ಶಾಲೆ, ಕಾಲೇಜು, ಚರ್ಚ್, ಸಂಘಟನೆಗಳಿಂದ ಮಳೆಕೊಯ್ಲು ಅರಿವು
'ಮನೆಮನೆಗೆ ಮಳೆಕೊಯ್ಲು' ಉದಯವಾಣಿ ಅಭಿಯಾನದ ಯಶಸ್ಸು
Team Udayavani, Aug 2, 2019, 10:55 AM IST
ಪದ್ಮಶಾಲಿ ಯುವ ವೇದಿಕೆಯಿಂದ ಮಳೆಕೊಯ್ಲು ಕಾರ್ಯಾಗಾರ ಜರಗಿತು.
ಮಹಾನಗರ: ಪದ್ಮಶಾಲಿ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ವತಿಯಿಂದ ಬೋಳೂರು ಮಠದಕಣಿ ರಸ್ತೆ ವೀರಭದ್ರನಗರದಲ್ಲಿ ನಡೆದ ‘ಆಟಿಡೊಂಜಿ ಎಂಕ್ಲೆನ ಐತಾರ’ ಕಾರ್ಯಕ್ರಮದಲ್ಲಿ ಮಳೆಕೊಯ್ಲು ಕುರಿತು ಮಾಹಿತಿ ವಿನಿಮಯ ರವಿವಾರ ನಡೆಯಿತು.
‘ಉದಯವಾಣಿ’ ನಡೆಸು ತ್ತಿರುವ ‘ಮನೆಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಣೆಗೊಂಡು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮಾಹಿತಿ, ಪ್ರಾತ್ಯಕ್ಷಿಕೆ
ಮೇರಿಹಿಲ್ನ ಎಂಜಿನಿಯರ್ ಭರತ್ ಜೆ. ಅವರು ಮಳೆಕೊಯ್ಲು ಅಳವಡಿಕೆ, ಸರಳ ವಿಧಾನಗಳು, ಮಳೆಕೊಯ್ಲು ಮೂಲಕ ನೀರಿಂಗಿಸುವಿಕೆಯಿಂದ ಭವಿಷ್ಯಕ್ಕಾಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು. ತಮ್ಮದೇ ಮನೆಯಲ್ಲಿ ಮಳೆಕೊಯ್ಲು ವಿಧಾನ ಅಳವಡಿಸಿದ ಪ್ರಾತ್ಯಕ್ಷಿಕೆಗಳನ್ನು ತೋರಿಸಿದರು.
ಪದ್ಮಶಾಲಿ ಯುವ ವೇದಿಕೆ ಅಧ್ಯಕ್ಷ ಲೋಕೇಶ್ ಹರಿಪದವು, ಮಹಿಳಾ ವೇದಿಕೆ ಅಧ್ಯಕ್ಷೆ ಶುಭಾ ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು. ಸುಮಾರು 200ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.
ಆ. 4: ಗುರುಪುರ ಚರ್ಚ್ನಲ್ಲಿ ಮಳೆಕೊಯ್ಲು
ಗುರುಪುರ ಲೇಡಿ ಪೊಂಪೈ ಚರ್ಚ್ನಲ್ಲಿ ‘ಉದಯವಾಣಿ’ ಸಹಯೋಗದೊಂದಿಗೆ ಮಳೆಕೊಯ್ಲು ಮಾಹಿತಿ ಕಾರ್ಯಾಗಾರ ಆ. 4ರಂದು ಬೆಳಗ್ಗೆ 8.30ಕ್ಕೆ ನಡೆಯಲಿದೆ. ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರ ಕಲ್ಬಾವಿ ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ರವಿವಾರದ ಪ್ರಾರ್ಥನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಿದ್ದು, ಅವರಿಗೆ ಈ ವೇಳೆ ಮಳೆಕೊಯ್ಲು ಬಗ್ಗೆ ಸೂಕ್ತ ಅರಿವು-ಉತ್ತೇಜನ ನೀಡಿದರೆ ಅದು ಚರ್ಚ್ ವ್ಯಾಪ್ತಿಯ ಎಲ್ಲ ಕ್ರಿಶ್ಚಿಯನ್ ಸಮುದಾಯದ ಮನೆಗಳನ್ನು ಬಹಳ ಪರಿಣಾಮಕಾರಿಯಾಗಿ ತಲುಪುತ್ತದೆ.