಷಿಕರ ಸಭೆಗಳು ಸಮಾಪ್ತಿಗೊಂಡಿತು.
ಸಭೆಗಳು ನಡೆದ ಸ್ಥಳಗಳಲ್ಲಿ ಕೃಷಿಕರಿಗೆ ಅವರು ಬೆಳೆದ ಕೃಷಿ ಉತ್ಪನ್ನಗಳನ್ನು ಅವರದೇ ಜವಾಬ್ದಾರಿಯಲ್ಲಿ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಸೌಕರ್ಯವನ್ನು ಏರ್ಪಡಿಸಲಾಗಿತ್ತು. ಈ ಮೂಲಕ ಕೃಷಿ ಅಭಿವೃದ್ಧಿ ಯೋಜನೆಯಲ್ಲಿ ಕೃಷಿಕರ ಪಾಲುದಾರಿಕೆಯನ್ನು ದೃಢಗೊಳಿಸುವ ಹಾಗೂ ಸ್ಥಳೀಯ ಕೃಷಿಕರು ಅನುಭವಿಸುತ್ತಿರುವ ಸಮಸ್ಯೆ ಗಳಿಗೆ ಪರಿಹಾರವನ್ನು ಕಂಡು ಕೊಳ್ಳುವಲ್ಲಿ ಅವರ ಅಭಿಪ್ರಾಯಗಳನ್ನು ಹಾಗೂ ನಿರ್ದೇಶನಗಳನ್ನು ಪಡೆದು ಸಭೆಯಲ್ಲಿ ಸೂಕ್ತವಾದ ಸಲಹೆಗಳನ್ನು ಕೂಡಾ ನೀಡಲಾಯಿತು.ಬಾಕ್ರಬೈಲ್ ಎಯುಪಿ ಶಾಲೆಯಲ್ಲಿ ನಡೆದ ಕೃಷಿಕರ ಸಭೆಯನ್ನು ವರ್ಕಾಡಿ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ. ಉದ್ಘಾಟಿಸಿದರು.
ಪಂ. ಸದಸ್ಯೆ ಮೈಮೂನಾ ಅಹ್ಮದ್ ಅಧ್ಯಕ್ಷತೆ ವಹಿಸಿದರು. ಕೃಷಿ ಅಧಿಕಾರಿ ಶಫೀಕ್ ಎಂ. ಹಾಗೂ ವರ್ಕಾಡಿ ಕೃಷಿ ವಿಜ್ಞಾನ ಕೇಂದ್ರದ ಪ್ರೊ| ಅನೂಪ್ ಅವರು ಕೃಷಿ ವಲಯವನ್ನು ಯಾವ ರೀತಿಯಲ್ಲಿ ಅಭಿವೃದ್ಧಿ ಪಡಿಸಬಹುದು ಎಂಬುದರ ಬಗ್ಗೆ ಸಮಗ್ರವಾದ ಮಾಹಿತಿ ನೀಡಿದರು.
ವರ್ಕಾಡಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಅಬೂಬಕ್ಕರ್ ಪಾತೂರು, ಬಾಕ್ರಬೈಲ್ ಶಾಲೆಯ ಮುಖ್ಯೋಪಾಧ್ಯಾಯ ಪಿ.ಬಿ. ಶ್ರೀನಿವಾಸ್ ರಾವ್, ಸುರೇಶ್, ಎಂಜಿನೀಯರ್ ಅನ್ಸಾರ್ ಆನೆಕಲ್ಲು , ಮುರಳೀಕೃಷ್ಣ, ಕೃಷಿಕರಾದ ವಸಂತ ಭಂಡಾರಿ, ಕೆ. ವಿಠಲ್ ನಾಯ್ಕ, ನೇಮಿರಾಜ ಶೆಟ್ಟಿ, ರಮೇಶ್ ಬಾಕ್ರಬೈಲ್ ಸೇರಿದಂತೆ ಹಲವರು ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು. ವೇದಿಕೆಯಲ್ಲಿ ಕೃಷಿ ವಲಯದಲ್ಲಿ ಉತ್ತಮ ಸಾಧನೆಗೈದ ಕೃಷಿಕರನ್ನು ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು.