ಪಂಚ ಸಮರಕ್ಕೆ ಕಳೆ : ಪ. ಬಂಗಾಲದಲ್ಲಿ ಟಿಎಂಸಿಯಿಂದ 291 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
Team Udayavani, Mar 6, 2021, 7:20 AM IST
ಹೊಸದಿಲ್ಲಿ : ಪಂಚ ರಾಜ್ಯಗಳ ಚುನಾವಣೆ ಕಣ ರಂಗೇರುತ್ತಿದ್ದು, ಪಶ್ಚಿಮ ಬಂಗಾಲದಲ್ಲಿ ಟಿಎಂಸಿ 291 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇತ್ತೀಚೆಗಷ್ಟೇ ಟಿಎಂಸಿ ಬಿಟ್ಟು ಬಿಜೆಪಿ ಸೇರಿರುವ ನಂದಿಗ್ರಾಮದ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಸ್ಪರ್ಧಿಸಲಿದ್ದಾರೆ.
ಅಸ್ಸಾಂನಲ್ಲಿ ಬಿಜೆಪಿ 70 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಸಿಎಂ ಸರ್ಬಾನಂದ ಸೋನೊವಾಲ್ ಅವರು ಮಜುಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಬಿಜೆಪಿ ಮಿತ್ರ ಪಕ್ಷಗಳಾದ ಅಸ್ಸಾಂ ಗಣ ಪರಿಷದ್ಗೆ 26 ಮತ್ತು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ಗೆ 8 ಸ್ಥಾನಗಳನ್ನು ಬಿಟ್ಟುಕೊಟ್ಟಿದೆ.
ತ.ನಾಡಿನಲ್ಲಿ ಎಐಎಡಿಎಂಕೆ ಆರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಇ. ಪಳನಿಸ್ವಾಮಿ ಅವರು ಇಡಪ್ಪಾಡಿಯಿಂದ, ಡಿಸಿಎಂ ಪನೀರ್ಸೆಲ್ವಂ ಅವರು ಬೋಡಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ.
ರಂಗೇರಿದ ಪ. ಬಂಗಾಲ ಕಣ
ಶುಕ್ರವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಮಮತಾ ಬ್ಯಾನರ್ಜಿ ನಂದಿಗ್ರಾಮದಿಂದ ಸ್ಪರ್ಧಿಸುವ ಬಗ್ಗೆ ಘೋಷಣೆ ಮಾಡಿದರು. ಮಾ. 9ರಂದು ನಂದಿಗ್ರಾಮಕ್ಕೆ ಭೇಟಿ ನೀಡಿ ಮಾ. 10ರಂದು ನಾಮಪತ್ರ ಸಲ್ಲಿಸುವುದಾಗಿಯೂ ಘೋಷಿಸಿದರು.
ಮಿಥುನ್ ಚಕ್ರವರ್ತಿ ಬಿಜೆಪಿಗೆ?
ಮಾ. 7ರಂದು ಪ್ರಧಾನಿ ಮೋದಿ ಕೋಲ್ಕತಾದಲ್ಲಿ ರ್ಯಾಲಿ ನಡೆಸಲಿದ್ದು, ಹಿರಿಯ ನಟ ಮಿಥುನ್ ಚಕ್ರವರ್ತಿ ಉಪಸ್ಥಿತರಿರಲಿದ್ದಾರೆ. ಇತ್ತೀಚೆಗಷ್ಟೇ ಮಿಥುನ್ ಅವರನ್ನು ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ಭೇಟಿ ಮಾಡಿ ಚರ್ಚಿಸಿದ್ದರು.
ಕೇರಳ ಸಿಎಂಗೆ ಸಂಕಟ?
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಕೇರಳದ ವಿದೇಶಿ ಹಣ ಅಕ್ರಮ ಸಾಗಾಟ ಪ್ರಕರಣದಲ್ಲಿ ಸಿಎಂ ಪಿಣರಾಯಿ ವಿಜಯನ್ ಅವರ ಹೆಸರು ಕೇಳಿಬಂದಿದೆ. ಪ್ರಕರಣದಲ್ಲಿ ಬಂಧಿತೆ ಸ್ವಪ್ನಾ ಸುರೇಶ್, ಸಿಎಂ ಪಿಣರಾಯಿ, ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ಅವರ ಹೆಸರುಗಳನ್ನು ಉಲ್ಲೇಖೀಸಿದ್ದಾರೆ.
ಲಿಂಬಾವಳಿಗೆ ತುರ್ತು ಕರೆ
ತುರ್ತು ಬುಲಾವ್ ಬಂದ ಹಿನ್ನೆಲೆಯಲ್ಲಿ ಸಚಿವ ಅರವಿಂದ ಲಿಂಬಾವಳಿ ದಿಲ್ಲಿಗೆ ತೆರಳಿದ್ದಾರೆ. ಪ. ಬಂಗಾಲ ಚುನಾವಣೆ ಜವಾಬ್ದಾರಿಯನ್ನು ವರಿಷ್ಠರು ಲಿಂಬಾವಳಿ ಅವರಿಗೆ ವಹಿಸಿದ್ದಾರೆ. ಚುನಾವಣೆ ಕಾರ್ಯ ತಂತ್ರವನ್ನು ಹೆಣೆಯಲೆಂದೇ ಅವರನ್ನು ದಿಲ್ಲಿಗೆ ಕರೆಸಲಾಗಿದೆ ಎನ್ನಲಾಗಿದೆ.